ADVERTISEMENT

ಗುಂಪು ಅಭ್ಯಾಸ: ಯಶಸ್ಸಿಗೆ ಪೂರಕ

ಶಂಕರ ಸೋಮರಡ್ಡಿ
Published 16 ನವೆಂಬರ್ 2014, 19:30 IST
Last Updated 16 ನವೆಂಬರ್ 2014, 19:30 IST

ಸ್ಪರ್ಧಾತ್ಮಕ ಪರೀಕ್ಷೆಗಳು ವ್ಯಕ್ತಿಯ ಬಹುಮುಖ ವ್ಯಕ್ತಿತ್ವವನ್ನು ಅಳೆಯುತ್ತವೆ. ಈ ವ್ಯಕ್ತಿತ್ವ ರೂಢಿಸಿಕೊಳ್ಳಲು ಗುಂಪು ಅಭ್ಯಾಸ ಸಹಕಾರಿ ಎನ್ನುವುದು ಯಶಸ್ವಿ ವ್ಯಕ್ತಿಗಳ ಗುಟ್ಟನ್ನು ಪರಾಮರ್ಶಿಸಿದಾಗ ತಿಳಿದು ಬರುವ ಸತ್ಯ. ಗುಂಪು ಅಭ್ಯಾಸವನ್ನು ಹೀಗೆ ಮಾಡಬೇಕು ಎಂದು ನಿರ್ದಿಷ್ಟವಾದ ಯಾವುದೇ ತತ್ವಗಳಿಲ್ಲ. ಆದರೆ ಆರೋಗ್ಯಕರವಾಗಿ ಮತ್ತು ಕಡಿಮೆ ಅವಧಿಯಲ್ಲಿ ಯಶಸ್ಸು ಸಾಧಿಸಲು ಕೆಲ ತತ್ವಗಳನ್ನು ಪಾಲಿಸುವುದು ಅವಶ್ಯ.

ಗುಂಪು ಅಭ್ಯಾಸ ಸದಸ್ಯರ ಮಧ್ಯ ಆರೋಗ್ಯಕರವಾದ ಸ್ಪರ್ಧಾತ್ಮಕ ವಾತಾವರಣ ನಿರ್ಮಿಸುವುದರಿಂದ ಬೇರೆಯವರೊಂದಿಗೆ ಹೋಲಿಸಿಕೊಂಡು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬಹುದು. ಗುಂಪು ಅಭ್ಯಾಸದಲ್ಲಿ ಮೂರರಿಂದ ನಾಲ್ಕು ಜನ ಇರುವುದು ಸೂಕ್ತ. ಹೆಚ್ಚು ಜನರಿಂದ ಕೂಡಿದ್ದರೆ ಹರಟೆ ಮತ್ತು ವೈಮನಸ್ಸಿನಂತಹ ಸಮಸ್ಯೆಗಳು ಸೃಷ್ಟಿಸುತ್ತವೆ.

ಅಭ್ಯಾಸ ಮಾಡುತ್ತಲೇ ವಿಷಯದ ಕುರಿತು ಮತ್ತು ತಲೆದೋರುವ ಸಮಸ್ಯೆಗಳ ಕುರಿತು ಚರ್ಚೆ ಮಾಡಬಾರದು. ಇದರಿಂದ ಇತರರಿಗೆ ತೊಂದರೆಯಾಗುತ್ತದೆ. ಕೆಲವೊಮ್ಮೆ ವಿಷಯಾಂತರವಾಗಿ ಬೇರೊಂದು ವಿಷಯಕ್ಕೆ ದಾರಿ ಮಾಡಿಕೊಡುವ ಅವಕಾಶಗಳಿಂದ ಅಭ್ಯಾಸ ಅರ್ಧದಲ್ಲಿಯೇ ನಿಲ್ಲುತ್ತದೆ. ಆದ್ದರಿಂದ ಒಂದು ನಿರ್ದಿಷ್ಟ ಅವಧಿಯಲ್ಲಿ ಎಲ್ಲರೂ ಒಂದೇ ವಿಷಯ ಅಭ್ಯಾಸ ಮಾಡಿದ ನಂತರ ಆ ವಿಷಯದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಅಥವಾ ಸಂದೇಹಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದು.

