ವಿಜಯಪುರ: ‘ನಾಲ್ವರು ತಜ್ಞರ ಶೋಧನಾ ಸಮಿತಿ ವಿಶ್ವವಿದ್ಯಾಲಯಕ್ಕೆ ಕುಲಪತಿ ಯಾರಾಗಬೇಕು ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ಆದರೆ ವರದಿ ನಮ್ಮ ಕೈಸೇರುವ ಮುನ್ನವೇ ತಮ್ಮ ತಮ್ಮ ಬಯೋಡಟಾ ಹಿಡಿದು ಮನೆ ಬಾಗಿಲಿಗೆ ಬರುವವರ ಸಂಖ್ಯೆ ಹೆಚ್ಚಿರುತ್ತದೆ.
ಇಂತಹವರನ್ನು ನೋಡುತ್ತಿದ್ದಂತೆ ಮೈ ಉರಿಯುತ್ತದೆ. ತಡೆಯಲಾಗದೆ ಸಿಟ್ಟಿನಿಂದ ಬೈದರೆ, ಕೆಲ ಹೊತ್ತಿನಲ್ಲೇ ನಮಗ ಬೈಸತಾರೆ’ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ‘ಕುಲಪತಿ ನೇಮಕಾತಿ’ಯಲ್ಲಿನ ಲಾಬಿ ಬಗ್ಗೆ ಮಾರ್ಮಿಕವಾಗಿ ಪ್ರಸ್ತಾಪಿಸುತ್ತಿದ್ದಂತೆ, ಗಂಭೀರವಾಗಿದ್ದ ಸಭಾಂಗಣ ನಗೆಗಡಲಲ್ಲಿ ತೇಲಿತು.
‘ಎಷ್ಟೇ ಮಂದಿ ನನ್ನ ಬಳಿ ಶಿಫಾರಸಿಗೆ ಬಂದರೂ, ನಾ ಯಾರ ಪರವೂ ಪತ್ರ ನೀಡಲ್ಲ. ಪ್ರಭಾವಿಗಳ ಬಳಿ ಬೆಗ್ ಮಾಡಿ ಕುಲಪತಿಯಾಗೋದು ನಾಚಿಕೆಗೇಡಿನ ಸಂಗತಿ. ನಾನಂತೂ ಸಚಿವ ಸ್ಥಾನ ಪಡೆಯಲು ಯಾರ ಬಳಿಯೂ ಭಿಕ್ಷೆ ಬೇಡಲಿಲ್ಲ... ಅದಕ್ಕೆ ಯಾವ ಲಾಬಿಗೂ ಮಣಿಯಲ್ಲ.
ನನ್ನ ಅಧಿಕಾರದ ಅವಧಿಯಲ್ಲೇ ರಾಜ್ಯದ ಎಲ್ಲ ವಿ.ವಿ.ಗಳಿಗೆ ಒಂದೇ ನಿಯಮಾವಳಿಯಡಿ, ಮೆರಿಟ್ ಆಧಾರದಲ್ಲಿ ನೇಮಕಾತಿ ವ್ಯವಸ್ಥೆ ಅನುಷ್ಠಾನಗೊಳಿಸುವೆ’ ಎಂದು ರಾಯರೆಡ್ಡಿ ಪ್ರಸ್ತಾಪಿಸುತ್ತಿದ್ದಂತೆ, ವೇದಿಕೆ ಮುಂಭಾಗ ಆಸೀನರಾಗಿದ್ದ ಪದವೀಧರರು ಸಂತಸ ವ್ಯಕ್ತಪಡಿಸಿದರೆ, ಕೆಲವರು ಪೆಚ್ಚು ಮೋರೆ ಹಾಕಿದರು!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.