ನವದೆಹಲಿ: ‘ಗುಲಾಬಿ ವರ್ಣದ ಚೆಂಡು ಬಳಸಿ ಟೆಸ್ಟ್ ಪಂದ್ಯ ನಡೆಸುವ ಆಲೋಚನೆ ಸದ್ಯಕ್ಕಂತೂ ಇಲ್ಲ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
ಇದರೊಂದಿಗೆ ಭಾರತದಲ್ಲಿ ಮೊದಲ ಬಾರಿಗೆ ಹೊನಲು ಬೆಳಕಿನಲ್ಲಿ ಟೆಸ್ಟ್ ಪಂದ್ಯ ಆಯೋಜನೆಯಾಗಲಿದೆ ಎಂಬ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.
ಭಾರತ ತಂಡ ಸೆಪ್ಟೆಂಬರ್ನಿಂದ ಮುಂದಿನ ವರ್ಷದ ಫೆಬ್ರುವರಿ–ಮಾರ್ಚ್ ಅವಧಿಯಲ್ಲಿ 13 ಟೆಸ್ಟ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೂರು ಪಂದ್ಯಗಳ ಪೈಕಿ ಒಂದನ್ನು ಹೊನಲು–ಬೆಳಕಿನಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿ ಯನ್ನು ಹೊನಲು ಬೆಳಕಿನಲ್ಲಿ ನಡೆಸಿದ್ದು ಇದಕ್ಕೆ ಪುಷ್ಟಿ ನೀಡಿತ್ತು.
‘ಗುಲಾಬಿ ವರ್ಣದ ಚೆಂಡು ಬಳಕೆ ಮಾಡಿ ಹೊನಲು ಬೆಳಕಿನಲ್ಲಿ ಟೆಸ್ಟ್ ನಡೆಸುವ ಬಗ್ಗೆ ಇನ್ನೂ ಆಲೋಚಿಸಿಲ್ಲ. ದುಲೀಪ್ ಟ್ರೋಫಿಯಲ್ಲಿ ಇದನ್ನು ಪ್ರಾಯೋಗಿಕವಾಗಿ ಅಳವಡಿಸಿ ಯಶಸ್ವಿ ಯಾಗಿದ್ದೇವೆ. ಹಾಗಂತ ಅವಸರದ ನಿರ್ಧಾರ ಕೈಗೊಳ್ಳುವುದಿಲ್ಲ. ಈ ಸಂಬಂಧ ಎಲ್ಲಾ ಆಯಾಮಗಳಿಂದ ಯೋಚಿಸಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ’ ಎಂದು ಅನುರಾಗ್ ನುಡಿದಿದ್ದಾರೆ.
‘ದುಲೀಪ್ ಟ್ರೋಫಿಯಲ್ಲಿ ಗುಲಾಬಿ ವರ್ಣದ ಚೆಂಡು ಬಳಸಿದ್ದರ ಬಗ್ಗೆ ಹಾಲಿ ಮತ್ತು ಮಾಜಿ ಆಟಗಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೂರ್ನಿಯ ವೇಳೆ ಚೆಂಡು ಬೇಗನೆ ಹೊಳಪು ಕಳೆದುಕೊಳ್ಳುತ್ತದೆ ಎಂದು ಹಲವರು ದೂರಿದ್ದಾರೆ. ಸಚಿನ್ ತೆಂಡೂಲ್ಕರ್ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.