ವಿಜಯಪುರ: ‘ಹಡೆಯೋ ಶಕ್ತಿ ಇದ್ದಾಗ್ಲೇ ಲಗ್ನಾ ಮಾಡ್ಬೇಕ್ರೀ... ಹೊತ್ತಿಗೆ ಸರಿಯಾಗಿ ಲಗ್ನಾ ಮಾಡ್ದಿದ್ರೆ ಏನೂ ಪ್ರಯೋಜನವಾಗಲ್ಲ!’ ಆರೋಗ್ಯ ಸಚಿವ ಶಿವಾನಂದ ಎಸ್.ಪಾಟೀಲ ಅವರ ವಾಗ್ಬಾಣವಿದು.
ವಿಜಯಪುರದಲ್ಲಿ ಈಚೆಗೆ ನಡೆದ ಸಚಿವರ ಅಭಿನಂದನಾ ಸಮಾರಂಭದಲ್ಲಿ ಮೊದಲು ಮಾತನಾಡಿದ ಮಾಜಿ ಸಚಿವ ಸಿ.ಎಸ್.ನಾಡಗೌಡ, ‘ಸಚಿವ ಶಿವಾನಂದ ಪಾಟೀಲ ನನಗೆ ಮೊದಲಿನಿಂದಲೇ ಗೊತ್ತು. ಕಾಂಗ್ರೆಸ್ಗೆ ಕರೆ ತಂದು ನನ್ನ ಹಾಳು ಮಾಡಿದ್ರಿ, ಬೇರೆ ಪಕ್ಷದಲ್ಲಿದ್ದಿದ್ದರೆ ಡಿಸಿಎಂ ಆಗಿರುತ್ತಿದ್ದೆ ಅಂತ ಆಗಾಗ ಬೈತಿದ್ರು. ಆದ್ರೂ, ‘ನಿಮ್ಮನ್ ಬಿಟ್ಟ್ ಎಲ್ಲಿಗೂ ಹೋಗಲ್ಲಾರೀ’ ಅಂದಿದ್ರು. ಅವರ ನಂಬಿಕೆಯಂತೆ ಕಾಂಗ್ರೆಸ್ ಇದೀಗ ಸಚಿವ ಸ್ಥಾನ ನೀಡುವ ಮೂಲಕ ಅವರನ್ನು ಗೌರವಿಸಿದೆ’ ಎಂದರು.
ಅಭಿನಂದನೆ ಸ್ವೀರಿಸಿ ಮಾತನಾಡಿದ ಸಚಿವ ಶಿವಾನಂದ ಅವರು ನಾಡಗೌಡರತ್ತ ವಾಗ್ಬಾಣ ಬಿಡಲಾರಂಭಿಸಿದರು. ‘ನಾಡಗೌಡ್ರು ತಪ್ಪು ತಿಳ್ಕೊಳ್ಳಬಾರದು. ಹಡೆಯೋ ಶಕ್ತಿ ಇದ್ದಾಗ್ಲೇ ಲಗ್ನಾ ಮಾಡ್ಬೇಕ್ರೀ..! ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರು. ಆದರೆ ಅವರು ಅದಕ್ಕಿಂತ ಹತ್ತಾರು ವರ್ಷ ಮೊದಲೇ ದೇಶದ ಚುಕ್ಕಾಣಿ ಹಿಡಿದಿದ್ದರೆ, ದೇಶದ ಚಿತ್ರಣವನ್ನೇ ಬದಲಿಸುತ್ತಿದ್ದರು.
ಅದ್ಕೆ ಹೇಳ್ದೇ. ಕೆಲಸ ಮಾಡೋ ಸಾಮರ್ಥ್ಯವಿದ್ದಾಗಲೇ ಅಧಿಕಾರ ಕೊಟ್ರೇ ಜನ ನೆನಪಿಟ್ಟುಕೊಳ್ಳೋ ರೀತಿ ಕೆಲಸ ಮಾಡ್ಬೌದು’ ಎನ್ನುತ್ತಿದ್ದಂತೆ ನೆರೆದಿದ್ದ ಜನಸ್ತೋಮ ನಗೆಗಡಲಲ್ಲಿ ತೇಲಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.