ತಾಪಮಾನದಲ್ಲಿ ದಿಢೀರ್ ಕುಸಿತ ಕಂಡಿದ್ದರಿಂದ ಈಗ ಎಲ್ಲೆಲ್ಲೂ ಗಡಗಡ ನಡುಗುವ ಚಳಿಯ ಅನುಭವ. ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ತುಂಬಾ ಹೆಚ್ಚಿದೆ ನಿಜ. ಆದರೆ, ಕುಸಿದ ಉಷ್ಣಾಂಶ ನಮ್ಮ ಕಲಬುರ್ಗಿ, ಬೀದರ್ ಜಿಲ್ಲೆಗಳನ್ನು ನಡುಗಿಸದೇ ಬಿಟ್ಟಿಲ್ಲ. ಒಲೆಯ ಮೇಲಿನಿಂದ ಆಗಷ್ಟೇ ತೆಗೆದು ಲೋಟಕ್ಕೆ ಬಗ್ಗಿಸಿದ ಚಹಾ, ಬಾಯಿಗೆ ಸೇರುವಷ್ಟರಲ್ಲಿ ತಣ್ಣಗಾಗುವುದೇನು ಸುಮ್ಮನೆಯೇ ಮತ್ತೆ? ಕಂಬಳಿ–ಕೌದಿ ಸಾಲದಾದವು ಎಂದು ರಗ್ಗುಗಳೂ ಮೈಮೇಲೆ ಏರಿದರೂ ಚಳಿ ಬಿಡಲೊಲ್ಲದು. ಆದರೆ, ಕಂದಮ್ಮಳಿಗೆ ಮಾತ್ರ ಅಮ್ಮನ ಮಡಿಲೇ ಈಗ ಬೆಚ್ಚನೆಯ ತಾಣ. ಚಳಿ ಇದ್ದರೇನು, ಟ್ರಾಫಿಕ್ನಲ್ಲಿನ ವಾಹನಗಳಂತೆ ಬದುಕಿನ ವ್ಯಾಪಾರವೇನು ಗಕ್ಕನೆ ನಿಂತು ಬಿಡುವುದೇ?
ಕಂಬಳಿಯಿಂದ ಕೂಡಿದ ವೇಷಭೂಷಣವೇ ಗೊರವರ ವೇಷಧಾರಿಗಳಿಗೆ ರಕ್ಷಣೆ ಕೊಡುವುದರಿಂದ ಉಷ್ಣಾಂಶ 5.5 ಡಿಗ್ರಿ ಸೆಲ್ಸಿಯಸ್ಗೆ ಕುಸಿದರೂ ಚಳಿಗೆ ಅಂಜದೆ ಲೋಕಾಭಿರಾಮವಾಗಿ ಹರಟುತ್ತಾ ಹೊರಡುವರು. ಕೆಲಸಕ್ಕೆ ಹೊರಟ ಕಾಕಾನಿಗೆ ತಲೆ, ಕಿವಿಗಳನ್ನು ಬೆಚ್ಚಗಿಡಲು ಮಫ್ಲರ್ ಒಂದಿದ್ದರೆ ಸಾಕು. ಮುಖದ ತುಂಬಾ ವಯಸ್ಸಿನ ನೇರಿಗೆಗಳನ್ನು ಹೊತ್ತಿರುವ ಅಜ್ಜಿ, ಹಲವು ದಶಕಗಳ ಈ ಜೀವನ ಯಾತ್ರೆಯಲ್ಲಿ ಇಂತಹ ಎಷ್ಟು ಚಳಿಗಾಲಗಳನ್ನು ಕಂಡಿದ್ದಾಳೋ? ಚಳಿಯನ್ನೇ ನಡುಗಿಸುವಂತಹ ಜೀವನೋತ್ಸಾಹ ಆಕೆಯದು. ಆದರೆ, ವಯಸ್ಸಿನಲ್ಲಿ ಆಕೆಗಿಂತ ಚಿಕ್ಕವಳಾದ ಇನ್ನೊಬ್ಬ ಅಜ್ಜಿಗೆ ಬಿದಿರಿನ ಬುಟ್ಟಿಗಳ ನಡುವೆ ಕುಳಿತರೂ ತಣ್ಣನೆಯ ಸುಳಿಗಾಳಿಯ ಕಾಟ. ಆಡುಗಳನ್ನು ಹಿಡಿದ ಕುಳಿತ ಅಜ್ಜನಿಗೆ ಹಿಡಿದ ಚಳಿ ಯಾವುದು? ಉಷ್ಣಾಂಶದಲ್ಲಿ ಉಂಟಾಗಿರುವ ಕುಸಿತದ್ದೇ ಅಥವಾ ವ್ಯಾಪಾರ ಆಗದಿದ್ದದ್ದೇ?
ಈ ಎಲ್ಲ ನೋಟಗಳನ್ನು ಕ್ಯಾಮೆರಾದಲ್ಲಿ ಕಂಡವರು ತಾಜುದ್ದೀನ್ ಆಜಾದ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.