ADVERTISEMENT

ಕೃಷಿಕರ ಅಂಗಳಕ್ಕೊಬ್ಬ ‘ಪುಟಾಣಿ ಸೂರ್ಯ’

ಶ್ರೀ ಪಡ್ರೆ
Published 23 ಡಿಸೆಂಬರ್ 2019, 19:30 IST
Last Updated 23 ಡಿಸೆಂಬರ್ 2019, 19:30 IST
ಸೌರಶಕ್ತಿ ಚಾಲಿತ ಡ್ರೈಯರ್‌             ಚಿತ್ರ: ಶ್ರೀ ಪಡ್ರೆ
ಸೌರಶಕ್ತಿ ಚಾಲಿತ ಡ್ರೈಯರ್‌ ಚಿತ್ರ: ಶ್ರೀ ಪಡ್ರೆ   

ವಿಶೇಷ ಅತಿಥಿಗಳು ಬಂದಾಗ ನಾವು ಕೊಡುವ ತಿಂಡಿಯ ತಟ್ಟೆಯಲ್ಲೊಂದು ‘ಹೊಸ ವಸ್ತು’ ಇರುತ್ತದೆ. ಅದನ್ನು ನೋಡಿ ಹೆಚ್ಚಿನವರೂ ಕೇಳುವ ಪ್ರಶ್ನೆ: ‘ಇದೇನಿದು?’

ಕಂದು ಬಣ್ಣದ, ಗಟ್ಟಿಯೂ ಅಲ್ಲದ, ಮೆತ್ತನೆಯ ಖಾದ್ಯ ವಸ್ತುವದು. ಹಲವರಿಗೆ ಫಕ್ಕನೆ ಅದು ಏನೆಂದು ಹೊಳೆಯುವುದಿಲ್ಲ. ಅದು ಒಣ ಬಾಳೆಹಣ್ಣು. ಹದವಾಗಿ ಮತ್ತು ಒಂದೇ ಸಮನಾಗಿ ಒಣಗಿದ ಇದನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಅದರ ರುಚಿ, ಪರಿಮಳ ಎರಡೂ ಮೆಚ್ಚುವಂತಿ ರುತ್ತದೆ. ತಿಂದವರೆಲ್ಲಾ, ಕುತೂಹಲದಿಂದ ಮತ್ತೂ ಹಲವು ಪ್ರಶ್ನೆ ಕೇಳುತ್ತಾರೆ.

ಇದು ನಮ್ಮ ಸೋಲಾರ್‌ ಡ್ರೈಯರ್‌ ಕೊಡುಗೆ. ಒಣ ಬಾಳೆಹಣ್ಣು ತಿನ್ನುವಾಗಲೆಲ್ಲಾ ಈ ಡ್ರೈಯರ್ ಕೊಂಡುಕೊಳ್ಳುವ ನಮ್ಮ ನಿರ್ಧಾರ ಸರಿಯಾದುದು ಅನಿಸುತ್ತದೆ.

ADVERTISEMENT

ನಮ್ಮ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಅಡಿಕೆ ತೋಟದಲ್ಲಿ ಅಂತರ್ ಬೆಳೆಯಾಗಿ ಬಾಳೆ ಬೆಳೆಯುತ್ತೇವೆ. ಇಲ್ಲಿ ಕದಳಿ ಬಾಳೆಗೆ - ಬೆಂಗಳೂರು ಕಡೆಯ ಹೆಸರು ಏಲಕ್ಕಿ ಬಾಳೆ. ಒಳ್ಳೆಯ ಬೆಲೆ ಇದೆ. ಹಾಗಾಗಿ ಹೆಚ್ಚಿನವರೂ ಇದನ್ನೇ ಬೆಳೆಯುತ್ತಾರೆ.

