ಬೆಂಗಳೂರು: ಚಡ್ಡಿ ಹಾಕೊಂಡು ಹೊಲ ಊಳ್ತಿದ್ರೆ ಫಸ್ಟ್ ಕ್ಲಾಸ್ ಎ.ಸಿ...ಹೀಗೆಂದು ಬಣ್ಣಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ.
ಅದು ‘ನೋಟು ರದ್ದತಿಯಿಂದ ಸಹಕಾರ ಸಂಘಗಳ ಮೇಲಾದ ಪರಿಣಾಮಗಳು’ ಕುರಿತ ವಿಚಾರ ಸಂಕಿರಣ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಚಿವಾಲಯ ಸಹಕಾರ ಸಂಘ ಈ ಕಾರ್ಯಕ್ರಮ ಏರ್ಪಡಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಒಳ್ಳೆ ಮೂಡ್ನಲ್ಲಿದ್ದರು. ಮಾತಿನ ಮಧ್ಯೆ ಕೃಷಿ ಸಾಲ ಮನ್ನಾ ಬಗ್ಗೆ ಪ್ರಸ್ತಾಪಿಸಿದರು.
‘ರೈತರ ಕಷ್ಟ ಚೆನ್ನಾಗಿ ಗೊತ್ತಿದೆ. ಲಾ ಕಾಲೇಜಿಗೆ ಸೇರುವ ಮೊದಲು ರಜೆಗೆ ಊರಿಗೆ ಹೋದ್ರೆ ಹೊಲ ಊಳೋದೇ ನನ್ ಕೆಲಸ. ಪ್ಯಾಂಟು, ಪಂಚೆ ಹಾಕೊಂಡು ಹೊಲ ಉಳೋಕ್ ಆಗುತ್ತಾ. ಚಡ್ಡಿಲೇ ಉಳ್ತಿದ್ದೆ. ನಾಚಿಕೆ ಏನೂ ಇರಲಿಲ್ಲ, ಅದೊಂದು ಫಸ್ಟ್ ಕ್ಲಾಸ್ ಎ.ಸಿ ರೀತಿ ಇರ್ತಿತ್ತು’ ಎಂದವರೆ ವೇದಿಕೆಯಲ್ಲಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರತ್ತ ನೋಡಿದರು.
‘ಏನ್ ಶಿವಕುಮಾರ್ ನೀನೂ ಹೊಲ ಉತ್ತಿದ್ದೀಯಾ’ ಎಂದು ಪ್ರಶ್ನಿಸಿದರು. ಶಿವಕುಮಾರ್ ಅವರು ನಗುತ್ತಲೇ ‘ಹೂ’ ಎನ್ನುವಂತೆ ತಲೆಯಾಡಿಸಿದರು. ಮುಖ್ಯಮಂತ್ರಿ ಮಾತು ಕೇಳಿ ಅಲ್ಲಿದ್ದವರು ನಗೆಗಡಲಲ್ಲಿ ತೇಲಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.