ಸಂಭ್ರಮಕ್ಕೆ ಮೊದಲು ಎಚ್ಚರ ಇರಲಿ!
ಪ್ರಜಾವಾಣಿ ವಾರ್ತೆ Published 28 ಅಕ್ಟೋಬರ್ 2016, 19:30 IST Last Updated 28 ಅಕ್ಟೋಬರ್ 2016, 19:30 IST ಸಂಭ್ರಮಕ್ಕೆ ಮೊದಲು ಎಚ್ಚರ ಇರಲಿ!
ದೀಪಾವಳಿ ಎಂದರೆ ಮಕ್ಕಳಿಗೆ ಸಂಭ್ರಮವೋ ಸಂಭ್ರಮ; ಅದಕ್ಕೆ ಕಾರಣ ಪಟಾಕಿ. ಹಬ್ಬದ ಸಂಭ್ರಮಕ್ಕೆ ಈ ಪಟಾಕಿಗಳೇ ಕೆಲವೊಮ್ಮೆ ಅಡ್ಡಿಯಾಗುವ ಸಂಭವವೂ ಇರುತ್ತದೆ. ಪಟಾಕಿಗಳನ್ನು ಸಿಡಿಸುವಾಗ ಅಪಘಾತಗಳು ಎದುರಾಗುವುದು ಸಹಜ.
ಹೀಗಾಗಿ ಮನೆಯಲ್ಲಿ ಹಿರಿಯರೂ ಮಕ್ಕಳೂ ಕೆಲವೊಂದು ಎಚ್ಚರಿಕೆಗಳನ್ನು ಪಾಲಿಸಿದರೆ ಈ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳಬಹುದು.
ರಾಶಿ ರಾಶಿ ಪಟಾಕಿಗಳನ್ನು ಸಿಡಿಸುವುದಕ್ಕಿಂತಲೂ ಹಬ್ಬದ ಸಂಭ್ರಮಕ್ಕೆ ಪೂರಕವಾಗಿರುವಂತೆ ಸಾಂಕೇತಿಕವಾಗಿ ಹಚ್ಚಿರಿ. ಭಾರೀ ಸದ್ದು ಮಾಡುವ ಪಟಾಕಿಗಳನ್ನು ಕೊಳ್ಳದಿರಿ. ಪರಿಸರವನ್ನು ಕಾಪಾಡುವ ಕರ್ತವ್ಯ ನಮ್ಮೆಲ್ಲರ ಮೇಲೂ ಇದೆ ಎನ್ನುವುದನ್ನು ಮರೆಯದಿರಿ.
* ಪಟಾಕಿಗಳನ್ನು ಸುಡುವಾಗ ಹತ್ತಿಯ ಬಟ್ಟೆಗಳನ್ನೇ ಧರಿಸಿ.
* ಪಟಾಕಿಗಳಿಂದ ಕನಿಷ್ಠ ಒಂದು ಕೈನಷ್ಟು ದೂರ ನಿಂತು ಹಚ್ಚಿರಿ.
* ಕೈಯಲ್ಲಿ ಪಟಾಕಿಯನ್ನು ಹಿಡಿದು ಸಿಡಿಸಬೇಡಿ.
* ಬಯಲು ಪ್ರದೇಶದಲ್ಲಿಯೇ ಪಟಾಕಿಗಳನ್ನು ಸಿಡಿಸಿ; ಹತ್ತಿರದಲ್ಲಿ ಶೀಘ್ರವಾಗಿ ಬೆಂಕಿ ತಾಗುವಂಥ ಯಾವುದೇ ವಸ್ತುಗಳು ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ.
* ದೋಷಯುಕ್ತ ಪಟಾಕಿಗಳನ್ನು ಮತ್ತೆ ಸುಡುವ ಯತ್ನ ಮಾಡಬೇಡಿ.
* ಸನಿಹದಲ್ಲಿಯೇ ಬಕೆಟ್ನಲ್ಲಿ ನೀರಿರಲಿ.
* ಹಿರಿಯರ ಮಾರ್ಗದರ್ಶನದಲ್ಲಿಯೇ ಪಟಾಕಿಗಳನ್ನು ಸಿಡಿಸಿ.
* ಪಟಾಕಿಗಳ ಮೇಲಿರುವ ಎಚ್ಚರಿಕೆಗಳನ್ನು ಓದಿ, ಸೂಚನೆಗಳನ್ನು ಪಾಲಿಸಿ.
* ಪಟಾಕಿಗಳನ್ನು ಒಣ ಪ್ರದೇಶದಲ್ಲಿ ದಾಸ್ತಾನು ಮಾಡಬೇಕು.
* ಕಿವಿಗೆ ಪಟಾಕಿ ಸದ್ದಿನಿಂದ ತೊಂದರೆಯಾಗುತ್ತಿದೆ ಎಂದಾದರೆ ಕಿವಿಗೆ ಹತ್ತಿ ಉಂಡೆಗಳನ್ನು ಇಟ್ಟುಕೊಳ್ಳಿ.
* ಸುಲಭವಾಗಿ ಬೆಂಕಿ ಹತ್ತಿಕೊಳ್ಳಬಹುದಾದ ಬಟ್ಟೆಯನ್ನು ಧರಿಸುವ ಬದಲು ಹತ್ತಿಯ ಬಟ್ಟೆಗಳನ್ನು ಧರಿಸಿರಿ.
* ಐಎಸ್ಐ ಪರವಾನಗಿ ಹೊಂದಿರುವ ನಂಬಿಕಾರ್ಹ ಮಾರಾಟಗಾರರಿಂದ ಮಾತ್ರ ಪಟಾಕಿಯನ್ನು ಖರೀದಿಸಿ.
* ಸುಟ್ಟ ಗಾಯಗಳಿಂದ ಉಸಿರಾಟಕ್ಕೆ ತೊಂದರೆಯಾದಲ್ಲಿ ವ್ಯಕ್ತಿಯ ಮೇಲೆ ನೀರು ಸುರಿಯಬಾರದು. ಬದಲಿಗೆ ಆ ವ್ಯಕ್ತಿಯನ್ನು ಸುಡದಂತಹ ವಸ್ತುವಿನಿಂದ ಸುತ್ತಬೇಕು. ನಂತರ ಗಾಳಿ ಇರುವ ವಾತಾವರಣಕ್ಕೆ ಒಯ್ಯಬೇಕು.
* ಪಟಾಕಿ ಸಿಡಿದಿಲ್ಲವೆಂದು ಹತ್ತಿರ ಹೋಗಿ ಅದರ ಪರೀಕ್ಷೆ ಮಾಡಲು ಪ್ರಯತ್ನಿಸಬೇಡಿ.
* ಮಕ್ಕಳು ಯಾವಾಗಲೂ ದೊಡ್ಡವರ ಕಣ್ಗಾವಿನಲ್ಲಿ ಪಟಾಕಿ ಸುಡಬೇಕು.