ಮಂಗಳೂರು: ‘ಶರತ್ ಕೊಲೆಯ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ನಿಮ್ಮ ಬಳಿ ‘ಸ್ಫೋಟಕ’ ಮಾಹಿತಿ ಇದೆ ಎಂದು ಹೇಳುತ್ತಿದ್ದೀರಿ. ಅದನ್ನು ಪೊಲೀಸರಿಗೆ ಕೊಟ್ಟು ಬಿಡಿ. ಅಪರಾಧಿಗಳ ಬಂಧನವಾಗುತ್ತದೆ’.
ಶರತ್ ಕೊಲೆಗೆ ಸಂಬಂಧಿಸಿದಂತೆ ತಮ್ಮ ಬಳಿ ಮಾಹಿತಿ ಇರುವುದಾಗಿ ಹೇಳಿದ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ನೀಡಿದ ಸಲಹೆ ಇದು.
‘ಸ್ಫೋಟಕ ಮಾಹಿತಿ ಎನ್ನುತ್ತೀರಿ. ಅದನ್ನು ಪೊಲೀಸರಿಗೆ ಕೊಡುವುದಿಲ್ಲ. ಎನ್ಐಎಗೆ ಹಸ್ತಾಂತರಿಸುವುದಾಗಿ ಹೇಳುತ್ತೀರಿ. ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದರೆ ಹೇಗೆ’ ಎನ್ನುವ ಪ್ರಶ್ನೆಯನ್ನು ಖಾದರ್ ಅವರು ಶನಿವಾರ ಮಂಗಳೂರಿನಲ್ಲಿ ಪತ್ರಕರ್ತರ ಮುಂದಿಟ್ಟರು. ‘ಮಾಹಿತಿ ಮುಚ್ಚಿಡುವುದೂ ಕಾನೂನಿನ ಪ್ರಕಾರ ಅಪರಾಧವೇ’ ಎನ್ನುವ ಮೂಲಕ ಈ ಪ್ರಕರಣ ಭೇದಿಸಲು ಶ್ರೀಗಳು ಸಹಕಾರ ನೀಡಬೇಕು ಎಂದರು.
ಸಚಿವರಾಗಿ ನಾವು ಗಾಯಾಳುಗಳನ್ನು ಭೇಟಿ ಮಾಡುವುದೂ ತಪ್ಪಾಗುತ್ತದೆ. ಭೇಟಿ ಮಾಡದೇ ಇದ್ದರೂ ಟೀಕೆ ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಏನು ಮಾಡಬೇಕು ಎನ್ನುವ ಗೊಂದಲ ಶುರುವಾಗುತ್ತದೆ. ಶ್ರೀಗಳು ಮಾಹಿತಿಯನ್ನು ಸಂಬಂಧಿಸಿದವರೆಗೆ ಹಸ್ತಾಂತರಿಸಿದರೆ, ಎಲ್ಲ ತೊಂದರೆಗಳು ನಿವಾರಣೆ ಆಗುತ್ತವೆ. ಜಿಲ್ಲೆಯಲ್ಲಿ ಶಾಂತಿಯೂ ನೆಲೆಸುತ್ತದೆ. ಆ ಮಾಹಿತಿಯನ್ನು ಕೊಟ್ಟು ಬಿಡಿ ಎಂಬ ಮನವಿ ಸಚಿವರಿಂದ ಕೇಳಿ ಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.