ಬೆಂಗಳೂರು: ಮುಂಬೈ ಮತ್ತು ಕರ್ನಾಟಕ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ಸೋಲಿನ ಭೀತಿ ಎದುರಿಸುತ್ತಿದೆ.
ಕರ್ನಾಟಕ ನೀಡಿದ 445 ರನ್ ಗುರಿ ಬೆನ್ನಟ್ಟಿದ ಮುಂಬೈ, ಮೂರನೇ ದಿನದ ಆಟದಲ್ಲಿ 5 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದೆ. ಆರಂಭಿಕ ಆಟಗಾರ ಅಖಿಲ್ ಹೆರ್ವಾಡ್ಕರ್ 31ರನ್ ಗಳಿಸಿ ಮಿಥುನ್ಗೆ ವಿಕೆಟ್ ಒಪ್ಪಿಸಿದರು.
ತಾರೆ ಅರ್ಧಶತಕ: ಎರಡನೇ ದಿನದ ಆಟದ ಅಂತ್ಯದಲ್ಲಿ 40 ರನ್ ಗಳಿಸಿದ್ದ ಮುಂಬೈ ನಾಯಕ ಆದಿತ್ಯ ತಾರೆ ಶುಕ್ರವಾರ ಬೆಳಿಗ್ಗೆ ಆಟ ಮುಂದುವರೆಸಿ 15 ಬೌಂಡರಿಗಳನ್ನು ಒಳಗೊಂಡ 98 ರನ್ಗಳನ್ನು ಗಳಿಸಿದರು. ಅವರಿಗೆ ಇನ್ನೊಂದು ಬದಿಯಲ್ಲಿ ಬೆಂಬಲ ನೀಡಿದ ಎಸ್.ಎಸ್ ಅಯ್ಯರ್ 50 ರನ್ ಗಳಿಸಿ ಮಿಥುನ್ಗೆ ವಿಕೆಟ್ ಒಪ್ಪಿಸಿದರು. ಭೋಜನ ವಿರಾಮದ ಬಳಿಕ ಎಸ್.ಅರವಿಂದ್ ಅವರ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಉತ್ತಪ್ಪಗೆ ಕ್ಯಾಚ್ ನೀಡಿ ತಾರೆ ನಿರ್ಗಮಿಸಿದರು.
ತಾರೆ ನಿರ್ಗಮಿಸಿದ ಬೆನ್ನಲ್ಲೇ, ಸೂರ್ಯಕುಮಾರ್ ಯಾದವ್ 36 ರನ್ ಗಳಿಸಿ ಔಟಾದರು. ಪಾಟೀಲ್ ಶೂನ್ಯಕ್ಕೆ ವಿನಯ್ ಕುಮಾರ್ಗೆ ಬಲಿಯಾದರು. ಮುಂಬೈ ದಿನದ ಆಟದ ಅಂತ್ಯಕ್ಕೆ 277ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಕರ್ನಾಟಕ ಪರ ಮಿಥುನ್ 3 ವಿಕೆಟ್, ವಿನಯ್, ಅರವಿಂದ್, ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು. ಸಿದ್ದಾರ್ಥ್ ಲಾಡ್ (41) ಮತ್ತು ಅಭಿಷೇಕ್ ನಾಯರ್ (02) ಕ್ರೀಸ್ ಕಾಯ್ದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.