ADVERTISEMENT

ಕ್ವೀನ್‌ ಲತಿಫಾ ದೋಷ ಮುಕ್ತ: ಬಿಟಿಸಿ

​ಪ್ರಜಾವಾಣಿ ವಾರ್ತೆ
Published 7 ಮೇ 2017, 19:50 IST
Last Updated 7 ಮೇ 2017, 19:50 IST

ಬೆಂಗಳೂರು: ‘ಹೋದ ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಿನಲ್ಲಿ ನಡೆದಿದ್ದ ರೇಸ್‌ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಜಯಿಸಿದ್ದ ಮೂರು ವರ್ಷ ವಯಸ್ಸಿನ ‘ಕ್ವೀನ್‌ ಲತೀಫಾ’ ಕುದುರೆಗೆ ಉದ್ದೀಪನಾ ಮದ್ದು ನೀಡಲಾಗಿದೆ ಎಂಬ ಆರೋಪ ಸುಳ್ಳು’ ಎಂದು ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಮುಖ್ಯಸ್ಥ ವೈ. ಜಗನ್ನಾಥ್‌ ತಿಳಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕ್ವೀನ್‌ ಲತೀಫಾಗೆ ಉದ್ದೀಪನಾ ಮದ್ದು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವ್ಯಾಪಕ ತನಿಖೆ ನಡೆಸುವಂತೆ ಅ್ಯನಿಮಲ್‌ ವೆಲ್‌ಫೇರ್‌ ಬೋರ್ಡ್‌ ಆಫ್‌ ಇಂಡಿಯಾ ಏಪ್ರಿಲ್‌ 26ರಂದು ನಮಗೆ ಪತ್ರದ ಮೂಲಕ ಆದೇಶ ನೀಡಿತ್ತು. ಅದರಂತೆ ಕುದುರೆಯಿಂದ ಸಂಗ್ರಹಿಸಿದ್ದ ಮೂತ್ರದ ‘ಬಿ’ ಮಾದರಿಯನ್ನು ಮಾರಿ ಷಸ್‌ನಲ್ಲಿರುವ ಕ್ವಾಂಟಿ ಪ್ರಯೋಗಾಲ ಯಕ್ಕೆ ಕಳುಹಿಸಿದ್ದೆವು. ಮೇ 5ರಂದು ಅದರ ಅಂತಿಮ ವರದಿ ಬಂದಿದ್ದು ಇದರಲ್ಲಿ ಮದ್ದಿನ ಅಂಶ ಇಲ್ಲ ಎಂಬುದು ದೃಢಪಟ್ಟಿದೆ’ ಎಂದರು.

‘ಬಿಟಿಸಿಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಕೆಲವರು ಸುಳ್ಳು ಆರೋಪ ಮಾಡಿದ್ದರು. ಆಧಾರ ಇಲ್ಲದೇ ಏನನ್ನೂ ಹೇಳಬಾರದು ಅಂತ ಇಷ್ಟು ದಿನ ಮೌನ ವಹಿಸಿದ್ದೆವು. ಸತ್ಯ ಏನು ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ಆರೋಪ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆ, ಬೇಡವೇ ಎಂಬ ಪ್ರಶ್ನೆ ಈಗ ಬೇಡ. ಆಗಿದ್ದೆಲ್ಲಾ ಆಗಿ ಹೋಗಿದೆ. ಇದನ್ನು ಇಲ್ಲಿಗೆ ಬಿಟ್ಟು ಅಭಿವೃದ್ಧಿ ಚಟುವಟಿಕೆಗಳತ್ತ ಗಮನ ಹರಿಸುತ್ತೇವೆ’ ಎಂದು ಅವರು ತಿಳಿಸಿದರು.

