ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಜಸ್ಪ್ರೀತ್ ಬೂಮ್ರಾ ಅವರನ್ನು ಕಣಕ್ಕಿಳಿಸುವುದು ಉತ್ತಮ ಎಂದು ಹಿರಿಯ ಕ್ರಿಕೆಟಿಗ ಆಶಿಶ್ ನೆಹ್ರಾ ಅಭಿಪ್ರಾಯಪಟ್ಟರು.
ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ಕುರಿತು ನೆಹ್ರಾ ಅವರು ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನ ನೀಡಿದರು. ‘ಬೂಮ್ರಾ ಅವರ ವಿಶೇಷ ಬೌಲಿಂಗ್ ಶೈಲಿ ಮತ್ತು ಯಾರ್ಕರ್ ಕೇಪ್ಟೌನ್ ಪಿಚ್ನಲ್ಲಿ ಪರಿಣಾಮ ಬೀರಲಿದೆ’ ಎಂದು ಅವರು ಹೇಳಿದರು.
‘ಜನವರಿ ತಿಂಗಳಲ್ಲಿ ಕೇಪ್ಟೌನ್ನ ವಾತಾವರಣ ವೇಗದ ಬೌಲಿಂಗ್ಗೆ ಪೂರಕವಾಗಿರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಭುವನೇಶ್ವರ್ ಕುಮಾರ್ ಅವರಿಗೆ ಚೆಂಡನ್ನು ಸ್ವಿಂಗ್ ಮಾಡುವುದು ಪ್ರಯಾಸಕರವಾಗಲಿದೆ. ಮಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಅವರಿಗೂ ಕೆಲವು ಮಿತಿಗಳಿವೆ. ಆದ್ದರಿಂದ ಹೀಗಾಗಿ ಕೇಪ್ಟೌನ್ನಲ್ಲಿ ಬೂಮ್ರಾ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ನೆಹ್ರಾ ಅಭಿಪ್ರಾಯಪಟ್ಟರು.
ಅಶ್ವಿನ್, ಜಡೇಜ ಮೇಲೆ ವಿಶ್ವಾಸ
ಇದೇ ವೇಳೆ ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರು ದಕ್ಷಿಣ ಆಫ್ರಿಕಾದ ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ನಲ್ಲಿ ಸೂಕ್ತ ಬದಲಾವಣೆ ತರಲಿದ್ದಾರೆ’ ಎಂದು ಟೆಸ್ಟ್ ತಂಡದ ಉಪ ನಾಯಕ ಅಜಿಂಕ್ಯ ರಹಾನೆ ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.