ADVERTISEMENT

ಸಮಾಜಮುಖಿ ಕೆಲಸಕ್ಕಾಗಿ ಸಂಗೀತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 14:08 IST
Last Updated 18 ಜೂನ್ 2018, 14:08 IST
ಪ್ರವೀಣ್‌ ಗೋಡ್ಖಿಂಡಿ
ಪ್ರವೀಣ್‌ ಗೋಡ್ಖಿಂಡಿ   

ಹೊಸಕೋಟೆ ಸಮೀಪದ ಕಲಕುಂಟೆ ಅಗ್ರಹಾರದ ಶ್ರೀ ರಂಗರಾಮ ಸೇವಾ ಸಮಿತಿಯು ಇದೇ 23ಕ್ಕೆ ಸ್ವರ ಸರು ಚಾಪ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಲಕುಂಟೆ ಅಗ್ರಹಾರದ ಮೂಲ ನಿವಾಸಿಗಳೆಲ್ಲ ಸೇರಿ ಈ ಸಮಿತಿಯನ್ನು ಹುಟ್ಟುಹಾಕಿದ್ದಾರೆ.

ಎರಡೂವರೆ ಶತಮಾನಗಳಷ್ಟು ಹಿಂದೆ ತಮಿಳುನಾಡಿನ ಕಂಚೀಪುರಂನಿಂದ ವಲಸೆ ಬಂದ ವೈಷ್ಣವ ಕುಟುಂಬಗಳಿಗೆ ಮೈಸೂರು ಮಹಾರಾಜರು ದತ್ತಿಗ್ರಾಮವಾಗಿ ಕಲಕುಂಟೆ ನೀಡಿದ್ದರು. ಕಾಲಕ್ರಮೇಣ, ಶಿಕ್ಷಣ, ವೃತ್ತಿಯೆಂದೆಲ್ಲ ಇಲ್ಲಿಯ ಕುಟುಂಬಗಳ ನಿವಾಸಿಗಳು ಅಲ್ಲಲ್ಲಿ ಚೆದುರಿ ಹೋದರು. ಆದರೆ ಊರಿನ ಬೇರು ಗಟ್ಟಿಯಾಗಿತ್ತು. ಇವರನ್ನೆಲ್ಲ ಒಗ್ಗೂಡಿಸಬೇಕು. ಗಳಿಕೆಯಲ್ಲಿ ಕೆಲಭಾಗವನ್ನು ಗ್ರಾಮದ ಅಭ್ಯುದಯಕ್ಕೆ ಬಳಸಬೇಕು ಎಂದೆನಿಸಿದ್ದೇ ಈ ಸಮಿತಿಯನ್ನು ರಚಿಸಲಾಯಿತು. ನೋಂದಣಿ ಮಾಡಿಸಲಾಯಿತು.

ಈ ಗ್ರಾಮದಲ್ಲಿರುವ ರಂಗನಾಥ ಮತ್ತು ರಂಗನಾಯಕಿ ಹಾಗೂ ಅಂಡಾಳಮ್ಮನ ದೇವಸ್ಥಾನವೂ 200 ವರ್ಷಗಳಷ್ಟು ಹಳೆಯದು. ಈ ದೇವಸ್ಥಾನದ ಜೀರ್ಣೋದ್ಧಾರ, ಅಭಿವೃದ್ದಿ ಜೊತೆಗೆ ಗ್ರಾಮದ ಅಭಿವೃದ್ಧಿಗಾಗಿ ಸಮಾನ ಮನಸ್ಕರು ಸೇರಿ ಶ್ರೀ ರಂಗರಾಮ ಸೇವಾ ಸಮಿತಿಯನ್ನು ಹುಟ್ಟುಹಾಕಿದರು.

ADVERTISEMENT

ದೇಶ, ವಿದೇಶಗಳಿಂದ ಇಲ್ಲಿಯ ನಂಟಿದ್ದವರು ಈ ಸಮಿತಿಗೆ ದೇಣಿಗೆ ನೀಡಿದರು. ಸಮಿತಿಯಯ ಧಾರ್ಮಿಕ ಮತ್ತು ದೀನರ ಸಹಾಯಾರ್ಥ ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳತೊಡಗಿತು. ರಾಮಾನುಜರ ಸಹಸ್ರಮಾನೋತ್ಸವದ ಸಂದರ್ಭದಲ್ಲಿ ವಾರ್ಷಿಕ ಕಾರು ಉತ್ಸವವನ್ನು ಏರ್ಪಡಿಸಿತ್ತು. ಸಮಿತಿಯ ಈ ಕಾರ್ಯಕ್ರಮ ಯಶಸ್ವಿಯಾಗಿದ್ದು ನೋಡಿ, ಸಾಧ್ಯವಿದ್ದಷ್ಟು ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ಏರ್ಪಡಿಸಿ, ಆ ಮೂಲಕ ಯುವಕರನ್ನು ಈ ಸಮಾಜಮುಖಿ ಕಾರ್ಯಕ್ರಮಗಳತ್ತ ಸೆಳೆಯತೊಡಗಿತು.

ಈಗಿರುವ ಸಮುದಾಯ ಭವನದ ಪುನರ್‌ನಿರ್ಮಾಣ, ಈ ಭಾಗದ ಜನರಿಗೆ ಅನುಕೂಲವಾಗುವಂತೆ ಮಧುಮೇಹ ಹಾಗೂ ಕಿಡ್ನಿ ಆರೋಗ್ಯಕ್ಕಾಗಿ ಮೊಬೈಲ್‌ ಕ್ಲಿನಿಕ್‌, ಸೌರ ಫಲಕಗಳ ಅಳವಡಿಕೆಯಿಂದ ಗ್ರಾಮದ ನಿವಾಸಿಗಳಿಗೆ ವಿದ್ಯುತ್‌ ಅಳವಡಿಕೆ ಕೆರೆಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕಾಗಿ ಸಂಸ್ಥೆಯು ಶ್ರಮಿಸುತ್ತಿದೆ.

ಈ ಎಲ್ಲ ಕಾರ್ಯಕ್ರಮಗಳನ್ನು ಹಂತಹಂತವಾಗಿ ಅಳವಡಿಸುವ ವಿಶ್ವಾಸ ಸಮಿತಿಗಿದೆ. ಇದೇ ಕಾರಣಕ್ಕಾಗಿ ಇದೇ 23ರಂದು ಸ್ವರ ಸುರ ಚಾಪ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ ಮೈಸೂರು ಬ್ರದರ್ಸ್‌ ಖ್ಯಾತಿಯ ಮೈಸೂರು ಮಂಜುನಾಥ್‌ ಅವರ ಪಿಟೀಲು ಹಾಗೂ ಪ್ರವೀಣ್‌ ಗೋಡ್ಖಿಂಡಿ ಅವರ ಕೊಳಲು ವಾದನದ ಜುಗಲ್ಬಂದಿಯನ್ನು ಆಯೋಜಿಸಲಾಗಿದೆ. ವಯ್ಯಾಲಿ ಕಾವಲ್‌ನಲ್ಲಿರುವ ಚೌಡಯ್ಯ ಭವನದಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.