ADVERTISEMENT

ಕಹಿ ಮರೆಯುವ ಯತ್ನದಲ್ಲಿ ವಿಜಯ್‌ ಶಂಕರ್‌

ಸರಣಿ ಫೈನಲ್‌ನ ನಿರ್ಣಾಯಕ ಹಂತದಲ್ಲಿ ವೈಫಲ್ಯ ಕಂಡ ಆಲ್‌ರೌಂಡರ್‌

ಪಿಟಿಐ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST
ಕಹಿ ಮರೆಯುವ ಯತ್ನದಲ್ಲಿ  ವಿಜಯ್‌ ಶಂಕರ್‌
ಕಹಿ ಮರೆಯುವ ಯತ್ನದಲ್ಲಿ ವಿಜಯ್‌ ಶಂಕರ್‌   

ನವದೆಹಲಿ: ಶ್ರೀಲಂಕಾದಲ್ಲಿ ಕಳೆದ ಭಾನುವಾರ ನಡೆದ ನಿದಾಸ್ ಕಪ್ ತ್ರಿಕೋನ ಟ್ವೆಂಟಿ–20 ಸರಣಿಯ ಫೈನಲ್‌ನಲ್ಲಿ ವೈಫಲ್ಯ ಆನುಭವಿಸಿದ ಆಲ್‌ರೌಂಡರ್ ವಿಜಯ್ ಶಂಕರ್‌ ಆ ಕಹಿ ಮರೆಯಲು ಪ್ರಯತ್ನಿಸುತ್ತಿದ್ದಾರೆ.

ಸುದ್ದಿಸಂಸ್ಥೆ ಜೊತೆ ಬುಧವಾರ ಮಾತನಾಡಿದ ಅವರು, ‘ಸರಣಿಯುದ್ದಕ್ಕೂ ಉತ್ತಮವಾಗಿ ಆಡಿದ್ದೆ. ಆದರೆ ಕೊನೆಯ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆ ಸಂದರ್ಭವನ್ನು ಮರೆಯುವುದು ಕಷ್ಟಸಾಧ್ಯ. ಆದರೂ ಸಾಧನೆಯ ಹಾದಿಯಲ್ಲಿ ಮುಂದೆ ಸಾಗಲೇಬೇಕು. ಅದಕ್ಕಾಗಿ ಪ್ರಯತ್ನಿಸುತ್ತಿದ್ದೇನೆ’ ಎಂದರು.

‘ಮನೆ ಮಂದಿಗೂ ಸ್ನೇಹಿತರಿಗೂ ನಾನು ಏನು, ನನ್ನ ಸಾಮರ್ಥ್ಯ ಏನು ಎಂಬುದು ಗೊತ್ತು. ಆದ್ದರಿಂದ ಅವರು ಬೇಸರಪಟ್ಟುಕೊಳ್ಳಲಿಲ್ಲ. ಆದರೆ ಸಾಮಾಜಿಕ ತಾಣಗಳಲ್ಲಿ ಟೀಕೆಗಳು ಕೇಳಿ ಬಂದಿವೆ. ದೇಶಕ್ಕಾಗಿ ಆಡುವಾಗ ನಿರೀಕ್ಷೆ ಹುಸಿಯಾದರೆ ಇದೆಲ್ಲ ಸಹಜ. ನನ್ನಿಂದಾಗಿ ತಂಡ ಗೆದ್ದಿದ್ದರೆ ಅವರು ಅಭಿನಂದನೆಗಳ ಮಳೆ ಸುರಿಸುತ್ತಿದ್ದರು’ ಎಂದು ವಿಜಯ್‌ ಶಂಕರ್‌ ಹೇಳಿದರು.

ADVERTISEMENT

ಫೈನಲ್ ಪಂದ್ಯದಲ್ಲಿ 167 ರನ್‌ಗಳ ಜಯದ ಗುರಿ ಬೆನ್ನತ್ತಿದ್ದ ಭಾರತ ಗೆಲುವಿನತ್ತ ಹೆಜ್ಜೆ ಹಾಕಿತ್ತು. ಆದರೆ 18ನೇ ಓವರ್‌ನಲ್ಲಿ ವಿಜಯ್‌ ಶಂಕರ್‌ ನಾಲ್ಕು ಎಸೆತಗಳಲ್ಲಿ ರನ್ ಗಳಿಸಲಾಗದೆ ಪರದಾಡಿದ್ದರು. ಇದರಿಂದ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ದಿನೇಶ್‌ ಕಾರ್ತಿಕ್‌ ರೋಚಕ ಗೆಲುವು ಗಳಿಸಿಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.