ADVERTISEMENT

ಪಕ್ಷಪಾತದ ವರದಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST

‘ವೀರಶೈವರಿಂದ ಪುರಾಣ, ಲಿಂಗಾಯತರಿಂದ ದಾಖಲೆ’ (ಪ್ರ.ವಾ., ಫೆ. 4) ಸುದ್ದಿಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಘೋಷಣೆಗೆ ಸಂಬಂಧಿಸಿದಂತೆ ಸರ್ಕಾರದ ಸಮಿತಿಯ ಮುಂದೆ ಎರಡೂ ಪಂಗಡದವರು ಮಂಡಿಸಿರುವ ವಾದಗಳ ಬಗ್ಗೆ ವಿವರಿಸಲಾಗಿದೆ. ಈ ವರದಿಯ ತಲೆಬರಹವೂ ಕುಚೋದ್ಯದಿಂದ ಕೂಡಿದೆ.

ಜ. 25 ಮತ್ತು ಫೆ. 2ರಂದು ನಾವು ಸಮಿತಿಯ ಮುಂದೆ ಹಾಜರಾಗಿ, ವಿವಿಧ ವಿಶ್ವವಿದ್ಯಾಲಯಗಳು ಪ್ರಕಟಿಸಿದ ಗ್ರಂಥಗಳ ಆಯ್ದ ಭಾಗಗಳು ಮತ್ತು ಸುಮಾರು 600 ಪುಟಗಳಷ್ಟು ಐತಿಹಾಸಿಕ ದಾಖಲೆಗಳನ್ನು ಒದಗಿಸಿದ್ದೇವೆ. ತಮ್ಮ ಪತ್ರಿಕೆಯ ವರದಿಯಲ್ಲಿ ಈ ಕುರಿತ ಮಾಹಿತಿ ಇಲ್ಲ.

ಈ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮ ಗಮನಕ್ಕೆ ಕೆಲವು ಅಂಶಗಳನ್ನು ತರಲು ಬಯಸುವೆ: ತಮ್ಮ ಪತ್ರಿಕೆಯೇ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದು ತೀರ್ಪು ನೀಡಿರುವಂತೆ ವರದಿ ಮಾಡುತ್ತಿದೆ. ಅಲ್ಲದೆ ವೀರಶೈವ ಮತ್ತು ಲಿಂಗಾಯತ ಎರಡೂ ಸ್ವತಂತ್ರ ಮತ್ತು ವಿಭಿನ್ನ ಎನ್ನುವ ರೀತಿಯಲ್ಲಿ ಮಾಹಿತಿಯನ್ನು ಪ್ರಕಟಿಸುತ್ತಿದೆ. ಇದು ನಿಷ್ಪಕ್ಷಪಾತವಾಗಿ ವರದಿ ಮಾಡಬೇಕೆಂಬ ಪತ್ರಿಕಾ ಧರ್ಮಕ್ಕೆ ವ್ಯತಿರಿಕ್ತವಾದುದು ಎಂದು ವಿಷಾದದಿಂದ ಹೇಳುತ್ತಿದ್ದೇವೆ.

ADVERTISEMENT

ಅಲ್ಲದೆ ತಮ್ಮ ಪತ್ರಿಕೆಯಲ್ಲಿ ಚಿತ್ರದುರ್ಗದ ಮುರುಘಾ ಶರಣರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ಧರಾಮಯ್ಯ ಮತ್ತು ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ. ಜಾಮದಾರ ಅವರಿಗೆ ಲಿಂಗಾಯತ ಧರ್ಮದ ಪರ ಪ್ರಚಾರ ನಡೆಸಲು ಅವಕಾಶ ನೀಡುತ್ತಿರುವ ಬಗ್ಗೆ ನಮಗೆ ತೀವ್ರ ಆಕ್ಷೇಪವಿದೆ.

ಸಾರ್ವಜನಿಕ ಜೀವನದಲ್ಲಿ ನಶಿಸುತ್ತಿರುವ ಪ್ರಜಾತಾಂತ್ರಿಕ ಮೌಲ್ಯಗಳು, ಮಾಧ್ಯಮಗಳನ್ನೂ ಬಿಟ್ಟಿಲ್ಲವೆಂಬುದುಕಹಿ ಸತ್ಯವಾದರೂ, ‘ಪ್ರಜಾವಾಣಿ’ಯು ಅದಕ್ಕೆ ಹೊರತಾಗಿರಲಿ ಎಂಬುದು ನಿರಂತರ ನಾಲ್ಕು ದಶಕಗಳ ಅವಿಚ್ಛಿನ್ನ ನಿಷ್ಠ ಓದುಗ ಅಭಿಮಾನಿಗಳ ಸದಿಚ್ಛೆ.

ಬಿ.ಎಸ್‌. ನಟರಾಜ್‌, ಮಹಾದೇವ ಪ್ರಸಾದ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.