ADVERTISEMENT

ಕಪಿಲ್‌ ವಿರುದ್ಧ ಟೀಕಾ ಪ್ರಹಾರ

‘ಅರ್ಜುನ ಪ್ರಶಸ್ತಿ’ ಸ್ವೀಕರಿಸಿದ ಬಾಕ್ಸರ್‌ ಮನೋಜ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 20:16 IST
Last Updated 26 ನವೆಂಬರ್ 2014, 20:16 IST

ನವದೆಹಲಿ (ಪಿಟಿಐ): ‘ಯಾರೇ ಆಗಲಿ ನನ್ನ ವಿರುದ್ಧ ಏನೇ ಟೀಕೆ ಮಾಡಿರಬಹುದು. ಆದರೆ, ನಾನು ಕಾಮನ್‌ವೆಲ್ತ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಎನ್ನುವುದನ್ನು ಮರೆಯಬಾರದು’ ಎಂದು ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಬಾಕ್ಸರ್‌ ಮನೋಜ್‌ ಕುಮಾರ್‌ ಹೇಳಿದರು. ಈ ಮೂಲಕ ಅವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್‌  ವಿರುದ್ಧ ಟೀಕಾ ಪ್ರಹಾರ ನಡೆಸಿದರು.

‘ನಾನು ಕೇವಲ ಮನೋಜ್‌ ಮಾತ್ರವಲ್ಲ. 2010ರ ಏಷ್ಯನ್‌ ಕೂಟದಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್‌ ಎಂದು ಕಪಿಲ್‌ ಅವರಿಗೆ ಅತ್ಯಂತ ಹೆಮ್ಮೆಯಿಂದ ಹೇಳುತ್ತೇನೆ’ ಎಂದು ಮನೋಜ್‌ ತಿರುಗೇಟು ನೀಡಿದರು.

ಅರ್ಜುನ ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಕಪಿಲ್ ದೇವ್‌  ಅವರು ಮನೋಜ್‌ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ವಿರೋಧ ವ್ಯಕ್ತಪಡಿಸಿದ್ದರು.

ಬದಲು ಇನ್ನೊಬ್ಬ ಬಾಕ್ಸರ್‌ ಜೈ ಭಗವಾನ್‌ ಹೆಸರನ್ನು ಇವರ ಸ್ಥಾನಕ್ಕೆ ಸೂಚಿಸಲಾಗಿತ್ತು. ಪ್ರಶಸ್ತಿ ಆಯ್ಕೆ ಸಮಿತಿ
ಹೆಸರು ಕೈ ಬಿಟ್ಟಿದ್ದ ಕಾರಣ ಮನೋಜ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

‘ಉದ್ದೀಪನ ಮದ್ದು ಸೇವಿಸಿದ್ದೇನೆ ಎಂದು ನನ್ನ ಮೇಲೆ ಯಾರೋ ವಿನಾಕಾರಣ ಆರೋಪ ಹೊರಿಸಿದ್ದರು. ಆದರೆ, ನಾನು ಯಾವ ತಪ್ಪು ಮಾಡಿಲ್ಲ ಎಂಬುದು ಚೆನ್ನಾಗಿ ಗೊತ್ತಿತ್ತು. ಇದರಿಂದ ತುಂಬಾ ಅವಮಾನವಾಗಿತ್ತು’ ಎಂದೂ ಮನೋಜ್‌ ಹೇಳಿದ್ದಾರೆ.

ಹರಿಯಾಣದ ಮನೋಜ್‌ 2007 ಮತ್ತು 2013ರ ಏಷ್ಯನ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. 2009ರ ಜೆಕ್‌ ಗ್ರ್ಯಾಂಡ್ ಟೂರ್ನಿಯಲ್ಲೂ ಕಂಚು ಜಯಿಸಿದ್ದರು.

ಪ್ರಶಸ್ತಿ ಪ್ರದಾನ: ಕೇಂದ್ರ ಕ್ರೀಡಾ ಸಚಿವ ಸೊನೋವಾಲ್‌ ಅವರು ಬುಧವಾರ ಮನೋಜ್‌ಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡಿದರು.

‘ಮನವಿ ಆಲಿಸಲಿಲ್ಲ’
'ನಾನು ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್‌. ನನ್ನ ಹೆಸರನ್ನು ಪ್ರಶಸ್ತಿ ಪಟ್ಟಿಯಿಂದ ಕೈಬಿಟ್ಟು ಕಂಚು ಗೆದ್ದ ಬಾಕ್ಸರ್‌ಗೆ ಪದಕ ನೀಡುತ್ತಿದ್ದೀರಿ. ಇದರಿಂದ ನನಗೆ ಅನ್ಯಾಯವಾಗುತ್ತಿದೆ ಎಂದು ಹೇಳಲು ಕಪಿಲ್‌ ಅವರಿಗೆ ಸಾಕಷ್ಟು ಸಲ ಫೋನ್ ಮಾಡಿದೆ. ಆದರೆ ಅವರು ಪದೇ ಪದೇ ಫೋನ್‌ ಸ್ಥಗಿತಗೊಳಿಸುತ್ತಿದ್ದರು. ಈ ಬಗ್ಗೆ ನನ್ನ ಬಳಿ ಏನೂ ಮಾತನಾಡಬೇಡಿ ಎಂದು ಖಾರವಾಗಿ ಹೇಳಿದ್ದರು’
-ಬಾಕ್ಸರ್‌ ಮನೋಜ್‌ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.