ವಿಜಯಪುರ: ‘ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಯಾರ್ಯಾರಿದ್ದೀರಿ...’ ಎಂದು ವಿಧಾನಪರಿಷತ್ನ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಈಚೆಗೆ ವಿಜಯಪುರದಲ್ಲಿ ನಡೆದ ಹಿಂದುಳಿದ ವರ್ಗದ ಮೋರ್ಚಾ ಸಭೆಯಲ್ಲಿ ಕೇಳುತ್ತಿದ್ದಂತೆ, ಹಲವು ಆಕಾಂಕ್ಷಿಗಳು ಉತ್ಸಾಹದಿಂದ ಎದ್ದು ನಿಂತರು.
ಎದ್ದುನಿಂತ ಸ್ಪರ್ಧಾಕಾಂಕ್ಷಿಗಳ ದಂಡನ್ನು ನೋಡಿದ ಈಶ್ವರಪ್ಪ, ‘ನೋಡ್ರಪ್ಪಾ ನಮ್ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬರಲಿದ್ದಾರೆ. ಹಿಂದುಳಿದ ವರ್ಗದ ಜನರನ್ನು ಹೆಚ್ಚಿಗೆ ಸೇರಿಸಿ ಶಕ್ತಿ ಪ್ರದರ್ಶಿಸಬೇಕು. ನೀವು ಎಷ್ಟು ಜನರನ್ನು ಸಮಾವೇಶಕ್ಕೆ ಕರೆ ತರ್ತೀರಾ. ಎಷ್ಟು ಗಾಡಿ ಮಾಡ್ತೀರಾ’ ಎಂದು ಪ್ರಶ್ನಿಸುತ್ತಿದ್ದಂತೆ ಆಕಾಂಕ್ಷಿಗಳು ಕಕ್ಕಾಬಿಕ್ಕಿಯಾದರು.
‘ಇನ್ನೊಂದ್ ಮಾತ್ರಪ್ಪ... ದೇವರಾಣೆ, ಟಿಕೆಟ್ ನನ್ ಕೈಲಿಲ್ಲ. ಎಲ್ವೂ ನಮ್ ಅಮಿತ್ ಶಾ ಕೈಲಿವೆ. ನಾ ಸುಮ್ನೆ ನಿಮ್ಮನ್ ಹುರಿದುಂಬಿಸೋಕೆ ಕೇಳ್ದೆ. ನೀವೇನಾದ್ರೂ ಬಯೊಡೇಟಾ ಕೊಟ್ರೆ ಒಂದ್ ಸಾರಿ ನೋಡಿ, ‘ಚಲೋ ಐತಿ. ಮಾಡೋಣ’ ಅಂತೀನಿ ಅಷ್ಟೇ. ಇದ್ನೇ ನಂಬ್ಕೋಬ್ಯಾಡ್ರೀ...’ ಎನ್ನುತ್ತಿದ್ದಂತೆ ಸ್ಪರ್ಧಾಕಾಂಕ್ಷಿಗಳು ಪೆಚ್ಚು ಮೋರೆ ಹಾಕಿದ್ರೆ, ಕಾರ್ಯಕರ್ತರು, ಪದಾಧಿಕಾರಿಗಳು ಶಿಳ್ಳೆ ಹೊಡೆದರು.
ಸಭೆಯ ಹಿಂಬದಿಯಲ್ಲಿ ಕೂತಿದ್ದ ಹಿರಿಯ ಕಾರ್ಯಕರ್ತರೊಬ್ಬರು ‘ಅಲ್ರೋ ಇನ್ನೂ ಅಂವಂದಾ ಟಿಕೆಟ್ ಗಟ್ಟಿಯಾಗಿಲ್ಲ. ದಿವ್ಸಾ ಬಡದಾಡ್ತವಾ. ಅಂಥದ್ರಲ್ಲೀ ನಿಮ್ಗ ಅಂವ ಏನ್ ಕೊಡಸ್ತಾನ... ಕುಂದರ್ರೋ...’ ಎನ್ನುತ್ತಿದ್ದಂತೆ ಸುತ್ತಮುತ್ತ ಕೂತಿದ್ದವರೆಲ್ಲಾ ನಗೆಗಡಲಲ್ಲಿ ತೇಲಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.