ಡಸೆಲ್ಡಾರ್ಫ್: ಅಚಂತ ಶರತ್ ಕಮಲ್ ಅವರು ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಆಡುವ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ.
ಮೇ 29 ರಿಂದ ಜೂನ್ 5ರವರೆಗೆ ಇಲ್ಲಿ ಟೂರ್ನಿ ನಡೆಯಲಿದೆ. 53ನೇ ಶ್ರೇಯಾಂಕದ ಶರತ್ ಅವರ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ.
ಸೌಮ್ಯಜೀತ್ ಘೋಷ್ (83ನೇ ಶ್ರೇಯಾಂಕ), ಜಿ. ಸತ್ಯನ್ ಮತ್ತು ಹರ್ಮೀತ್ ದೇಸಾಯಿ (95) ಪುರುಷರ ವಿಭಾಗದಲ್ಲಿ ಭರವಸೆ ಮೂಡಿಸಿರುವ ಆಟಗಾರರಾಗಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಮಣಿಕಾ ಬಾತ್ರಾ (103), ಮೌಮಾ ದಾಸ್, ಐಹಿಕಾ ಮುಖರ್ಜಿ ಅವರು ಇದ್ದಾರೆ. 34 ವರ್ಷದ ಶರತ್ ಅವರು ಈಚೆಗೆ ಚೀನಾದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಉತ್ತಮವಾಗಿ ಆಡಿದ್ದರು. ಸದ್ಯ ಅವರು ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ.
ತಂಡದೊಂದಿಗೆ ವಿದೇಶಿ ಕೋಚ್ ಮಸಿಮೊ ಕೊಸ್ತಾಂತಿನಿ ಮತ್ತು ಮುಖ್ಯ ಕೋಚ್ ಸೌಮ್ಯದೀಪ್ ರಾಯ್ ಕೂಡ ತಂಡದೊಂದಿಗೆ ಇದ್ದಾರೆ.
ಭಾರತದ ಆಟಗಾರರು ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಪುರುಷರ ವಿಭಾಗದಲ್ಲಿ ಜಿ ಸತ್ಯನ್ ಮತ್ತು ಹರ್ಮೀತ್ ದೇಸಾಯಿ, ಮಹಿಳೆಯರ ವಿಭಾಗದಲ್ಲಿ ಮಣಿಕಾ ಬಾತ್ರಾ ಹಾಗೂ ಮೌಮಾ ದಾಸ್; ಐಹಿಕಾ ಮತ್ತು ಮಧುರಿಕಾ ಅವರು ಡಬಲ್ಸ್ನಲ್ಲಿ ಆಡಲಿದ್ದಾರೆ.
‘ವಿಶ್ವ ಚಾಂಪಿಯನ್ಷಿಪ್ನಲ್ಲಿ ಬಹಳ ಕಠಿಣ ಸ್ಪರ್ಧೆ ಇರುತ್ತದೆ. ಭಾರತದ ಆಟಗಾರರು ಪರಿಶ್ರಮ ಮತ್ತು ಚಾಣಾಕ್ಷ್ಯತನದಿಂದ ಆಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು’ ಎಂದು ಕೋಚ್ ಮಾಸಿಮೊ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.