ಎಲ್ಲರೂ ಒಂದೇ ವಿಷಯವನ್ನು ಅಭ್ಯಾಸ ಮಾಡಿದ್ದರೂ ನೋಡುವ ದೃಷ್ಟಿಕೋನ ಮತ್ತು ವೈಚಾರಿಕತೆ ಬೇರೆ ಬೇರೆಯಾಗಿರುತ್ತದೆ. ಇದು ವಿಷಯ ವಸ್ತುವಿನ ಕುರಿತು ವಿಮರ್ಶಾತ್ಮಕವಾಗಿ ಉತ್ತರ ತಯಾರಿಸಲು ಸೂಕ್ತ. ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಹೋಗಲು ಆಗದಿರುವವರಿಗೆ ಇದು ಒಳ್ಳೆಯ ವಿಧಾನ. ಗುಂಪು ಚರ್ಚೆಯಿಂದ ಗೊತ್ತಿಲ್ಲದ ವಿಷಯಗಳು ಗೊತ್ತಾಗುತ್ತವೆ ಮತ್ತು ಗೊತ್ತಿರುವ ವಿಷಯ ಪುನರ್‌ಮನನವಾಗುವುದರಿಂದ ಗಟ್ಟಿಗೊಳ್ಳುತ್ತದೆ.
ಒಂದೇ ಪರೀಕ್ಷೆಗೆ ತಯಾರಿ ನಡೆಸುವವರು, ಒಂದೇ ಮಾನಸಿಕ ಸ್ಥಿತಿ ಹೊಂದಿದವರೊಡನೆ ಗುಂಪು ಅಭ್ಯಾಸದಲ್ಲಿ ತೊಡಗುವುದು ಸೂಕ್ತ. ಇಲ್ಲದೇ ಇದ್ದರೇ ಕೇವಲ ಸಮಯದ ದುರುಪಯೋಗವಾಗುತ್ತದೆ.

ಗುಂಪು ಅಭ್ಯಾಸ ಸಹಕಾರಿ
‘ ಗುಂಪು ಅಭ್ಯಾಸ ರೂಮ್‌ ಮಾಡಿಕೊಂಡು ಓದುವವರಿಗೆ ಅತ್ಯುತ್ತಮ ವಿಧಾನ. ಆದರೆ ಅಭ್ಯಾಸದಲ್ಲಿ ತೊಡಗಿಕೊಂಡಾಗ ಅನಾವಶ್ಯಕ ರಾಜಕಾರಣದ ಚರ್ಚೆ ಮತ್ತು ವೈಯಕ್ತಿಕ ಸಮಸ್ಯೆಗಳ ಚರ್ಚೆಯಿಂದ ದೂರ ಇರಬೇಕು. ನನ್ನ ಯಶಸ್ಸಿನಲ್ಲಿ ಹೆಂಡತಿಯ ಪಾತ್ರವು ಇದೆ. ಏಕೆಂದರೆ ನಾವಿಬ್ಬರೂ ವಿಷಯವನ್ನು ಹಂಚಿಕೊಂಡು  ಓದುತ್ತಿದ್ದೆವು. ಆದರೆ ನಾವಿಬ್ಬರೂ ಇನ್ನೂ ಯುಪಿಎಸ್‌ಸಿಗಾಗಿ ಅಭ್ಯಾಸ ನಿರತರಾಗಿದ್ದೆವೆ’
-ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ
ಜಿಲ್ಲಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಧಾರವಾಡ


ADVERTISEMENT

ಪರಸ್ಪರ ಯಶಸ್ಸು
‘ಗುಂಪು ಅಭ್ಯಾಸವಿಲ್ಲದೇ ನಾವು ಐಎಎಸ್‌ ಪರೀಕ್ಷೆ ಪಾಸಾಗಲು ಆಗುತ್ತಿರಲಿಲ್ಲ. ನಾವು ನಾಲ್ಕು ಜನರೊಂದಿಗೆ ಅಭ್ಯಾಸ ನಿರತರಾಗಿದ್ದೆವು. ಅದರಲ್ಲಿ ನಾನು ಮತ್ತು ಹೆಗಡೆ ಯಶಸ್ವಿಯಾದೆವು. ಉಳಿದ ಇಬ್ಬರು ನನ್ನ ಯಶಸ್ಸಿನ ಸೂತ್ರಧಾರಿಗಳು ಎನ್ನಬಹುದು’
-ಲಕ್ಷ್ಮಣ ನಿಂಬರಗಿ 2013ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 104ನೇ ರ್‍ಯಾಂಕ್‌

