ಬೆಂಗಳೂರು: ರವಿಕುಮಾರ್, ಅಕ್ಷಯ್ ಮತ್ತು ಶ್ರವಣ್ ಕುಮಾರ್ ಅವರ ಉತ್ತಮ ಆಟದಿಂದಾಗಿ ಬಿಎಸ್ಎನ್ ಎಲ್ ತಂಡ ರಾಜ್ಯ ವಾಲಿಬಾಲ್ ಸಂಸ್ಥೆ ಮತ್ತು ದೈಹಿಕ ಶಿಕ್ಷಣ ಕ್ರೀಡಾ ಅಕಾಡೆಮಿ ಸಹಯೋಗದ ರಾಜ್ಯ ಸೀನಿಯರ್ ‘ಎ’ ಡಿವಿಷನ್ ವಾಲಿಬಾಲ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಗೆದ್ದಿದೆ.
ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾ ಸಂಕೀರ್ಣದ ಅಂಗಳದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬಿಎಸ್ಎನ್ಎಲ್ 20–25, 25–21, 25–19, 25–21ರಲ್ಲಿ ಎಎಸ್ಸಿ ತಂಡವನ್ನು ಮಣಿಸಿತು.
ಮೊದಲ ಸೆಟ್ನಲ್ಲಿ ಮಿಂಚಿನ ಆಟ ಆಡಿದ ಎಎಸ್ಸಿ ತಂಡ ಮುನ್ನಡೆ ಕಂಡುಕೊಂಡಿತು. ಆದರೆ ನಂತರದ ಮೂರೂ ಸೆಟ್ಗಳಲ್ಲಿ ಬಿಎಸ್ಎನ್ಎಲ್ ತಂಡ ಪರಿಣಾಮಕಾರಿ ಆಟ ಆಡಿ ಎದುರಾಳಿಗಳ ಸದ್ದಡಗಿಸಿತು. ಇನ್ನೊಂದು ಪಂದ್ಯದಲ್ಲಿ ಜೆಎಸ್ಡಬ್ಲ್ಯು 25–8, 25–16, 25–19 ರಲ್ಲಿ ಡಿವೈಇಎಸ್ ತಂಡವನ್ನು ಮಣಿಸಿತು.
ಮಹಿಳೆಯರ ವಿಭಾಗದ ಪಂದ್ಯದಲ್ಲಿ ಸಾಯ್ 25–6, 25–15ರಲ್ಲಿ ಎಂಎಸ್ ಎಚ್ ತಂಡದ ವಿರುದ್ಧ ಗೆದ್ದಿತು. ಈ ಹೋರಾಟ 40 ನಿಮಿಷದಲ್ಲಿ ಮುಗಿಯಿತು. ವಿಜಯಿ ತಂಡದ ನಮ್ರತಾ, ಪ್ರಿಯಾಂಕ ಮತ್ತು ರೋಜಾ ಮಿಂಚಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.