ADVERTISEMENT

ಪುಸ್ತಕ ವಿಮರ್ಶೆ: ದಿವಾನ್‌ ಪೂರ್ಣಯ್ಯ ಜೀವನಕಥನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 19:30 IST
Last Updated 9 ಅಕ್ಟೋಬರ್ 2021, 19:30 IST
ದಿವಾನ್‌ ಪೂರ್ಣಯ್ಯ ಕೃತಿ
ದಿವಾನ್‌ ಪೂರ್ಣಯ್ಯ ಕೃತಿ   

ದಿವಾನ್‌ ಪೂರ್ಣಯ್ಯ
ಮೈಸೂರು ರಾಜ್ಯದ ಮೊದಲ ದಿವಾನರು

ಲೇ: ಎಂ.ಎನ್‌.ಸುಂದರರಾಜ್‌
ಪ್ರ: ಅಂಕಿತ ಪುಸ್ತಕ
ಸಂ: 080–26617100/26617755

ಹೈದರಾಲಿ, ಟಿಪ್ಪು ಸುಲ್ತಾನ್‌ ಹಾಗೂ ನಂತರದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರಿಗೂ ದಿವಾನರಾಗಿ ನೇಮಕಗೊಂಡು, ಆಧುನಿಕ ಮೈಸೂರಿನ ರೂವಾರಿ ಎಂದೆನಿಸಿಕೊಂಡಿದ್ದ ಪೂರ್ಣಯ್ಯ ಅವರ ಕುರಿತು ಸ್ವಾರಸ್ಯಕರವಾದ ಮಾಹಿತಿಗಳನ್ನೊಳಗೊಂಡ ಕೃತಿ ‘ದಿವಾನ್‌ ಪೂರ್ಣಯ್ಯ–ಮೈಸೂರು ರಾಜ್ಯದ ಮೊದಲ ದಿವಾನರು’.

ನಿವೃತ್ತ ಆಂಗ್ಲ ಉಪನ್ಯಾಸಕ ಎಂ.ಎನ್‌.ಸುಂದರರಾಜ್‌ ಅವರು ಈ ಕೃತಿಯ ಲೇಖಕ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಹುಟ್ಟಿ, ಶ್ರೀರಂಗಪಟ್ಟಣಕ್ಕೆ ವಲಸೆ ಬಂದು ಗುಮಾಸ್ತನಾಗಿ ದುಡಿದು ನಂತರ,ಹೈದರಾಲಿ ಆಡಳಿತದಲ್ಲಿ ಅರ್ಥಸಚಿವರಾಗಿ ನಂತರ ದಿವಾನರಾಗಿ ಮೈಸೂರಿನ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪೂರ್ಣಯ್ಯ ಅವರ ಜೀವನ ಮತ್ತು ಸಾಧನೆಗಳ ಕಿರುಪರಿಚಯ ಈ ಕೃತಿಯಲ್ಲಿದೆ. ‘ಮೈಸೂರು ರಾಜ್ಯದ ಪ್ರಾಮುಖ್ಯತೆ’ ಎಂಬ ಅಧ್ಯಾಯದ ಮುಖಾಂತರ ಕೃತಿ ಆರಂಭವಾಗುತ್ತದೆ. ಇದರಲ್ಲಿ ಮೈಸೂರು ರಾಜ್ಯ ರೂಪುಗೊಂಡ ರೀತಿ, ಒಡೆಯರ್‌ ಮನೆತನದ ಆಳ್ವಿಕೆ, ಸ್ವತಂತ್ರ ರಾಜ್ಯವಾಗಿ ಹೊರಹೊಮ್ಮಿದ ಬಗೆಯ ವಿವರವಿದೆ. ನಂತರದಲ್ಲಿ ಹೈದರಾಲಿಯ ಸಾಮ್ರಾಜ್ಯ ವಿಸ್ತರಣೆ, ಹೈದರಾಲಿ ಸಾವನ್ನು ರಹಸ್ಯವಾಗಿಟ್ಟು ಟಿಪ್ಪುವಿಗೆ ಅಧಿಕಾರ ಹಸ್ತಾಂತರ, ಮೈಸೂರು ರಾಜ್ಯಕ್ಕೆ ಪೂರ್ಣಯ್ಯನವರು ನೀಡಿದ ಕೊಡುಗೆ ಸೇರಿ ಪೂರ್ಣಯ್ಯ ಅವರ ಜೀವನ ಚರಿತ್ರೆಯ ವಿವರವನ್ನೂ ಕೃತಿ ಹೊಂದಿದೆ.

ADVERTISEMENT

ಮಾಹಿತಿಯ ಜೊತೆಗೆ ಸ್ವಾರಸ್ಯಕರ ವಿಷಯಗಳೂ ಈ ಕೃತಿಯಲ್ಲಿವೆ. ಉದಾಹರಣೆಗೆ, ಸಾಂಕ್ರಾಮಿಕ ರೋಗ ತಡೆಗಟ್ಟಲು ಚುಚ್ಚುಮದ್ದನ್ನು ತೆಗೆದುಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರೇ ಸ್ವತಃ ಮೊದಲು ಚುಚ್ಚುಮದ್ದು ಹಾಕಿಸಿಕೊಂಡ ಘಟನೆ, ಯಳಂದೂರಿನಲ್ಲಿರುವ ದಿವಾನ್‌ ಪೂರ್ಣಯ್ಯ ಅವರ ಬಂಗಲೆಯ ಕುರಿತು ಜನರಲ್ಲಿದ್ದ ಮೂಢನಂಬಿಕೆ ಇವುಗಳಲ್ಲಿ ಕೆಲವು. ಪೂರ್ಣಯ್ಯ ಟಿಪ್ಪುವಿಗೆ ದ್ರೋಹ ಎಸಗಿದ್ದರೇ ಎನ್ನುವುದು ಇಂದಿಗೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ವಿಷಯ. ಈ ವಿಷಯವನ್ನೂ ಪ್ರತ್ಯೇಕ ಅಧ್ಯಾಯದಲ್ಲಿ ಲೇಖಕರು ಪ್ರಸ್ತಾಪಿಸಿದ್ದಾರೆ. ಟಿಪ್ಪುವಿಗೆ ಪೂರ್ಣಯ್ಯ ದ್ರೋಹ ಬಗೆದಿರಲಾರರು ಎಂಬುದಕ್ಕೆ ಹಲವು ನಿದರ್ಶನಗಳನ್ನು ಇಲ್ಲಿ ಸುಂದರರಾಜ್‌ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.