ಬಹುಕಾಲದಿಂದ ಎರಡು ಸಂದರ್ಭಗಳಲ್ಲಿ ನಮಗೆ ಒಂದು ಡ್ರೈಯರ್ ಇದ್ದರೆ ಒಳ್ಳೆಯದಿತ್ತು ಎನಿಸುತ್ತಿತ್ತು. ಮಾರುಕಟ್ಟೆಗೆ ಆವಕ ಜಾಸ್ತಿಯಿದ್ದು ಬೆಲೆ ಕುಸಿಯುವ ಸಂದರ್ಭ ಮೊದಲ ನೆಯದು. ಪ್ರತಿವರ್ಷ ಒಂದೆರಡು ಸಲ ಹೀಗಾಗುವುದಿದೆ. ಆಗೆಲ್ಲಾ, ‘ಬಿಸಾಕುವ ಬೆಲೆಗೆ’ ಮಾರುವು ದಕ್ಕಿಂತ ಇದನ್ನು ಒಣಗಿಸಿ ಉಡುಗೊರೆ ಕೊಟ್ಟರೂ ಒಳ್ಳೆಯದೇ ಅನಿಸುತ್ತದೆ.

ಬೆಳೆದಿದ್ದರೂ, ಗಾತ್ರ ಸ್ವಲ್ಪ ಚಿಕ್ಕದಾದರೂ ಸಾಕು, ಅಂಥ ಬಾಳೆಗೊನೆಯನ್ನು ಅಂಗಡಿಯವರು ‘ಸೆಕೆಂಡ್ ಕ್ಲಾಸ್’ ಎಂದು ಪರಿಗಣಿಸಿ ಬೆಲೆ ಇಳಿಸುತ್ತಾರೆ. ಇದು ಎರಡನೆಯ ಸಂದರ್ಭ. ಇಂಥ ಗೊನೆಗಳನ್ನು ಹಣ್ಣಾಗಿಸಿ ಒಣಗಿಸಿದರೆ ರುಚಿಯಲ್ಲಿ ಅಂತಹ ವ್ಯತ್ಯಾಸ ಬಾರದು.

ನಮ್ಮದು ಚಿಕ್ಕ ಡ್ರೈಯರ್‌
ನಾವು ತರಿಸಿಕೊಂಡ ಸೌರಶಕ್ತಿಯ ಡ್ರೈಯರ್ ಚಿಕ್ಕದು. ಗೃಹಬಳಕೆಗಷ್ಟೇ ಸಾಕು. ಇದು ಮುಂಬೈನ ಎಸ್4ಎಸ್ ಟೆಕ್ನಾಲಜೀಸ್ ಕಂಪನಿಯವರದ್ದು. ಇದರಲ್ಲಿರುವ ಒಣಗಿಸುವ ಟ್ರೇ ಒಂದು ಚದರ ಮೀಟರ್‌ನಷ್ಟು ದೊಡ್ಡದು. ಇದು ಈಗ ನಮ್ಮ ಅಂಗಳದ ‘ಪುಟಾಣಿ ಸೂರ್ಯ’!

ಗೃಹಬಳಕೆಯ ಈ ಡ್ರೈಯರ್‌ನ ಲೋಡಿಂಗ್ ಸಾಮರ್ಥ್ಯ – ಅಂದರೆ, ಒಣಗಿಸಬಹುದಾದ ವಸ್ತುವಿನ ತೂಕ 3 ರಿಂದ 4 ಕೆ.ಜಿ ಎನ್ನುತ್ತದೆ ಕಂಪನಿ. ಬೆಲೆ ₹ 11ಸಾವಿರ. ತೆರಿಗೆ ಮತ್ತು ಸಾಗಾಟ ವೆಚ್ಚ ಪ್ರತ್ಯೇಕ.

ಈ ಡ್ರೈಯರ್‌ನ ಒಂದು ವಿಶೇಷ ಇದನ್ನು ಬಿಚ್ಚಿ ಪುನಃ ಜೋಡಿಸಬಹುದು. ಹೀಗಾಗಿ ಸಾಗಾಟ ಸುಲಭ, ಲಾರಿಯಲ್ಲಿ ತರಿಸಿಕೊಳ್ಳಲು ಖರ್ಚು ಹೆಚ್ಚಾಗುವುದಿಲ್ಲ. ನಾವು ಇದರಲ್ಲಿ ಕರಿಬೇವಿನ ಎಲೆ, ನುಗ್ಗೆ ಎಲೆ, ಬಾಳೆಹಣ್ಣು, ಪಪ್ಪಾಯ, ಹಲಸಿನಹಣ್ಣು, ಹಲಸಿನಹಣ್ಣಿನ ಕಾಯಿಸೊಳೆ, ನುಗ್ಗೆ ಕೋಡು, ಮಾಂಬಳವನ್ನೂ ಒಣಗಿಸಿ ನೋಡಿದ್ದೇವೆ.

ಪದಾರ್ಥಗಳು ಒಣಗುವ ಸಮಯ
ಇಡೀ ಬಾಳೆಹಣ್ಣು ಒಣಗಲು ನಾಲ್ಕು ದಿನ ಬೇಕಾಗುತ್ತದೆ. ಆ ಹಣ್ಣನ್ನು ನಾಲ್ಕಾಗಿ ತುಂಡು ಮಾಡಿದರೆ ಮೂರು ದಿನ ಸಾಕು. ಚಿಕ್ಕ ತುಂಡಾದರೆ ಎರಡೇ ದಿನ ಧಾರಾಳ. ತುಂಡು ಮಾಡಿದ ಮಾವಿನ ಮತ್ತು ಹಲಸಿನ ಹಣ್ಣು, ಬ್ಲಾಂಚ್ ಮಾಡಿದ (ಕುದಿನೀರಿನಲ್ಲಿ ಎರಡು ನಿಮಿಷ ಅದ್ದಿ ತೆಗೆದ) ಹಲಸಿನ ಕಾಯಿಸೊಳೆ ಎರಡು ದಿನದಲ್ಲಿ ಒಣಗಿದೆ. ಮಾಂಬಳ ಮಾಡಲು ಕಡೆದು ದಪ್ಪಕ್ಕೆ ಹರವಿ ಇಟ್ಟ ಮಾವಿನಹಣ್ಣಿನ ರಸ ನಾಲ್ಕು ದಿನ ತೆಗೆದುಕೊಂಡಿದೆ.

ಈ ಡ್ರೈಯರ್‌ನಲ್ಲಿ ಯಾವುದೇ ಹಣ್ಣು, ತರಕಾರಿ, ಎಲೆಗಳನ್ನೂ ಒಣಗಿಸಿಕೊಳ್ಳಬಹುದು. ಹಣ್ಣು – ತರಕಾರಿಗಳನ್ನು ಕತ್ತರಿಸುವಾಗ, ತುಂಡುಗಳು ಗಾತ್ರದಲ್ಲಿ ಒಂದೇ ಸಮನಾಗಿ ಇರುವಂತೆ ಎಚ್ಚರವಹಿಸಬೇಕು. ಹಾಗೆ ಮಾಡಿದರೆ, ಒಣ ಉತ್ಪನ್ನ ಒಂದೇ ರೀತಿ ಒಣಗಿ ಸಿಗುತ್ತದೆ.

ನಮ್ಮ ಬಹುತೇಕ ಅಡಿಕೆ ಕೃಷಿಕರಲ್ಲಿ ಈಗ ಸಿಲ್ಪಾಲಿನ್ ಶೀಟ್‌ನ ಕಡಿಮೆ ವೆಚ್ಚದ ಸೌರ ಡ್ರೈಯರ್ ಇದೆ. ಇದು ಇರುವಾಗ ಬೇರೊಂದು ಡ್ರೈಯರ್ ಬೇಕೆ, ಎನ್ನುವ ಪ್ರಶ್ನೆ ಸಹಜ. ಎಸ್4ಎಸ್ ಡ್ರೈಯರ್‌ನಲ್ಲಿ ನಮಗೆ ಕ್ರಿಮಿಕೀಟ – ಧೂಳುಮುಕ್ತವಾದ ಉತ್ಪನ್ನ ಸಿಗುತ್ತದೆ. ನಿರ್ವಹಣೆ ಸರಿಯಾದರೆ ಆಕ್ಸಿಡೈಸೇಷನ್‌ನಿಂದ ಕಪ್ಪಾಗುವ ಬಾಳೆಹಣ್ಣಿನಂತಹ ಉತ್ಪನ್ನಗಳು, ಹಾಗಾಗದೆ ಸಹಜ ಬಣ್ಣ, ಪರಿಮಳವನ್ನೂ ಉಳಿಸಿಕೊಳ್ಳುತ್ತವೆ. ಹೀಗಾಗಿ ಉತ್ಪನ್ನ ಹೆಚ್ಚು ಆಕರ್ಷಕ ಮತ್ತು ರುಚಿಯದಾಗುತ್ತದೆ.

