ವಿಜಯಪುರ: ‘ವಿವಿಧ ಅಕಾಡೆಮಿ, ಪ್ರತಿಷ್ಠಾನಗಳು ತಮ್ಮ ಪ್ರಶಸ್ತಿಯನ್ನು ಪ್ರದಾನ ಮಾಡಲು ನನ್ನನ್ನೇ ಕರೆಯಲು ಆರಂಭಿಸಿದ ಮೇಲೆ ನಂಗ ಪ್ರಶಸ್ತಿ ಬರೋ ಕಾಲ ಮುಗ್ದೋಯ್ತು. ಇನ್ನೇನಿದ್ದರೂ ನಾನೇ ಕೊಡೋ ಕಾಲ ಬಂದಾಯ್ತು ಅಂದ್ಕೊಂಡು ಆಸೆಯನ್ನೇ ಬಿಟ್ಟಿದ್ದೆ. ಆದ್ರೇ ಇದೊಂಥರಾ ವಿಚಿತ್ರ. ಎರಡು ವರ್ಷಗಳ ಹಿಂದೆ ಹಲಸಂಗಿ ಗೆಳೆಯರ ಪ್ರತಿಷ್ಠಾನ ನೀಡುವ ಪ್ರಶಸ್ತಿ ಪ್ರದಾನ ಮಾಡಲು ವಿಜಯಪುರಕ್ಕೆ ಬಂದಿದ್ದೆ. ಇಂದು ಅದೇ ಪ್ರತಿಷ್ಠಾನದ ಪ್ರಶಸ್ತಿಗೆ ನಾನು ಭಾಜನನಾಗಿರುವೆ...’
ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನವು 2016ನೇ ಸಾಲಿನ ಪ್ರಶಸ್ತಿಯನ್ನು ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅವರಿಗೆ ನೀಡಿ ಪುರಸ್ಕರಿಸಿದ ಸಂದರ್ಭ ಅದು. ಹಿಂದಿನ ಘಟನಾವಳಿ ಸ್ಮರಿಸಿಕೊಂಡ ಗಿರಡ್ಡಿ, ತಮ್ಮ ಮಾತಿನ ನಡುವೆ ಈ ಮೇಲಿನ ವಾಕ್ಯಗಳನ್ನು ಹೇಳುತ್ತಿದ್ದಂತೆ ನೆರೆದಿದ್ದ ಸಭಿಕರು ಹುಬ್ಬೇರಿಸಿದರು !
‘ಇದು ಇಂಥ ಮೊದಲ ಅನುಭವ ಅಲ್ಲ. ನಾಲ್ಕೈದು ಕಡೆ ಇದೇ ಅನುಭವವಾಗಿದೆ. ಈ ಹಿಂದೆ ಕುವೆಂಪು ಭಾಷಾ ಭಾರತಿ ಅನುವಾದ ಅಕಾಡೆಮಿಯವರು ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲು ನನ್ನನ್ನು ಕರೆದಿದ್ದರು. ನಂತರ ನನಗೇ ಆ ಪ್ರಶಸ್ತಿ ಕೊಟ್ಟರು. ಇಂತಹ ಘಟನೆಗಳು ಆಗಾಗ ಮರುಕಳಿಸಿದ್ದರಿಂದ ಈಗ ನಾನು ಹೊಸ ಆಸೆ, ನಿರೀಕ್ಷೆಯಿಂದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದೇನೆ’ ಎಂದು ಮಾರ್ಮಿಕ ನುಡಿಗಳನ್ನಾಡುತ್ತಿದ್ದಂತೆ ಸಭಾಂಗಣದಲ್ಲಿ ನಗೆ ಬುಗ್ಗೆಯುಕ್ಕಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.