ADVERTISEMENT

ರಾಮಮಂದಿರ ಹೆಸರಿನಲ್ಲಿ ಬಿಜೆಪಿ ಮತಯಾಚನೆ: ಸಚಿವ ಸಂತೋಷ್ ಲಾಡ್

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 16:08 IST
Last Updated 18 ಏಪ್ರಿಲ್ 2024, 16:08 IST
ಸಂಡೂರು ತಾಲ್ಲೂಕಿನ‌ ಚೋರನೂರು‌ ಗ್ರಾಮದಲ್ಲಿ‌ ಗುರುವಾರ ನಡೆದ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಅವರ ಪ್ರಚಾರ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ ಮತಯಾಚಿಸಿದರು
ಸಂಡೂರು ತಾಲ್ಲೂಕಿನ‌ ಚೋರನೂರು‌ ಗ್ರಾಮದಲ್ಲಿ‌ ಗುರುವಾರ ನಡೆದ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಅವರ ಪ್ರಚಾರ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ ಮತಯಾಚಿಸಿದರು   

ಸಂಡೂರು: ಬಿಜೆಪಿಯವರು ರಾಮ ಮಂದಿರದ ಮೇಲೆ ಮತ ಕೇಳುತ್ತಾರೆ. ಸಂವಿಧಾನವನ್ನು ತೆಗೆಯುತ್ತೇವೆ ಎನ್ನುತ್ತಾರೆ ಮತದಾರರು ಹುಶಾರಾಗಿರಿ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ತಿಳಿಸಿದರು.

ತಾಲ್ಲೂಕಿನ‌ ಚೋರನೂರು ಗ್ರಾಮದಲ್ಲಿ ಗುರುವಾರ ನಡೆದ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಇ.ತುಕರಾಂ ಪರ ಪ್ರಚಾರ ನಡೆಸಿ ಮಾತನಾಡಿದರು.

ಈ‌ ದೇಶಕ್ಕೆ ಶ್ರೀರಾಮ ಮಾತ್ರವಲ್ಲ ಅವರ ಜೊತೆಗೆ ಸೀತೆ, ಲಕ್ಷ್ಮಣ, ಅಲ್ಲಾ ಅಕ್ಬರ್, ಜೀಸಸ್, ದುರುಗಮ್ಮ, ಮಾರೆಮ್ಮ, ಯಲ್ಲಮ್ಮ ಎಲ್ಲರೂ‌ ಬೇಕು. ಅದೇ ರಾಮ ಮಂದಿರ ಉದ್ಘಾಟನೆ ವೇಳೆ ಮಹರ್ಷಿ ವಾಲ್ಮೀಕಿಯವರನ್ನು , ಬಿಜೆಪಿ ವರಿಷ್ಠರಾದ ಎಲ್.ಕೆ ಅಡ್ವಾಣಿ, ವಾಜಪೇಯಿಯವರನ್ನು ಮರೆತಿದ್ದಾರೆ. ಅಷ್ಟೇ ಅಲ್ಲ ಪೂಜಾ ಸಮಯಕ್ಕೆ ಬೇಕಾಗುವ ಬ್ರಾಹ್ಮಣರನ್ನೂ ಮರೆತು ತಾವೇ ಮುಂದೆ ನಿಂತು ಪ್ರಚಾರ ಪಡೆದಿದ್ದಾರೆ. ಯಾವುದೇ ಗುಡಿ ಪೂರ್ಣಗೊಂಡರೆ ಉದ್ಘಾಟನೆ ಮಾಡುವುದು ನಿಯಮ. ಆದರೆ ರಾಮ ಮಂದಿರ ವಿಷಯದಲ್ಲಿ‌ ಆಗಿದ್ದೆ ಬೇರೆ ಎಂದರು.

ADVERTISEMENT

ಇವರೆಗಿನ ಎಲ್ಲಾ ಸಮೀಕ್ಷೆಗಳಲ್ಲಿ ಇ.ತುಕಾರಾಂ ಅವರ ಹೆಸರೇ ಮುಂಚೂಣಿಯಲ್ಲಿದೆ. ಅವರು ಗೆಲ್ಲುತ್ತಾರೆಂಬ ವಿಶ್ವಾಸವಿದೆ. ಬಿಜೆಪಿಯವರು ಪ್ರಚಾರಕ್ಕೆ ಬಂದಾಗ ಬ್ಯಾಂಕ್ ಪಾಸ್ ಬುಕ್ ಹಿಡಿದು ₹15 ಲಕ್ಷ ಅಕೌಂಟಿಗೆ ಬಂದಿಲ್ಲ. ಬಿಜೆಪಿಯವರು ಅಧಿಕಾರಕ್ಕೆ ಬಂದರೆ ರೈತ ಸಾಲ‌ಮನ್ನಾ ಮಾಡುವ, ಅವರ ಆದಾಯ ಹೆಚ್ಚಿಸುವ ಭರವಸೆ ನೀಡಿದ್ದರು. 100 ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದಿದ್ದರು. ಬುಲೆಟ್ ಟ್ರೇನ್ ಬಿಡುತ್ತೇವೆ ಎಂದಿದ್ದರು‌. ಈಗ ಇವುಗಳ ಬಗ್ಗೆ ಮಾತನಾಡುತ್ತಿಲ್ಲ. ಹತ್ತು ವರ್ಷದ ಅವಧಿಯಲ್ಲಿ ಸುಮಾರು ₹100 ಲಕ್ಷ ಕೋಟಿಗಿಂತ ಹೆಚ್ಚು ಸಾಲ ಮಾಡಿರುವುದೇ ಈ ಪ್ರಧಾನಿಯ ಸಾಧನೆಯಾಗಿದೆ ಎಂದು ಹೇಳಿದರು.

