ADVERTISEMENT

ವಿಂಡೀಸ್‌ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು

ತಂಡವನ್ನು ಗೆಲುವಿನ ದಡ ದಾಟಿಸಿದ ನಾಯಕ ದೋನಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 14:03 IST
Last Updated 6 ಮಾರ್ಚ್ 2015, 14:03 IST
ವಿಂಡೀಸ್‌ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು
ವಿಂಡೀಸ್‌ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು   

ಪರ್ತ್‌: ವೆಸ್ಟ್‌ ಇಂಡೀಸ್‌ ನೀಡಿದ183 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನೆಟ್ಟಿದ ಭಾರತ ಕೊನೆಗೂ 39.1 ಓವರ್‌ಗಳಲ್ಲಿ 6  ವಿಕೆಟ್‌ ಕಳೆದುಕೊಂಡು 4 ವಿಕೆಟ್‌ಗಳ ಪ್ರಯಾಸದ ಗೆಲುವು ಗಳಿಸಿದೆ. ಈ ಮೂಲಕ ವಿಶ್ವಕಪ್‌ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿದೆ.

ಮೊದಲ 10  ಓವರ್‌ಗಳಲ್ಲೇ ರೋಹಿತ್‌ ಶರ್ಮಾ (7) ಮತ್ತು ಶಿಖರ್‌ ಧವನ್‌ (9) ಅವರ ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ಆರಂಭಿಕ ಒತ್ತಡಕ್ಕೆ ಸಿಲುಕಿತು. 5ಬೌಂಡರಿ ಸಿಡಿಸಿ 33 ರನ್‌ ಗಳಿಸಿ ಆಡುತ್ತಿದ್ದ ವಿರಾಟ್‌ ಕೋಹ್ಲಿ ಕೂಡ 14 ನೇ ಓವರ್‌ನಲ್ಲಿ ಮರ್ಲಾನ್ ಸ್ಯಾಮುಯೆಲ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಅವರ ಬೆನ್ನಿಗೇ  ರೆಹಾನೆ (14) ಮತ್ತು ಸುರೇಶ್‌ ರೈನಾ (22) ಔಟಾದರು.

ಒಂದು ಹಂತದಲ್ಲಿ 107 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಭಾರತ ಒತ್ತಡಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಕ್ರೀಸಿಗೆ ಅಂಟಿಕೊಂಡು ಸಮಯೋಚಿತ ಆಟವಾಡಿದ ನಾಯಕ ದೋನಿ ಕೊನೆಯವರೆಗೂ ಔಟಾಗದೆ ಉಳಿದು 45 ರನ್‌ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ದೋನಿ ಅವರ ಮೊತ್ತದಲ್ಲಿ 1 ಸಿಕ್ಸರ್‌ ಮತ್ತು 3 ಬೌಂಡರಿ ಸೇರಿದೆ. ದೋನಿಗೆ ಜತೆಯಾದ ಆರ್‌. ಅಶ್ವಿನ್‌ 16  ರನ್‌ ಗಳಿಸಿದರು.

ವೆಸ್ಟ್‌ಇಂಡೀಸ್‌: ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ವೆಸ್ಟ್‌ಇಂಡೀಸ್‌ ಭಾರತದ ಕರಾರುವಕ್ಕಾದ ಬೌಲಿಂಗ್‌ ದಾಳಿಗೆ ಸಿಲುಕಿ 44.2 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 182 ರನ್‌ಗಳಿಸಿತು.

ಮಹಮ್ಮದ್‌ ಶಮಿ ಮೂರು, ಉಮೇಶ್‌ ಯಾದವ್‌ ಮತ್ತು ರವೀಂದ್ರ ಜಡೇಜ ತಲಾ ಎರಡು, ರವಿಚಂದ್ರನ್‌ ಅಶ್ವಿನ್‌ ಮತ್ತು ಮೋಹಿತ್‌ ಶರ್ಮ ತಲಾ ಒಂದು ವಿಕೆಟ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT