ADVERTISEMENT

‘ಅನುಮತಿ ಸಿಕ್ಕರೆ ಮಾತ್ರ ಪಾಕಿಸ್ತಾನದಲ್ಲಿ ಆಟ’

ವಿಶ್ವ ಅಂಧರ ಕ್ರಿಕೆಟ್‌ ಲಿಮಿಟೆಡ್‌ನ ಅಧ್ಯಕ್ಷ ಮಹಾಂತೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಭಾರತ ಅಂಧರ ಕ್ರಿಕೆಟ್‌ ತಂಡದ ಆಟಗಾರರು ಮತ್ತು ನೆರವು ಸಿಬ್ಬಂದಿಗೆ ಹಿರಿಯ ಕ್ರಿಕೆಟಿಗ ಸೈಯದ್‌ ಕಿರ್ಮಾನಿ (ಮಧ್ಯದಲ್ಲಿ ಕುಳಿತಿರುವವರು) ಶುಭ ಹಾರೈಸಿದರು. –ಪ್ರಜಾವಾಣಿ ಚಿತ್ರ
ಭಾರತ ಅಂಧರ ಕ್ರಿಕೆಟ್‌ ತಂಡದ ಆಟಗಾರರು ಮತ್ತು ನೆರವು ಸಿಬ್ಬಂದಿಗೆ ಹಿರಿಯ ಕ್ರಿಕೆಟಿಗ ಸೈಯದ್‌ ಕಿರ್ಮಾನಿ (ಮಧ್ಯದಲ್ಲಿ ಕುಳಿತಿರುವವರು) ಶುಭ ಹಾರೈಸಿದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕರೆ ಮಾತ್ರ ಭಾರತ ಅಂಧರ ಕ್ರಿಕೆಟ್‌ ತಂಡದವರು ಪಾಕಿಸ್ತಾನದಲ್ಲಿ ಏಕದಿನ ವಿಶ್ವಕಪ್‌ ಪಂದ್ಯಗಳನ್ನು ಆಡಲಿದ್ದಾರೆ’ ಎಂದು ವಿಶ್ವ ಅಂಧರ ಕ್ರಿಕೆಟ್‌ ಲಿಮಿಟೆಡ್‌ನ ಅಧ್ಯಕ್ಷ ಜಿ.ಕೆ.ಮಹಾಂತೇಶ್‌ ತಿಳಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ ಅಂಧರ ಕ್ರಿಕೆಟ್‌ ತಂಡದ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಬಾರಿಯ ಅಂಧರ ವಿಶ್ವಕಪ್‌ ಜನವರಿ 7ರಿಂದ 21ರವರೆಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ. ಟೂರ್ನಿಯ ವೇಳಾಪಟ್ಟಿ ಪ್ರಕಾರ ಭಾರತ ತಂಡದವರು ಕೆಲ ಲೀಗ್‌ ಪಂದ್ಯಗಳನ್ನು ಪಾಕ್‌ ನೆಲದಲ್ಲಿ ಆಡಬೇಕು. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಅನುಮತಿ ಕೋರಿ ಪತ್ರ ಬರೆದಿದ್ದೇವೆ. ಸರ್ಕಾರದಿಂದ ಅನುಮತಿ ಸಿಕ್ಕರೆ ತಂಡ ಪಾಕಿಸ್ತಾನದಲ್ಲಿ ಆಡಲಿದೆ. ಇಲ್ಲದಿದ್ದರೆ ಭಾರತದ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡುತ್ತೇವೆ’ ಎಂದರು. ಭಾರತ ತಂಡ ಟೂರ್ನಿಯಲ್ಲಿ ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.

ADVERTISEMENT

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಕ್ರಿಕೆಟಿಗ ಸೈಯದ್‌ ಕಿರ್ಮಾನಿ ‘ಅಂಧರ ಕ್ರಿಕೆಟ್‌ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೆರವು ಸಿಗುವಂತಾಗಬೇಕು. ಬಿಸಿಸಿಐ ಇನ್ನು ಮುಂದೆ ಅಂಧರ ಕ್ರಿಕೆಟ್‌ಗೆ ‍ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ ಎಂಬ ವಿಶ್ವಾಸ ನನಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.