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಎಂದು ಕೇವಲ ನಿರ್ದಿಷ್ಟ ವಿಷಯದ ಮೇಲೆ ಪ್ರಶ್ನೆ ಕೇಳಲಾಗುವುದಿಲ್ಲ. ಇಲ್ಲಿ ಎಲ್ಲ ಕ್ಷೇತ್ರಗಳ ಪ್ರಶ್ನೆಗಳನ್ನು ಕೇಳುವುದರಿಂದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಜ್ಞಾನ ಹೊಂದಿದವರೊಂದಿಗೆ ಚರ್ಚೆ ಅವಶ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಲ್ಪ ಅವಧಿಯಲ್ಲಿಯೇ ಯಶಸ್ಸು ಸಿಗುವುದು ಕಷ್ಟ. ಆದ್ದರಿಂದ ದೀರ್ಘ ಅವಧಿಯಲ್ಲಿ ನಡೆಯುವ ಅಭ್ಯಾಸದಲ್ಲಿ ಕಾಡುವ ಏಕಾಂಗಿತನವನ್ನು ತಡೆಯಲು ಗುಂಪು ಅಭ್ಯಾಸವೇ ಸೂಕ್ತ.

ಈ ವಿಧಾನದಿಂದ ಒಬ್ಬರಿಗೊಬ್ಬರು ಪರೀಕ್ಷೆಗಳಲ್ಲಿ ಮಾಡುವ ತಪ್ಪುಗಳನ್ನು ಸರಿಪಡಿಸಲು ಒಳ್ಳೆಯ ಮಾರ್ಗ. ಪರೀಕ್ಷೆಗಳು ಹತ್ತಿರ ಬಂದಾಗ ವಿಷಯ ವ್ಯಾಪ್ತಿ ಹೆಚ್ಚು ಇರುವುದರಿಂದ ಗುಂಪು ಅಭ್ಯಾಸದ ಮೂಲಕ ಪ್ರತಿಯೊಬ್ಬರು ಆಸಕ್ತಿದಾಯಕ ವಿಷಯದ ಪುಸ್ತಕಗಳನ್ನು ಓದಿ ನಂತರ ಇತರರೊಂದಿಗೆ ಹಂಚಿಕೊಳ್ಳುವುದರಿಂದ ಸಮಯ ಉಳಿಸಬಹುದು.

ಕೆಲವೊಂದು ಸ್ಪರ್ಧಾತ್ಮಕ ಪರೀಕ್ಷೆಗಳಾದ ಆರ್ಮಿ ಮತ್ತು ಎಂಬಿಎಯ ಕ್ಯಾಟ್‌ನಂತಹ ಪರೀಕ್ಷೆಗಳಲ್ಲಿ ಗುಂಪು ಚರ್ಚೆಗೆ ಅಂಕಗಳನ್ನು ನಿಗದಿ ಪಡಿಸಿರುವುದರಿಂದ ಗುಂಪು ಅಭ್ಯಾಸ ವಿಷಯದ ಅಭಿವ್ಯಕ್ತಿಗೆ ದಾರಿ ಮಾಡಿಕೊಡುತ್ತದೆ.

ಕೇಂದ್ರ ಸರ್ಕಾರದ ಎಸ್‌ಎಸ್‌ಸಿ ಪರೀಕ್ಷೆಯನ್ನೇ ಮಾದರಿಯನ್ನಾಗಿ ತೆಗೆದುಕೊಳ್ಳಿ ಅದರಲ್ಲಿ ನಾಲ್ಕು ಘಟಕಗಳಿರುತ್ತವೆ ಅವು ಮಾನಸಿಕ ಸಾಮರ್ಥ್ಯ, ಸಾಮಾನ್ಯ ಜ್ಞಾನ, ಇಂಗ್ಲಿಷ್್ ಜ್ಞಾನ, ಅಭಿಕ್ಷಮತಾ ಪರೀಕ್ಷೆ (aptitude test) ಇದರಲ್ಲಿ ವಿಜ್ಞಾನ ವಿಭಾಗದವರು ಮಾನಸಿಕ ಪರೀಕ್ಷೆ ಮತ್ತು ಬೌದ್ಧಿಕ ಸಾಮರ್ಥ್ಯ ಪರೀಕ್ಷೆಗಳಲ್ಲಿ ಹೆಚ್ಚು ಪರಿಣಿತರಾದರೆ,  ಸಾಮಾನ್ಯ ಜ್ಞಾನ, ಇಂಗ್ಲಿಷ್ ಜ್ಞಾನದಲ್ಲಿ ಕಲಾ ವಿಭಾಗದವರು ಹೆಚ್ಚು ಪರಿಣಿತರಿರುತ್ತಾರೆ ಗುಂಪು ಅಭ್ಯಾಸದಲ್ಲಿ ಎರಡು ವಿಭಾಗದವರು ತೊಡಗಿಕೊಂಡಿದ್ದರೆ ಬೇಗ ಯಶಸ್ಸು ಹೊಂದಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.