*ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಪಾಪದ ಹುಡುಗನಂತೆ ಇದ್ದೀರಿ, ನಿಜಜೀವನದಲ್ಲಿಯೂ ಹೀಗೇನಾ?
ಖಂಡಿತಾ ಇಲ್ಲ. ನಾನು ತುಂಬಾ ಜಾಲಿ ಮನುಷ್ಯ. ಅನಿಸಿದ್ದನ್ನು ನೇರವಾಗಿ ಹೇಳುವ ಗುಣ ನನ್ನದು. ಎಲ್ಲರೊಂದಿಗೂ ಸ್ನೇಹಮಯಿ ಆಗಿರುತ್ತೇನೆ. ಧಾರಾವಾಹಿಯಲ್ಲಿ ತೋರಿಸುವಷ್ಟು ಪಾಪದ ಹುಡುಗನಂತೂ ಖಂಡಿತಾ ಅಲ್ಲ ಕಣ್ರಿ.
*ಆಗ ತನುಗೆ, ಈಗ ಮಾಯಾಗೆ ಕೈಕೊಟ್ರಿ. ಹೀಗೆ ಎಷ್ಟು ಹುಡುಗಿಯರಿಗೆ ನಂಬಿಸಿ ಕೈಕೊಟ್ಟಿದ್ದೀರಿ?
ಹ್ಹಹ್ಹಹ್ಹ... ನಾನಂಥ ಹುಡುಗ ಅಲ್ಲ. ಹುಡುಗೀರನ್ನು ಕಂಡರೆ ತುಂಬಾ ಗೌರವ ಕೊಡುತ್ತೇನೆ. ಫ್ಲರ್ಟ್ ಮಾಡಿದ್ದು ಕೂಡ ನೆನಪಿಲ್ಲ. ಇನ್ನು ಕೈ ಕೊಡೋದಾ? ಶಾಂತಂ ಪಾಪಂ.
*ಮನೇಲಿ ಹೇಳದೆ ಕೇಳದೆ ಓಡ್ಹೋಗೊ ಪ್ಲಾನ್ ಏನಾದ್ರೂ ಇದೆಯಾ?
ಖಂಡಿತಾ ಇಲ್ಲ. ನೇರವಾದಿ ನಾನು. ಏನೇ ಮಾಡೋದಾದ್ರೂ ಮನೇಲಿ ಒಪ್ಪಿಗೆ ಪಡೆದೇ ಮಾಡ್ತೀನಿ.
*ಹುಡುಗಿ ತನು ಥರ ಇರಬೇಕಾ, ಮಾಯಾ ಥರನಾ?
ಇಬ್ಬರ ಥರಾನೂ ಬೇಡ. ಧಾರಾವಾಹಿಯಲ್ಲೇ ಸುಸ್ತಾಗಿದ್ದೇನೆ. ನಿಜ ಜೀವನದಲ್ಲಿಯೂ ಅಂಥ ಹುಡುಗಿ ಸಿಕ್ಕರೆ ನನ್ನ ಕಥೆ ಅಷ್ಟೇ. ಇಂದಿನ ಧಾರಾವಾಹಿಗಳಲ್ಲಿ ಬರುವ ಯಾವ ಪಾತ್ರಕ್ಕೂ ಹೋಲಿಕೆ ಆಗುವ ಹುಡುಗಿ ಬೇಡಪ್ಪ. ಅದು ಧಾರಾವಾಹಿಗೇ ಸೀಮಿತವಾಗಿರಲಿ.
*ಮತ್ತೆ ನಿಮ್ಮ ಹುಡುಗಿ ಹೇಗಿರಬೇಕು?
ನಟನಾ ಕ್ಷೇತ್ರದಲ್ಲಿರುವವರು ಬೇಡವೇ ಬೇಡ. ನನ್ನ ಕೆಲಸ, ನನ್ನ ತನವನ್ನು ಅರ್ಥೈಸಿಕೊಂಡು ಹೊಂದಿಕೊಳ್ಳುವಂಥ ಹುಡುಗಿ ಅವಳಾಗಿರಬೇಕು. ನನ್ನದೊಂಥರಾ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಬಹುದು... ನೋಡೋಣ...
*ಅಂದರೆ ಲವ್ನಲ್ಲಿ ಬಿದ್ದಿದ್ದೀರಿ ಅಂದಂಗಾಯ್ತು? ಯಾವಾಗ ಮದ್ವೆ?
ಹ್ಹಹ್ಹಹ್ಹ... ಹೌದು. ಎದೆಯಲ್ಲಿ ಕುಹುಕುಹೂ ಶುರುವಾಗಿದೆ. ಯಾರು ಅಂತ ಮಾತ್ರ ಈಗ್ಲೇ ಕೇಳ್ಬೇಡಿ. ಕಾಲ ಕೂಡಿಬಂದಾಗ ಮದುವೆ.
