ಕನ್ನಡ ಶಾಲೆ ಮರೆತರು...
ಯಾದಗಿರಿ: ರಣರಣ ಬಿಸಿಲಿನಲ್ಲೂ ಗುರುಮಠಕಲ್ನಲ್ಲಿ ಮೂರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು.
ಬಾಜಾಭಜಂತ್ರಿಯೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಖಾಸಾಮಠದ ಆವರಣ ಸೇರಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಶಾಸಕ ಬಾಬುರಾವ್ ಚಿಂಚನಸೂರ್ ಹುಮ್ಮಸ್ಸಿನಿಂದ ಎದ್ದು ತಮ್ಮ ಜವಾರಿ ಭಾಷೆಯಲ್ಲಿ ಎಲ್ಲರನ್ನೂ ಸ್ವಾಗತಿಸತೊಡಗಿದರು. ಸ್ವಾಗತದ ಜತೆಗೆ ಭಾಷಣವನ್ನೂ ಶುರುಹಚ್ಚಿಕೊಂಡರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮೇಲೆ ತಾವು ಸಾಧಿಸಿದ ಸಾಧನೆಯ ಪಟ್ಟಿ ಹೇಳತೊಡಗಿದರು. ಶಾಸಕರ ಸಾಧನೆ ಕೇಳಿ ಪರಿಷತ್ತಿನ ಪದಾಧಿಕಾರಿಗಳಷ್ಟೇ ಚಪ್ಪಾಳೆ ತಟ್ಟಿದರು.
ಜತೆಗೆ ಗಡಿ ಭಾಗದಲ್ಲಿರುವ ಶಾಲೆಗಳಿಗೆ ಗಡಿನಾಡ ಅಭಿವೃದ್ಧಿ ಪ್ರಾಧಿಕಾರದಿಂದ ತಲಾ ₹ 3 ಲಕ್ಷ ಅನುದಾನ ನೀಡಿರುವುದಾಗಿ ಹೇಳಿ ಹೆಮ್ಮೆಪಟ್ಟುಕೊಂಡರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೂ ₹ 3 ಲಕ್ಷ ಅನುದಾನ ಬಿಡುಗಡೆ ಮಾಡಿರುವುದಾಗಿ ಘೋಷಿಸಿದರು. ಅನುದಾನ ನೀಡಿರುವ ಗಡಿನಾಡಿನ ಊರು, ಶಾಲೆಗಳ ವಿವರ ನೀಡಿದ ಶಾಸಕರು, ನಂತರ ಉಸ್ಸಪ್ಪಾ ಎನ್ನುತ್ತಾ ವೇದಿಕೆಯಲ್ಲಿ ಸುಖಾಸೀನರಾದರು. ಬಳಿಕ ಶಾಸಕರು ಅನುದಾನ ನೀಡಿದ ಶಾಲೆಗಳೆಲ್ಲವೂ ಖಾಸಗಿ ಒಡೆತನದವು ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳು ಎಂಬ ಸುದ್ದಿ ಕೇಳಿ ಸಮ್ಮೇಳನದಲ್ಲಿ ನೆರೆದಿದ್ದ ಸಾಹಿತ್ಯಾಸಕ್ತರು ಹೌಹಾರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.