ಡ್ರೈಯರ್‌ನೊಳಗೆ ಒಣಗಲು ಇಟ್ಟು ಮರೆತೇ ಬಿಡುವ ಹಾಗಿಲ್ಲ. ದಿನಕ್ಕೊಮ್ಮೆಯಾದರೂ ಕೈ ಹಾಕಿ ಮಗುಚ ಬೇಕು. ಆದರೆ ಬಿಸಿಗಾಳಿಯ ಡ್ರೈಯರ್‌ನ ಹಾಗೆ ಆಗಾಗ ಮಗುಚುವ ಅಥವಾ ಟ್ರೇ ಬದಲಿಸುವ ಕೆಲಸ ಇಲ್ಲ.

ಮೊದಲೇ ಪ್ಲಾನ್‌ ಮಾಡಬೇಕು
ಹಣ್ಣು-ತರಕಾರಿಗಳ ಕತ್ತರಿಸುವ ಸಮಯವನ್ನು ಮೊದಲಾಗಿ ಪ್ಲಾನ್ ಮಾಡಬೇಕು. ಬಿಸಿಲು ಬರಲು ಆರಂಭವಾಗುವಾಗ ಒಣಗಿಸುವ ಕ್ರಿಯೆಯೂ ಶುರು ಆಗಬೇಕು. ಮೊದಮೊದಲು, ಇನ್ನೇನು ಒಣಗುತ್ತಾ ಬಂತು ಎನ್ನುವಾಗ ಸ್ವಲ್ಪ ಹೆಚ್ಚು ನಿಗಾ ಬೇಕು. ಇಲ್ಲದೆ ಹೋದರೆ ಉತ್ಪನ್ನ ಕರಟಿ ಹೋದೀತು. ಎಲೆ ತರಕಾರಿ ಮತ್ತು ಪಪ್ಪಾಯ - ಹೀಗೆ ನಮ್ಮ ಗಮನ ಸಾಕಾಗದೆ ಹಾಳಾಗಿವೆ.

ಸರಿಯಾಗಿ ಒಣಗಿದ ಮೇಲೆ ತೆಗೆದಿಟ್ಟು ತಣಿದ ಕೂಡಲೇ ಶುಚಿಯಾದ ಒಣ ಡಬ್ಬಗಳಲ್ಲಿ ಗಾಳಿ ಆಡದಂತೆ ಕಾಪಿಡುವುದೂ ಮುಖ್ಯ. ಇಲ್ಲದಿದ್ದರೆ ವಾತಾವರಣದಿಂದ ತೇವಾಂಶ ಹೀರಿ ತಾಳಿಕೆ ಕಡಮೆಯಾದೀತು.ನಮಗೆ ಅತಿ ಸಂತೋಷ ಕೊಟ್ಟದ್ದು ಬಾಳೆಹಣ್ಣಿನ ಒಣ ಉತ್ಪನ್ನ. ಕದಳಿಯೇತರ ಯಾವ ಜಾತಿಯ ಬಾಳೆಕಾಯಿ ಕೊಟ್ಟರೂ ನಮ್ಮ ಬಾಳೆಕಾಯಿ ವ್ಯಾಪಾರಿಗಳು ‘ಬೂದಿ’ ಎಂದು ಹೆಸರು ಹಾಕಿ ಅಲ್ಪ ಬೆಲೆ ಕೊಡುತ್ತಾರಷ್ಟೇ. ಇದಕ್ಕೆ ಬದಲು ಹೀಗೆ ‘ಸುಕೇಳಿ’ (ಒಣ ಬಾಳೆಹಣ್ಣು) ಮಾಡಿ ತಿನ್ನಬಹುದು, ಪಾಯಸ ಮಾಡಬಹುದು; ಮಾರಲೂಬಹುದು. ಈ ವರ್ಷ ಬೀಂಬುಳಿ, ದಾರೆಹುಳಿ ಮತ್ತಿತರ ಬೆಳೆಗಳ ನಿರ್ಜಲೀಕರಣದ ಪ್ರಯೋಗ ಮಾಡಬೇಕೆಂದಿದ್ದೇವೆ.