*ಅತ್ತಿಗೆಗೆ ಇಷ್ಟೊಂದು ಹೆದರ್ತೀರಿ, ನಿಜ ಜೀವನದಲ್ಲಿ ಯಾರನ್ನು ಕಂಡರೆ ಭಯ?
ಇನ್ನೂ ಅಂಥವರು ಯಾರೂ ಇಲ್ಲ. ಮುಂದೆ ನೋಡಬೇಕು. ಅಮ್ಮ ನನಗೆ ಬೆಸ್ಟ್ ಫ್ರೆಂಡ್. ಅವರು ಹೆದರಿಸಿದ ನೆನಪೇ ಇಲ್ಲ.
*‘ಮರಿ ರಾಕ್ಷಸಿ’ ಜೊತೆ ತುಂಬಾ ಜಗಳವಾಡ್ತೀರಿ?
ಹೌದು, ಸದ್ಯಕ್ಕೆ ಆನ್ಸ್ಕ್ರೀನ್ನಲ್ಲೂ, ಆಫ್ ಸ್ಕ್ರೀನ್ನಲ್ಲೂ ಹೆಚ್ಚು ಜಗಳ ಮಾಡೋದು ಮರಿರಾಕ್ಷಸಿಯೊಂದಿಗೇ. ದಿನದ ಹೆಚ್ಚಿನ ಸಮಯ ಶೂಟಿಂಗ್ನಲ್ಲಿರುತ್ತೇನೆ. ಹೀಗಾಗಿ ಅಲ್ಲಿದ್ದವರೇ ಕುಟುಂಬದಂತಾಗಿದ್ದಾರೆ. ಚಂದ್ರಿಕಾ (ಪ್ರಿಯಾಂಕಾ) ಬಳಿಯೂ ಆಗಾಗ ಜಗಳ ಮಾಡುತ್ತೇನೆ. ಅವರ ಕೂದಲೆಳೆಯುವುದು, ಜಗಳ ಮಾಡುವುದು, ಅಲ್ಲಿದ್ದವರೊಂದಿಗೆ ಹೊಡೆದಾಟ ಎಲ್ಲಾ ಮಾಮೂಲು.
*ತುಂಬಾ ನೆನಪಾಗುವ ಹಾಸ್ಯ ಸನ್ನಿವೇಶ?
ಸಿಕ್ಕಾಪಟ್ಟೆ ಇದೆ. ಸೆಟ್ನಲ್ಲಿಯೂ ಒಂದು ನಿಮಿಷ ಸುಮ್ಮನೆ ಕೂರುವವ ನಾನಲ್ಲ. ಎಲ್ಲರ ಕಾಲೆಳೆದುಕೊಂಡು ಖುಷಿಯಾಗಿ ಇರುತ್ತೇನೆ. ಹುಡುಗೀರಿಗೆ ಏಕವಚನದಲ್ಲಿ ಮಾತನಾಡಿಸೋದು ಕಮ್ಮಿ. ಆದರೆ ತನುಗೆ ಹೋಗೆ, ಬಾರೆ ಎನ್ನಬೇಕಾದ ಸನ್ನಿವೇಶದ ಚಿತ್ರೀಕರಣ ಇತ್ತು. ಎಷ್ಟು ಟೇಕ್ ತೆಗೆದುಕೊಂಡರೂ ಸರಿಯಾಗಿ ಅಭಿನಯಿಸಲು ಆಗುತ್ತಿರಲಿಲ್ಲ. ಹೀಗಾಗಿ ಈ ಬಾರಿ ಎಲ್ಲಾ ನನ್ನ ಕಾಲೆಳೆದು ಮಜಾ ತಗೊಂಡ್ರು.
*ನಿಮ್ಮ ಮುಂದಿನ ಪ್ರಾಜೆಕ್ಟ್ಗಳು?
‘ಸರಯೂ’ ಧಾರಾವಾಹಿ ಮುಗೀತಾ ಬಂತು. ಮುಂದೆ ಯಾವುದು ಎಂದು ಇನ್ನೂ ಗೊತ್ತಿಲ್ಲ. ಪ್ರಥಮ್ ಮಾಡುತ್ತಿರುವ ‘ದೇವ್ರವ್ನೇ ಬಿಡು ಗುರು’ ಚಿತ್ರದಲ್ಲಿ ಒಳ್ಳೆ ಪಾತ್ರವಿದೆ. ಅದು ಮುಂದೇನಾಗುತ್ತೆ ನೋಡಬೇಕು. ಸದ್ಯಕ್ಕೆ ನಾನೇ ಕಥೆ ಬರೆದು ನಿರ್ದೇಶಿಸುತ್ತಿರುವ ‘ತದನಂತರ’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದೇನೆ. ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಸ್ನೇಹದ ಎಳೆಯ ಮೇಲೆ ಚಿತ್ರ ಸಾಗುತ್ತದೆ. ಕೊಪ್ಪ, ಸಿರ್ಸಿ ಸುತ್ತಮುತ್ತ ಶೂಟಿಂಗ್ ನಡೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.