ADVERTISEMENT

ಬನ್ನಿ, ಬೈದಾಡಿಕೊಳ್ಳೋಣ...!

ಗುರು ಪಿ.ಎಸ್‌
Published 24 ಫೆಬ್ರುವರಿ 2018, 19:30 IST
Last Updated 24 ಫೆಬ್ರುವರಿ 2018, 19:30 IST

ಹುಬ್ಬಳ್ಳಿ: ನಗರದ ನೆಹರೂ ಮೈದಾನದಲ್ಲಿ ಫೆ. 26ರಂದು ಕಾಂಗ್ರೆಸ್‌ ಸಮಾವೇಶ ಆಯೋಜಿಸಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪಾಲ್ಗೊಳ್ಳುತ್ತಿದ್ದು, ಈ ಸಂಬಂಧ ಸಿದ್ಧತೆ ಪರಿಶೀಲಿಸಲು ಮೈದಾನಕ್ಕೆ ಬಂದಿದ್ದ ಸಚಿವ ಸಂತೋಷ ಲಾಡ್‌ ಮಾತಿಗೆ ಸಿಕ್ಕರು. ಬಹಳ ವರ್ಷಗಳ ನಂತರ ಅವರು ಹೀಗೆ ಬಿಡುವಾಗಿ ಹುಬ್ಬಳ್ಳಿಯ ಸುದ್ದಿಗಾರರಿಗೆ ಸಿಕ್ಕಿದ್ದರು. ‘ರಾಹುಲ್‌ ಗಾಂಧಿಯವರು ಸಮಾವೇಶದಲ್ಲಿ ಮಹದಾಯಿ ವಿಷಯ ಪ್ರಸ್ತಾಪಿಸುತ್ತಾರಾ’ ಎಂದು ಪತ್ರಕರ್ತರು ಪ್ರಶ್ನಿಸಿದರು. ‘ಆ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು ಸಚಿವರು. ‘ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದೀರಿ, ನಿಮಗೇ ಮಾಹಿತಿ ಇಲ್ಲ ಎಂದರೆ ಹೇಗೆ’ ಎಂದು ಪತ್ರಕರ್ತರು ಕೆಣಕಿದರು.

‘ನೋಡ್ರಿ, ನೀವೀಗ ಸುದ್ದಿ ಬರೀತೀರಿ, ಅದು ಯಾವ ಪುಟದಲ್ಲಿ, ಎಷ್ಟು ಪದಗಳಲ್ಲಿ ಪ್ರಕಟವಾಗುತ್ತದೆ ಎಂಬ ಮಾಹಿತಿ ನಿಮಗೆ ಇರುತ್ತಾ? ಸಂಪಾದಕರು ಅದನ್ನು ನಿರ್ಧರಿಸುತ್ತಾರಲ್ವ... ಈಗ, ವಿವಾದಿತ ಅಂಶಗಳಿಗೆ ಮಾತ್ರ ಹೆಚ್ಚು ಒತ್ತು ಕೊಡುತ್ತೀರಿ’ ಎಂದು ಲಾಡ್‌, ಪತ್ರಕರ್ತರ ಕಾಲೆಳೆದರು.

‘ರಾಹುಲ್‌ ಗಾಂಧಿ ಮಹದಾಯಿ ವಿವಾದ ಬಗೆಹರಿಸುತ್ತಾರೆ’ ಎಂದು ಹೇಳಿಕೆ ಕೊಡಿ, ಅದನ್ನು ನಾವು ಮೊದಲ ಪುಟದಲ್ಲೇ ಪ್ರಕಟಿಸುತ್ತೇವೆ’ ಎಂದು ಪತ್ರಕರ್ತರು ಮತ್ತೊಮ್ಮೆ ಕೆಣಕಿದರು.

ADVERTISEMENT

ಇದರಿಂದ ಸ್ವಲ್ಪ ಅಸಮಾಧಾನಗೊಂಡ ಲಾಡ್‌, ‘ನೀವು ದಿನವಿಡೀ ನಮ್ಮನ್ನು ಟೀಕಿಸುತ್ತೀರಿ. ಒಮ್ಮೆ, ಎಲ್ರೂ ನಮ್ಮನಮ್ಮ ಪ್ರೊಫೆಷನ್‌ ಬಿಟ್ಟು ಒಂದು ‘ಸೂಕ್ತ’ ಸ್ಥಳದಲ್ಲಿ ಕೂತ್ಕೊಳ್ಳೋಣ. ನಿಮ್ಮನ್ನು ಬೈಯುವುದಕ್ಕೆ ನಮ್ಮಲ್ಲೂ ಸಾಕಷ್ಟು ವಿಷಯಗಳಿವೆ! ನಾವು ನಿಮ್ಮನ್ನು ಹೇಗೆ ಬೈತೀವಿ ನೋಡಿ... ನೀವೂ ನನ್ನ ಟೀಕೆ ಮಾಡಿ. ಆದರೆ, ಅಲ್ಲಿಂದ ಹೊರಗೆ ಬಂದಕೂಡಲೇ, ಎಲ್ಲಾ ಮರೆತು ‘ನಮ್ಮತನ’ವನ್ನು ಕಾಯ್ದುಕೊಳ್ಳೋಣ’ ಎಂದು ಸಚಿವರು ಹೇಳಿದಾಗ, ನಗುವೇ ಪತ್ರಕರ್ತರ ಉತ್ತರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.