ADVERTISEMENT

ಇನ್ನೊಂದು ಬಾರಿ ‘ಶ್’...

​ಪ್ರಜಾವಾಣಿ ವಾರ್ತೆ
Published 23 ಜನವರಿ 2015, 19:46 IST
Last Updated 23 ಜನವರಿ 2015, 19:46 IST

ಇಪ್ಪತ್ತು ವರ್ಷದ ಹಿಂದೆ ಕುಮಾರ್ ಗೋವಿಂದ್ ನಟಿಸಿದ್ದ ‘ಶ್’ ಚಿತ್ರ ಮತ್ತೊಮ್ಮೆ ಸದ್ದು ಮಾಡಿದೆ. ಇದನ್ನೇ ಶೀರ್ಷಿಕೆಯಾಗಿಸಿಕೊಂಡು ಐದಾರು ಉತ್ಸಾಹಿಗಳು ಸಿನಿಮಾ ಮಾಡಲು ಮುಂದಾಗಿದ್ದಾರೆ. ‘ಅದೆಲ್ಲ ಸರಿ... ಆದರೆ ನಾನು ಸಿನಿಮಾ ಮಾಡಲು ಮುಂದಾದಾಗಲೇ ನಾಲ್ಕೈದು ಜನ ಅದನ್ನೇ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಯಾಕೆ ಅಂತಾನೇ ಅರ್ಥ ಆಗ್ತಿಲ್ಲ’ ಅಂತ ನಿರ್ದೇಶಕ ಹೇಮಂತ ಹೆಗಡೆ ಗೋಳು ತೋಡಿಕೊಂಡರು.

‘ಮತ್ತೊಮ್ಮೆ ಶ್‌..’ ಸಿನಿಮಾದ ಮುಹೂರ್ತದ ಬಳಿಕ ಪತ್ರಕರ್ತರ ಜತೆಗೆ ಮಾತುಕತೆಗೆ ಕುಳಿತ ಅವರು ಸ್ಪಷ್ಟವಾಗಿ ಹೇಳಿದ್ದು: ‘ಈ ಸಿನಿಮಾಕ್ಕೆ ಬನ್ನಿ ಅಂತ ಕುಮಾರ್ ಗೋವಿಂದ್ ಅವರನ್ನೇ ಕೇಳಿದೆ. ಆದರೆ ಅವರು ಬರಲಿಲ್ಲ. ಆದರೆ ನನಗೆ ಬೆಸ್ಟ್ ಆಫ್ ಲಕ್ ಹೇಳಿದರು. ನಾನು ಮತ್ತೊಮ್ಮೆ ಶ್.. ಶುರು ಮಾಡಿದೆ’.

‘ಶ್‌’ಗೂ ಇದಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಪ್ರಶ್ನೆಗೆ, ಹೇಮಂತ್‌ ಹೆಗಡೆ ‘ಏನೇನೂ ಇಲ್ಲ’ ಎಂದು ಥಟ್ಟನೆ ಉತ್ತರಿಸಿದರು. ಚಿತ್ರಕಥೆಗೆ ಆ ಶೀರ್ಷಿಕೆ ಸರಿಯಾಗಿತ್ತಂತೆ. ಅಷ್ಟೇ.

ಈ ಸಲ ಹೇಮಂತ ಹೆಗಡೆ ಜತೆಗೆ ‘ಶ್..’ ಹೇಳುತ್ತಿರುವುದು ‘ಅಶ್ವಿನಿ ನಕ್ಷತ್ರ’ ಖ್ಯಾತಿಯ ಜೆ. ಕಾರ್ತೀಕ್. ಹೇಮಂತ ಹೆಗಡೆ ಕರೆದಾಗ, ಈ ಪಾತ್ರ ಮಾಡಬಹುದಾ ಎಂಬ ಸಂಶಯ ಅವರಲ್ಲಿತ್ತು. ಆದರೆ ನಿರ್ದೇಶರ ಮಾತು ನಂಬಿ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡರು. ಸಂಯುಕ್ತಾಗೆ ಫೋನ್ ಮಾಡಿದ ನಿರ್ದೇಶಕರು ಕೇಳಿದ ಪ್ರಶ್ನೆ: ‘ನಿಮಗೆ ಕುದುರೆ ಸವಾರಿ ಕಲೀತೀರಾ?’ ಹೌದು ಅಂತ ಹೇಳಿದ ಬಳಕವೇ ಚಿತ್ರಕಥೆ ಹೇಳಿದರಂತೆ. ‘ಲೈಫು ಇಷ್ಟೇನೆ’ ಹಾಗೂ ‘ಒಗ್ಗರಣೆ’ಯಲ್ಲಿ ಮುಗ್ಧ ಹುಡುಗಿಯಾಗಿದ್ದ ತಾವು ಇದರಲ್ಲಿ ತೀರಾ ವಿಭಿನ್ನವಾಗಿ ಕಾಣುವುದಾಗಿ ಹೇಳಿಕೊಂಡರು. ‘ಕ್ರೇಜಿ ಲೋಕ’ ಚಿತ್ರದ ಬಳಿಕ ಹಲವು ಅವಕಾಶಗಳು ಬಂದರೂ ಒಪ್ಪಿಕೊಳ್ಳದ ವಿಜಯ್ ಸೂರ್ಯ, ‘ಶ್..’ ಕಥೆ ಕೇಳುತ್ತಲೇ ‘ಒಕೆ’ ಅಂದಿದ್ದಾರೆ.

ರಿಯಲ್‌ ಎಸ್ಟೇಟ್ ವಹಿವಾಟು ನಡೆಸುತ್ತಿರುವ ಉದಯ್ ಶೆಟ್ಟಿ ಅವರಿಗೆ ಸಿನಿಮಾ ನಿರ್ಮಾಣದ ಕನಸು ಇತ್ತು. ಹೇಮಂತ ಹೆಗಡೆ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡುವ ಮೂಲಕ ಅವರು ನಿರ್ಮಾಪಕರಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.