ADVERTISEMENT

ರಾಜ್ಯಪಾಲರ ಆದೇಶ ಅಸಿಂಧು

ಹೈಕೋರ್ಟ್‌ ಮಹತ್ವದ ತೀರ್ಪು: ವಜುಭಾಯ್‌ ವಾಲಾಗೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 19:30 IST
Last Updated 27 ನವೆಂಬರ್ 2014, 19:30 IST

ಧಾರವಾಡ: ವಿಶ್ವವಿದ್ಯಾಲಯದ ಅಕ್ರಮ­ಗಳಿಗೆ ಸಂಬಂಧಿಸಿದಂತೆ ಕುಲ­ಪತಿಗಳ ವಿರುದ್ಧ ವಿಚಾರಣಾ ಆಯೋಗ ನೇಮಿಸಲು ವಿಶ್ವವಿದ್ಯಾಲಯ ಕಾಯ್ದೆಯ ಕಲಂ 8(1)ರಡಿ ರಾಜ್ಯ­ಪಾ­ಲರಿಗೆ ಅಧಿಕಾರ ಇಲ್ಲ ಎಂದು ಇಲ್ಲಿನ ಹೈಕೋರ್ಟ್‌ಪೀಠ ಆದೇಶ ನೀಡಿದೆ. 

ಕರ್ನಾಟಕ ವಿವಿಯಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ವಿಚಾ­ರಣೆಗೆ ನ್ಯಾ.ಪದ್ಮರಾಜ ಆಯೋಗ ನೇಮಿಸಿ ರಾಜ್ಯಪಾಲರು ಹೊರಡಿಸಿದ್ದ

ಸದಾ ಸತ್ಯಕ್ಕೇ ಜಯ
‘ಸುಳ್ಳು ಕೆಂಭೂತದಂತೆ ಕುಣಿಯು­ತ್ತದೆ. ಸತ್ಯ ತೆವ­ಳು­ತ್ತದೆ. ಆದರೆ ಸದಾ ಸತ್ಯಕ್ಕೇ ಜಯ. ಗೆಲುವು ನನಗೆ ಸಂತೋಷ-­ವನ್ನುಂಟು ಮಾಡಿಲ್ಲ. ಏಕೆಂದರೆ ಕಳೆದ ಕೆಲವು ತಿಂಗಳಿನಿಂದ ನಾನು ಅನುಭವಿಸಿರುವ ನೋವು ಹಾಗೂ ಅವಮಾನ ನನ್ನ ವೈರಿಗೂ ಬರಬಾರದು’ ಎಂದು ತೀರ್ಪಿನ ಕುರಿತು ಡಾ.ವಾಲೀಕಾರ  ಪ್ರತಿಕ್ರಿಯಿಸಿದರು.
‘ನಮ್ಮಂಥವರು ಅಧಿಕಾರವನ್ನು ಬಯಸಬಾರದು. ನನಗೆ ಯಾರ ಮೇಲೂ ದ್ವೇಷ­ವಿಲ್ಲ. ರಾಜಕೀಯ ವ್ಯಕ್ತಿಗಳ ಕುರಿತು ಮಾತನಾಡುವ ಸ್ಥಿತಿಯಲ್ಲಿ ನಾನಿಲ್ಲ. ಉಳಿದಿರುವ ಬದುಕನ್ನು ಅಧ್ಯಯನದಲ್ಲಿ ತೊಡಗಿಸಿ­ಕೊಳ್ಳಲು ತೀರ್ಮಾನಿ­ಸಿದ್ದೇನೆ’ ಎಂದರು.

ಅಧಿ­ಸೂಚ­­ನೆಯನ್ನು ಅವರ ಅಧಿಕಾರ ವ್ಯಾಪ್ತಿಯ ಆಧಾರದಲ್ಲಿ ಹೈಕೋರ್ಟ್‌ ಅನೂ­ರ್ಜಿತಗೊಳಿಸಿದೆ. ಜೊತೆಗೆ ಆಯೋಗ ನೀಡಿದ್ದ ವರದಿ, ವರದಿಯ ಆಧಾರದಲ್ಲಿ ದೂರು ನೀಡುವಂತೆ ರಾಜ್ಯ­ಪಾಲರು ನೀಡಿದ್ದ ನಿರ್ದೇಶನ, ದಾಖ­ಲಾಗಿದ್ದ ಎಫ್‌ಐಆರ್‌ ಅನ್ನು ಕೂಡಾ ನ್ಯಾಯಮೂರ್ತಿ ಎಚ್.ಬಿಳ್ಳಪ್ಪ ಅವರಿದ್ದ ಏಕಸದಸ್ಯ ಪೀಠ ರದ್ದುಗೊಳಿಸಿದೆ.

ಆದರೆ ವಿಶ್ವವಿದ್ಯಾಲಯದ ಹಿತ­ದೃಷ್ಟಿಯಿಂದ ಅಕ್ರಮಗಳ ಆರೋಪ ಕುರಿತು ರಾಜ್ಯಪಾಲರು, ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಕಾನೂನಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಸ್ವತಂತ್ರರು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ನ್ಯಾ.ಪದ್ಮರಾಜ ಆಯೋಗ ನೀಡಿದ್ದ ವರದಿ ಆಧಾರದಲ್ಲಿ ದೂರು ದಾಖಲಿ­ಸುವಂತೆ ರಾಜ್ಯಪಾಲರು ನೀಡಿದ್ದ ಆದೇಶ ಮತ್ತು ಎಫ್‌ಐಆರ್‌ ರದ್ದು­ಗೊಳಿಸುವಂತೆ ಕೋರಿ ವಿಶ್ರಾಂತ ಕುಲಪತಿ ಡಾ. ಎಚ್‌.ಬಿ.ವಾಲೀಕಾರ  ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಗುರುವಾರ ನ್ಯಾಯಪೀಠ ಪುರಸ್ಕರಿಸಿತು.
 

