ADVERTISEMENT

ಮುಂದಿನ ಸರದಿ ಎಕೆ–47!

ಚಂದ್ರಹಾಸ ಹಿರೇಮಳಲಿ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ಸಮೀಪದ ಪುಟ್ಟ ಹಳ್ಳಿಯೊಂದರಲ್ಲಿ ಈಚೆಗೆ ಸಾಹಿತ್ಯಾಭಿರುಚಿಯ ಸಮಾನಮನಸ್ಕ ಗೆಳೆಯರೆಲ್ಲ ಸೇರಿ ಕವನ ವಾಚನ ಕಮ್ಮಟ ಆಯೋಜಿಸಿದ್ದರು. ಯುವ ಕವಿಗಳಿಗೆ ಆದ್ಯತೆ ನೀಡಲಾಗಿತ್ತು.

ಒಂದಷ್ಟು ಕವಿಗಳ ನಂತರ ವೇದಿಕೆಗೆ ಬಂದ ಚಿಗುರು ಮೀಸೆಯ ಯುವಕನೊಬ್ಬ, ಕೈ ಚೀಲದಿಂದ ಬಿದಿರು ಕೋಲು ಹೊರ ತೆಗೆದು ಅದರ ಎರಡೂ ತುದಿಗೆ ತಂತಿಯಂತಹ ದಾರ ಕಟ್ಟಿ ಚೂಪನೆಯ ಬಾಣ ಹೂಡಿದ. ಬಿಲ್ಲಿಗೆ ತಾಕಿಸಿದ ಬಾಣ ಹಿಂದೆ ಮುಂದೆ ಎಳೆಯುತ್ತಾ ತಾನು ಬರೆದ ‘ಗುರಿ’ ಕವನ ವಾಚಿಸಿದ. ಅಲ್ಲಿದ್ದ ಬಹುತೇಕ ಸಭಿಕರು ಆ ಬಾಣಕ್ಕೆ ತಾವೇ ಎಲ್ಲಿ ಗುರಿಯಾಗಿ ಬಿಡುತ್ತೆವೆಯೋ ಎಂದು ಕಿವಿಗೆ ಮೊಬೈಲ್‌ ಅಂಟಿಸಿಕೊಂಡು ಆ... ಹೂಂ... ಅನ್ನುತ್ತಾ ಹೊರಗೆ ಹೆಜ್ಜೆ ಹಾಕಿದರು.

ಕಳೆದ ಬಾರಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲೂ ಇಂತಹ ಘಟನೆ ನಡೆದಿತ್ತು. ಅಂದು ನಡೆದಿದ್ದ ಕವಿಗೋಷ್ಠಿಯಲ್ಲಿ ‘ಕುಡುಗೋಲು’ ಕವನ ಓದಿದ್ದ ಶಿಕಾರಿಪುರದ ವೈದ್ಯ
ರೊಬ್ಬರು ವಾಚನಕ್ಕೂ ಮೊದಲು ಹರಿತವಾದ ಕುಡು
ಗೋಲು ಹೊರಗೆ ತೆಗೆಯುತ್ತಿದ್ದಂತೆ ಅಕ್ಕಪಕ್ಕ ನಿಂತಿದ್ದವರು ಜಾಗ ಖಾಲಿ ಮಾಡಿದ್ದರು. ಕವಿತೆ ಓದಿ ಮುಗಿಸುವವರೆಗೂ ಅವರು ಕುಡುಗೋಲು ಝಳಪಿಸುತ್ತಲೇ ಇದ್ದರು.

ADVERTISEMENT

‘ಮೊದಲೇ ಸಾಹಿತ್ಯ ಪರಿಷತ್‌ನಲ್ಲಿ ಎರಡು ಬಣಗಳಾಗಿವೆ. ಕವಿಗಳು ಹೀಗೆ ಮಾರಕಾಸ್ತ್ರ ತೆಗೆದುಕೊಂಡು ಬಂದರೆ ವಿರೋಧಿ ಬಣದವರು ಕವಿತೆ ಹೇಗೆ ಕೇಳಿಯಾರು’ ಎಂದು ಜಿಲ್ಲಾ ಕಸಾಪ ಅಧ್ಯಕ್ಷರು ಅವಲತ್ತುಕೊಂಡಿದ್ದರು. ಮುಂದಿನ ಸಮ್ಮೇಳನದಲ್ಲಿ ನಮ್ಮದು ಮಚ್ಚು, ಲಾಂಗು, ಪಿಸ್ತೂಲು, ಎಕೆ– 47... ಕವನಗಳ ವಾಚನ ಎನ್ನುತ್ತಾ ಮತ್ತೊಂದು ಬಣದ ಸದಸ್ಯರು ಹೊರಗೆ ಹೆಜ್ಜೆ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.