ಹಾಲು, ಗ್ಯಾಸ್, ಕರ್ಪೂರ ಕೊನೆಗೆ ಸ್ಮಶಾನದಲ್ಲಿ‌ ಓಡೆಯುವ ತೆಂಗಿನ ಕಾಯಿಗೂ ಜಿಎಸ್‌ಟಿಗೂ ಕಟ್ಟಬೇಕಿದೆ. ಅದಾನಿಯಂತಹ‌ ಉದ್ಯಮಿಗಳ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಳವಾಗಿದೆ ಎಂದರು.

ಕಾಂಗ್ರೆಸ್ ನುಡಿದಂತೆ ನಡೆವ ಪಕ್ಷವಾಗಿದ್ದು ಪಕ್ಷದ ಅಭ್ಯರ್ಥಿ ಇ.ತುಕಾರಾಂ ಅವರನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ತಿಳಿಸಿದರು.

ಅಭ್ಯರ್ಥಿ ಇ.ತುಕರಾಂ ಮಾತನಾಡಿ, ಸಂಡೂರು ವಿಧಾನ ಸಭಾ ಕ್ಷೇತ್ರದಲ್ಲಿ 11 ವಸತಿ ಶಾಲೆಗಳು, 3 ಐಟಿಐ ಕಾಲೇಜುಗಳು, ಡಿಪ್ಲೊಮಾ ಕಾಲೇಜು, ನಂದಿಹಳ್ಳಿ‌ ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿ, ರಸ್ತೆ ಸೇರಿದಂತೆ ಅನೇಕ ಜನಪರ ಕೆಲಸ ಮಾಡಲಾಗಿದೆ. ಅದೇ ರೀತಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿಯೂ ಅಭಿವೃದ್ಧಿಯ ಪರ್ವ ಆರಂಭವಾಗಲು ತಮ್ಮನ್ನು ಬೆಂಬಲಿಸುವಂತೆ ಕೋರಿದರು.

ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ್ ಮಾತನಾಡಿದರು.

ಜಿಲ್ಲಾ‌ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ , ಗ್ಯಾರಂಟಿ‌ ಯೋಜನೆಗಳ‌ ಅನುಷ್ಠಾನ ಸಮಿತಿ ಅಧ್ಯಕ್ಷ ಕುರಿ‌ ಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಏಕಾಂಬರಪ್ಪ, ಮಾಜಿ ವಾಡಾ ಅಧ್ಯಕ್ಷರಾದ ರೋಷನ್‌ ಜಮೀರ್ , ಚಿತ್ರಿಕಿ ಮಹಾಬಲೇಶ್, ಮುಖಂಡರಾದ ಕುರುಬರ ಸತ್ಯಪ್ಪ,ಪಿ.ಜಯರಾಮ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಂಜಿನಮ್ಮ, ಎಲ್.ಎಚ್. ಶಿವಕುಮಾರ್, ಸೋಮಪ್ಪ ಯಾದವ್ , ಬೊಮ್ಮಗಟ್ಟ ರಘುಪತಿ ಶಾನಬೋಗ್, ಚೋರನೂರು ಶಿವಣ್ಣ ಸೇರಿದಂತೆ ಚೋರನೂರು, ಕಾಳಿಂಗೇರಿ, ಬಂಡ್ರಿ, ಬೊಮ್ಮಗಟ್ಟ ಹಾಗೂ‌ ದೇವಗಿರಿ ಗ್ರಾಮಗಳ ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

18 ಎಸ್ ಎ ಎನ್ 01 : ಸಂಡೂರು ತಾಲ್ಲೂಕಿನ‌ ಚೋರನೂರು‌ ಗ್ರಾಮದಲ್ಲಿ‌ ಗುರುವಾರ ನಡೆದ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಮ್ ಅವರ ಪ್ರಚಾರ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ ಮತಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.