ಮುಂಬೈ: ‘ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಜೊತೆ ಕ್ರಿಕೆಟ್ಗೆ ಸಂಬಂಧಿಸಿ ಉತ್ತಮ ಬಾಂಧವ್ಯ ಇದೆ. ಮುಂಬರುವ ದಿನಗಳಲ್ಲಿ ಇದು ಹಾಗೆಯೇ ಮುಂದುವರಿಯಲಿದೆ’ ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.
ಮೂರು ಟೆಸ್ಟ್, ಐದು ಪಂದ್ಯಗಳ ಏಕದಿನ ಸರಣಿ ಮತ್ತು ಟಿ–20 ಪಂದ್ಯಕ್ಕಾಗಿ ತಂಡ ಶ್ರೀಲಂಕಾಕ್ಕೆ ತೆರಳುವ ಮುನ್ನ ಅವರು ಮಾಧ್ಯಮದವರ ಜೊತೆ ಮಾತನಾಡಿದರು.
‘ನಮಗಿಬ್ಬರಿಗೂ ಜವಾಬ್ದಾರಿಯ ಬಗ್ಗೆ ಅರಿವಿದೆ. ರವಿಶಾಸ್ತ್ರಿ ಅವರು ನಿರ್ದೇಶಕರಾಗಿದ್ದಾಗ ಇಬ್ಬರೂ ಜೊತೆಯಾಗಿ ತಂಡದಲ್ಲಿ ಕೆಲಸ ಮಾಡಿದ್ದೇವೆ. ಆದ್ದರಿಂದ ನಮ್ಮ ನಡುವಿನ ಬಾಂಧವ್ಯಕ್ಕೆ ಹೊಸತೇನನ್ನೂ ಸೇರಿಸುವ ಅಗತ್ಯವಿಲ್ಲ’ ಎಂದು ಅವರು ಹೇಳಿದರು.
ಅನಿಲ್ ಕುಂಬ್ಳೆ ಜೊತೆಗಿನ ವೈಮನಸ್ಸಿಗೆ ಸಂಬಂಧಿಸಿ ಕೇಳಿ ಬಂದ ವಿವಾದಗಳ ಕುರಿತು ಪರೋಕ್ಷವಾಗಿ ಪ್ರತಿಕ್ರಿಯಿಸಿದ ಕೊಹ್ಲಿ ‘ಇತ್ತೀಚಿನ ದಿನಗಳಲ್ಲಿ ಅನೇಕ ಊಹಾಪೋಹಗಳು ಕೇಳಿ ಬಂದಿವೆ. ಇದಕ್ಕೆ ಕಾರಣವಾಗಿದ್ದ ಅಂಶಗಳು ಯಾವುದೂ ನನ್ನ ಪರಿಧಿಯಲ್ಲಿರಲಿಲ್ಲ. ಕ್ರೀಡಾಂಗಣದಲ್ಲಿ ತಂಡವನ್ನು ಉತ್ತಮವಾಗಿ ಮುನ್ನಡೆಸುವುದರ ಕಡೆಗಷ್ಟೇ ನಾನು ಗಮನ ನೀಡುತ್ತಿದ್ದೇನೆ’ ಎಂದರು.
‘ಇಲ್ಲಿಯವರೆಗೆ ನಡೆದ ಘಟನಾವಳಿಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ಕೆಲವು ವಾರಗಳಿಂದ ತಂಡದ ಪ್ರತಿಯೊಬ್ಬರೂ ಸಂಕಷ್ಟ ಅನುಭವಿಸಿದ್ದಾರೆ. ವಿಮರ್ಶೆಗೆ ಒಳಗಾಗಿದ್ದಾರೆ. ತಂಡ ವಿಮರ್ಶೆಗೆ ಒಳಗಾಗುವುದು ಹೊಸದೇನೂ ಅಲ್ಲವಾದ್ದರಿಂದ ಶ್ರೀಲಂಕಾ ಪ್ರವಾಸದ ಸಂದರ್ಭದಲ್ಲಿ ನಾನು ಒತ್ತಡಕ್ಕೆ ಒಳಗಾಗುವುದಿಲ್ಲ. ನನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಲು ಪ್ರಯತ್ನ ಹಾಕಲಿದ್ದೇನೆ’ ಎಂದು ಭಾರತ ತಂಡದ ನಾಯಕ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.