ನಮ್ಮಲ್ಲಿ ಧಾರಾಳ ಹಣ್ಣು – ತರಕಾರಿ ಇರುವಾಗ ಮಿಕ್ಕುಳಿದದ್ದನ್ನು ಹೀಗೆ ಒಣಗಿಸಿಟ್ಟುಕೊಳ್ಳುವುದರಿಂದ ಅಪರಾಧ ಪ್ರಜ್ಞೆ ಮಾಯವಾಗುತ್ತದೆ, ಮುಂದೆ ಉಪಯೋಗಕ್ಕೂ ಬರುತ್ತದೆ. ಅತಿಥಿಗಳಿಗೆ ಒಂದೆರಡು ಪ್ಯಾಕೆಟ್ ಕೊಟ್ಟರೆ ನಮ್ಮ ನೆನಪನ್ನು ಹೆಚ್ಚು ಕಾಲ ಉಳಿಸುವ ವಿಸಿಟಿಂಗ್ ಕಾರ್ಡೂ ಆಗುತ್ತದೆ!

ವಾಣಿಜ್ಯಕ್ಕಾಗಿ ದೊಡ್ಡದೂ ಇದೆ
ಈ ಕಂಪನಿ ಇದೇ ವಿನ್ಯಾಸದ ದೊಡ್ಡ, ವಾಣಿಜ್ಯಮಟ್ಟದ ಡ್ರೈಯರ್‌ಗಳನ್ನೂ ತಯಾರಿಸುತ್ತದೆ. ಅದರ ಲೋಡಿಂಗ್ ಸಾಮರ್ಥ್ಯ 10ರಿಂದ 12 ಕೆ.ಜಿ ಬೆಲೆ ₹35 ಸಾವಿರ. ಹತ್ತಿರ ಹತ್ತಿರ ಮನೆ ಇರುವ ಕೃಷಿಕರು ಒಗ್ಗೂಡಿ ಕೊಂಡುಕೊಳ್ಳಬಹುದು. ಬೆಲೆ ಕಡಿಮೆ ಇದ್ದಾಗ, ಉತ್ಪಾದನೆ ಜಾಸ್ತಿ ಇದ್ದಾಗ, ತಮ್ಮ ಬೆಳೆಗಳ ಮೌಲ್ಯವರ್ಧನೆ ಮಾಡಿಕೊಳ್ಳಬಹುದು. ಮಾರುಕಟ್ಟೆ ಮಾಡುವ ಚಾಲಾಕಿ ಇದ್ದರೆ ಉಪ ಸಂಪಾದನೆಗೂ ಒಳ್ಳೆಯ ಅವಕಾಶವಿದೆ.

ಈ ಡ್ರೈಯರ್‌ ಅನ್ನು ಈಗ ನೆಲಮಟ್ಟದಲ್ಲಿ ಇಡುವ ಹಾಗೆ ಇದೆಯಷ್ಟೇ. ಇದನ್ನು ಸೊಂಟ ಮಟ್ಟಕ್ಕೆ ಏರಿಸಿದರೆ ನಿರ್ವಹಣೆ ಸುಲಭ. ಕಂಪನಿ ಈ ಬಗ್ಗೆ ಕೂಡಲೇ ಗಮನ ಹರಿಸಬೇಕು. ‘ಸುಲಭದಲ್ಲಿ ಕಳಚಿ ಕೂಡಿಸಬಹುದು’ ಎಂದರೂ ಈ ಕೆಲಸ ಹೇಗೆ ಮಾಡುವುದು ಎಂಬ ಸಚಿತ್ರ ವಿವರ ಇರುವ ಒಂದು ಮಡಚು ಕಾಗದವನ್ನೂ (ಕರಪತ್ರ ಅಥವಾ ಮಾಹಿತಿ ಪತ್ರ) ಕಂಪನಿ ಕೊಡುತ್ತಿಲ್ಲ.

ಈ ಕಂಪನಿ ಇನ್ನಷ್ಟು ಬಳಕೆದಾರಸ್ನೇಹಿಯಾಗಬೇಕಾದ ಅಗತ್ಯವಿದೆ. ‘ಬೇಗನೆ ಉತ್ತರಿಸುವುದಿಲ್ಲ’ ಎಂಬ ದೂರು ನಮ್ಮಿಂದ ವಿವರ ಕೇಳಿ ಆರ್ಡರ್ ಮಾಡಹೊರಟಿರುವವರಿಂದ ಬಂದಿದೆ. ಈ ಅನುಭವ ನಮಗೂ ಆಗಿತ್ತು!

ಕಂಪನಿಯ ಸಂಪರ್ಕ: ashwin@s4stechnologies.com / 9960459770

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.