ಮುಂಬೈ (ಪಿಟಿಐ): ಜಕಾರ್ತಾದಲ್ಲಿ ನಡೆಯುವ ಏಷ್ಯನ್ ಗೇಮ್ಸ್ನಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಹೊಂದಿದ್ದೇನೆ ಎಂದು ಇತ್ತಿಚೇಗೆ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಬ್ಯಾಸ್ಕೆಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದ ಸತ್ನಾಮ್ ಸಿಂಗ್ ಹೇಳಿದರು.
ಇಲ್ಲಿ ನಡೆದ 3*3 ಪ್ರೊ ಬ್ಯಾಸ್ಕೆಟ್ಬಾಲ್ ಲೀಗ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಂಡವಾಗಿ ಅರ್ಹತಾ ಸುತ್ತಿನಲ್ಲಿ ಗೆಲುವು ಸಾಧಿಸಬೇಕಿದೆ. ಅದರಲ್ಲಿ ನನ್ನ ಕೊಡುಗೆ ಇರಬೇಕು. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕಿದೆ. ಮುಂದಿನ 5–6 ತಿಂಗಳು ಹೆಚ್ಚು ಬ್ಯಾಸ್ಕೆಟ್ಬಾಲ್ ಆಡಬೇಕಿದೆ. ಹಾಗಾಗಿ, ಸದ್ಯ ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು. ನಂತರ, ಕೋಚ್ ಸಹಕಾರದಿಂದ ನನ್ನ ವೈಫಲ್ಯಗಳನ್ನು ಮೆಟ್ಟಿ ನಿಲ್ಲಲು ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬೇಕಿದೆ’ ಎಂದು ತಿಳಿಸಿದರು.
‘ಏಷ್ಯನ್ ಗೇಮ್ಸ್ ಪ್ರತಿವರ್ಷವೂ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದ ಅನೇಕ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕಿದೆ. ಆದ್ದರಿಂದ ಹೆಚ್ಚಿನ ಅಭ್ಯಾಸ ನಡೆಸಬೇಕು’ ಎಂದು ಅವರು ಹೇಳಿದರು.
‘ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿನ ಅನುಭವ ನನಗೆ ಹೊಸದು. ಮೊದಲ ಬಾರಿಗೆ ಅಂತಹ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕೆಲವು ವಿದೇಶಿ ಕೋಚ್, ಅಮೆರಿಕ ಹಾಗೂ ಆಸ್ಟ್ರೇಲಿಯಾದ ಆಟಗಾರರನ್ನು ಭೇಟಿಯಾದೆ. ಅವರಿಂದ ಅನೇಕ ಸಲಹೆಗಳನ್ನು ಪಡೆದಿದ್ದೇನೆ. ಭಾರತ ತಂಡದ ಸಾಧನೆ ಉತ್ತಮವಾಗಿರದಿದ್ದರೂ, ನಮ್ಮ ಪ್ರಯತ್ನ ಮಾಡಿದ್ದೇವೆ’ ಎಂದೂ ತಿಳಿಸಿದರು.
ಗುಂಪು ಹಂತದಲ್ಲಿ ಭಾರತದ ಬ್ಯಾಸ್ಕೆಟ್ಬಾಲ್ ತಂಡವು ಸ್ಕಾಟ್ಲೆಂಡ್, ಇಂಗ್ಲೆಂಡ್ ಹಾಗೂ ಕ್ಯಾಮರೂನ್ ತಂಡಗಳ ವಿರುದ್ಧ ಸೋತಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.