ADVERTISEMENT
ತೀರ್ಪಿನ ಕುರಿತು ಮಾಹಿತಿ ಇಲ್ಲ
‘ಯುಜಿಸಿ ಕಾರ್ಯಕ್ರಮದ ನಿಮಿತ್ತ ದೆಹಲಿಯಲ್ಲಿದ್ದೇನೆ. ಹೀಗಾಗಿ ಹೈಕೋರ್ಟ್‌ ತೀರ್ಪಿನ ಕುರಿತು ಯಾವುದೇ ಮಾಹಿತಿ ಇಲ್ಲ’ ಎಂದು ಕುಲಸಚಿವೆ ಡಾ.ಚಂದ್ರಮಾ ಕಣಗಲಿ ಹೇಳಿದರು.

‘ವಿಶ್ವವಿದ್ಯಾಲಯ ಕಾಯ್ದೆಯು ‘ನೌಕರ’ ಎನ್ನುವ ಪದಕ್ಕೆ ಸ್ಪಷ್ಟ ವ್ಯಾಖ್ಯಾನ ನೀಡಿಲ್ಲ. ಕುಲಪತಿ ವಿ.ವಿಯ ನೌಕರರೇ ಅಥವಾ ಅಧಿಕಾರಿಯೇ ಎನ್ನುವ ಪ್ರಶ್ನೆ ಇದೆ. ಕುಲಾಧಿಪತಿಗಳು ವಿ.ವಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಬಹುದು. ಆದರೆ ಅಧಿಕಾರಿಗಳ ವಿರುದ್ಧ ಅಲ್ಲ. ಹೀಗಾಗಿ ವಿಶ್ವವಿದ್ಯಾಲಯ ಕಾಯ್ದೆ ಕಲಂ 8(1)ರಡಿ ವಿಚಾರಣಾ ಆಯೋಗ ನೇಮಿಸಿರುವುದು ಅವರ ಅಧಿಕಾರ ವ್ಯಾಪ್ತಿಯಿಂದ ಹೊರತಾದುದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಈ ಪ್ರಕರಣದಲ್ಲಿ ಆಯೋಗವು ಕುಲಪತಿಗಳಿಗೆ ಹೇಳಿಕೆ ನೀಡಲು ಅವಕಾಶ ನೀಡದೆ ಸಹಜ ನ್ಯಾಯ ತತ್ವವನ್ನು ಉಲ್ಲಂಘಿಸಿದೆ. ಅಲ್ಲದೇ ಆಯೋಗ ಸಲ್ಲಿಸಿದ ವರದಿಯ ಆಧಾರದಲ್ಲಿ ದೂರು ನೀಡುವಂತೆ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ. ಆ ಪ್ರಕಾರ ನೀಡಿದ ದೂರಿನ ಮೇಲೆ ದಾಖಲಿಸಿರುವ ಎಫ್‌ಐಆರ್‌ಗೂ ಕಾನೂನಿನ ದೃಷ್ಟಿಯಲ್ಲಿ ಮಾನ್ಯತೆ ಇಲ್ಲ’ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

‘ಆರೋಪಿಯು ವಿಚಾರಣೆಗೆ ಒಪ್ಪಿಕೊಂಡಿ­ರುವುದರಿಂದ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸುವ ಅಧಿಕಾರ ಇಲ್ಲ ಎನ್ನುವ ಪ್ರತಿವಾದಿಗಳ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಅರ್ಜಿದಾರರು ರಾಜ್ಯಪಾಲರ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಮಧ್ಯಾಂತರ ತಡೆಯಾಜ್ಞೆ ನೀಡಬೇಕು ಎನ್ನುವ ಅರ್ಜಿ­ದಾರರ ಮನವಿಯನ್ನು ಕಾನೂನಿನ ತಡೆ ಇದ್ದುದರಿಂದ ಆಗ ನೀಡಿರಲಿಲ್ಲ. ವಿಚಾರಣೆ ಬಾಕಿ ಇರುವಾಗಲೇ ಅವರನ್ನು ಬಂಧಿಸಲಾಯಿತು. ಈ ಮಧ್ಯೆ, ಅರ್ಜಿದಾರರಿಗೆ ಷರತ್ತು ಬದ್ಧ ಜಾಮೀನು ದೊರಕಿದ್ದು, ನ್ಯಾಯಾಲಯದ ಷರತ್ತಿಗೆ ಅನುಗುಣ­ವಾಗಿ ಅವರು ವಿಚಾರಣೆಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಪ್ರಶ್ನಿಸುವ ಹಕ್ಕು ಇದೆ’ ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ ಪಾಟೀಲ, ಎಂ.ಎಚ್‌.ಪಾಟೀಲ, ರಾಜ್ಯಪಾಲರ ಕಚೇರಿ ಪರ ಹಿರಿಯ ವಕೀಲ ವಿಜಯಶಂಕರ, ಲೋಕಾಯುಕ್ತ ಪರ ಎಂ.ಎಸ್‌.ಹಿರೇಮಠ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.