ADVERTISEMENT

‘ಉಸಿರಾಟದ ತೊಂದರೆ, ದಣಿವು ಮತ್ತು ನೋವು ನಿವಾರಣೆಯ ಉದ್ದೇಶದಿಂದ ಸಾಮಾನ್ಯವಾಗಿ ಎಲ್ಲಾ ಕುದುರೆ ಗಳಿಗೂ ‘ಪ್ರೋಕೈನ್‌’ ಪೆನ್ಸಿಲಿನ್‌ ಚುಚ್ಚು ಮದ್ದನ್ನು ನೀಡಲಾಗುತ್ತದೆ.  ಕ್ವೀನ್‌ ಲತಿಫಾಗೆ ಜನವರಿ 27ರಿಂದ ಫೆಬ್ರುವರಿ 7ರ ಅವಧಿಯಲ್ಲಿ ಕ್ಲಬ್‌ನ ಪಶು ಆಸ್ಪತ್ರೆಯಲ್ಲೇ ಆರೈಕೆ ಮಾಡಲಾಗಿತ್ತು. ಆಗ  ವೈದ್ಯರು ಪ್ರೋಕೈನ್‌ ಚುಚ್ಚುಮದ್ದು ನೀಡಿದ್ದರು.  ಅದಾದ 25 ದಿನಗಳ ನಂತರ (ಮೇ 5ರಂದು) ಈ ಕುದುರೆ ರೇಸ್‌ನಲ್ಲಿ   ಗೆದ್ದಿತ್ತು. ರೇಸ್‌ ಮುಗಿದ ಬಳಿಕ ಗೆದ್ದ ಎಲ್ಲಾ ಕುದುರೆಗಳ ಮೂತ್ರದ ಮಾದರಿಯನ್ನು ಸಂಗ್ರಹಿಸಿ ಅದನ್ನು ಪರೀಕ್ಷೆಗೆ ನವದೆಹಲಿಯಲ್ಲಿರುವ ಲ್ಯಾಬೋರೇಟರಿಗೆ ಕಳುಹಿಸಿ ಕೊಡಲಾಗುತ್ತದೆ. ಮೊದಲಿನಿಂದಲೂ ಇದನ್ನು ಪಾಲಿಸಿ ಕೊಂಡು ಬರುತ್ತಿದ್ದೇವೆ. ಕುದುರೆಯಿಂದ ಸಂಗ್ರಹಿಸಿದ ಪ್ರತಿ ಮಿಲಿ ಲೀಟರ್‌  ಮೂತ್ರದಲ್ಲೂ 10 ನ್ಯಾನೊಗ್ರಾಂ ಪ್ರೋಕೈನ್‌ ಅಂಶ ಇರಬಹುದು ಎಂದು ಯುರೋ ಪಿಯನ್‌ ಹಾರ್ಸ್‌ ರೇಸಿಂಗ್‌ ಸೈಂಟಿಫಿಕ್‌ ಲಿಯಸನ್‌ ಸಮಿತಿ ಶಿಫಾರಸು ಮಾಡಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ದಿನ ಅಂಶ ಪತ್ತೆ ಆದರೆ ಮಾತ್ರ ಅಪರಾಧ ವಾಗುತ್ತದೆ. ಆಗ ಅಂತಹ ಕುದುರೆಯ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬಹುದು’ ಎಂದು ಬಿಟಿಸಿಯ  ಉಪಪ್ರಧಾನ ಪಶುವೈದ್ಯಾಧಿಕಾರಿ ಮಹೇಶ್‌ ಮಾಹಿತಿ ನೀಡಿದರು.

ಬಿಟಿಸಿಯ ಸ್ಟೀವರ್ಡ್‌ ಅಜಿತ್ ಸಾಲ್ಡಾನ, ಹಿರಿಯ ಪಶುವೈದ್ಯಾಧಿಕಾರಿ ಸಯ್ಯದ್‌ ನವೀದ್‌  ಅವರೂ ಪೂರಕ ಮಾಹಿತಿಗಳನ್ನು ನೀಡಿದರು.
ಏನಿದು ಆರೋಪ: ಏಪ್ರಿಲ್‌ ಮೂರನೇ ವಾರ ಕರ್ನಾಟಕ ಕುದುರೆ ಮಾಲೀಕರ ಸಂಘದ ಪದಾಧಿಕಾರಿ ಎಚ್‌.ಎಸ್‌. ಚಂದ್ರೇಗೌಡ ಎಂಬುವವರು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ದೂರು ನೀಡಿ ‘ಕ್ವೀನ್‌ ಲತೀಫಾ’ಗೆ  ‘ಕೆಟಗರಿ–3’ ಮದ್ದು ನೀಡಿದ್ದರಿಂದಲೇ  ನಿರ್ದಿಷ್ಟ ರೇಸ್‌ನಲ್ಲಿ ಗೆದ್ದಿದ್ದು ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.