ADVERTISEMENT

ಕವಿತೆ: ಒಂದು ಅಳುವಿನ ಕತೆ

ಬಿ.ಆರ್.ಲಕ್ಷ್ಮಣರಾವ್
Published 1 ಮೇ 2021, 19:30 IST
Last Updated 1 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಒಂದು ಊರಲ್ಲೊಬ್ಬ ರಾಜ,
ಅವನಿಗೊಬ್ಬ ಮಗಳು.
ಅವಳು ಒಂದು ದಿನ ಯಾಕೋ
ಅಳತೊಡಗಿದಳು.

ರಾಜಕುವರಿಗೇನು ಕಡಿಮೆ?
ಆದರೂ ಯಾಕಂತೆ
ಇಂಥ ರಚ್ಚೆ ಹಿಡಿದ ಅಳು,
ಜಡಿಮಳೆಯಂತೆ?

ಹಸಿವೇ? ಹೊಟ್ಟೇನೋವೇ?
ಜ್ವರದ ತಾಪವೇ?
ಯಾರಾದರೂ ಬೈದರೇ?
ಅದಕ್ಕೆ ಕೋಪವೇ?

ADVERTISEMENT

ವೈದ್ಯರು ಪರೀಕ್ಷಿಸಿದರು,
ತಿಳಿಯಲಿಲ್ಲ ಕಾರಣ.
ಯಾರೇನೇ ಮಾಡಿದರೂ
ಇಲ್ಲ ಉಪಶಮನ.

ಊಟವಿಲ್ಲ, ನಿದ್ದೆಯಿಲ್ಲ,
ಒಂದೇ ಸಮ ಅಳು.
ರಾಜ, ರಾಣಿ, ಊರ ಜನ
ಕಂಗಾಲಾದರು.

ಎಲ್ಲ ದೇವಾಲಯಗಳಲ್ಲೂ
ಪೂಜೆ, ಪ್ರಾರ್ಥನೆ :
"ಈ ಅಳು ನಿಲ್ಲಿಸು, ಎಳೆ ಜೀವವ
ಉಳಿಸು, ದೇವನೇ!"

ಕೊನೆಗಲ್ಲಿಗೆ ಬಂದನೊಬ್ಬ
ಜೋಲುಮೋರೆ ಬಾಲಕ,
ಅಳುವನರಸಿ ಬಂದ ಹಾಗೆ
ಅಳುವಿನೊಂದು ರೂಪಕ.

ಅಳುವ ಬಾಲೆಯೆದುರು ನಿಂತು
ತಾನೂ ಅಳತೊಡಗಿದ.
ಅಳು ಅಳುವಿನ ನಡುವೆ ಹೀಗೆ
ತೊಡಗಿತೊಂದು ಯುದ್ಧ.

ಅವನ ಅಂತರಾಳದಿಂದ
ಧುಮ್ಮಿಕ್ಕಿತು ದುಃಖ,
ಅಸಹಾಯಕ ಹಸಿವು, ನೋವು,
ಅವಮಾನದ ಸಹಿತ.

ಭೋರ್ಗರೆಯುವ ಕಡಲಿನಂಥ
ಆ ಮಹಾ ಅಳು
ಕಂಡು ಬಾಲೆ ಬೆಕ್ಕಸ
ಬೆರಗಾಗಿ ನಿಂತಳು.

ನಿಂತುಹೋಯಿತವಳ ಅಳು
ಅವನಳುವಿಗೆ ಸೋತು.
ನೇವರಿಸಿದಳವನ ಬೆನ್ನ
ಅವನ ಮುಂದೆ ಕೂತು.

ತನ್ನ ಮಡಿಲೊಳಿಟ್ಟು ಅವನ
ತಲೆ ತಟ್ಟಿದಳು.
ಉಬ್ಬರವಿಳಿಯಿತು ನಿಧಾನ
ಶಾಂತವಾಯ್ತು ಕಡಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.