ನೆಲಮಂಗಲ: ‘ಕಂದಾಯ ಇಲಾಖೆಯಲ್ಲಿ ರೈತರಿಗೆ ತಮ್ಮ ಜಮೀನುಗಳ ದಾಖಲೆಗಳನ್ನು ಮಾಡಿಕೊಡದೆ ಅಧಿಕಾರಿಗಳು ನಿತ್ಯವೂ ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಮತ್ತು ಸಂಬಂಧಿಸಿದ ಕಚೇರಿಗಳನ್ನು ಅಲೆಯುವಂತೆ ಮಾಡಿ ಅಲೆಯುವ ಭಾಗ್ಯ ಕಲ್ಪಿಸಿದ್ದಾರೆ’ ಎಂದು ಕಿಸಾನ್ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಭೀಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಸಂಘಟನೆ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಹಮ್ಮಿ
ಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಅಧಿಕಾರಿಗಳು ಜಮೀನಿನ ಮೌಲ್ಯದ ಮೇಲೆ ಇಂತಿಷ್ಟು ಪಾಲು ನಿಗದಿಪಡಿಸಿ ದಾಖಲೆಗಳನ್ನು ಮಾಡಿಕೊಡುತ್ತಿದ್ದಾರೆ. ಅದನ್ನು ಕೊಡಲು ಆಗದ ಬಡರೈತರು ಎಲ್ಲಿಗೆ ಹೋಗಬೇಕು, ಕಚೇರಿಗಳ ಎದುರು ಇಂತಹ ಕೆಲಸಗಳಿಗೆ ಇಷ್ಟು ಎಂದು ದರಪಟ್ಟಿಯನ್ನಾದರೂ ಹಾಕಿ’ ಎಂದು ಅವರು ವ್ಯಂಗ್ಯವಾಡಿದರು.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ‘ಸರ್ವೆ ಇಲಾಖೆಯಲ್ಲಿ ಹಣ ಕೊಡದಿದ್ದರೆ ಅಳತೆ ಮಾಡಲು ಬರುವುದೇ ಇಲ್ಲ. ಬಂದರೂ ಏನಾದರೂ ವ್ಯತ್ಯಾಸ ಮಾಡಿ ಅವರೇ ಸಮಸ್ಯೆ ಸೃಷ್ಟಿಸುತ್ತಾರೆ. ಸ್ವಾತಂತ್ರ್ಯ ನಂತರ ಈವರೆಗೆ ಜಮೀನುಗಳ ಮರುಸರ್ವೆ ಆಗಿಲ್ಲ. ಮರು ಸರ್ವೆ ಮಾಡಿ ಆಕಾರ್ಬಂದಿ ಮತ್ತು ಪಹಣಿ ಖರಾಬು ವ್ಯತ್ಯಾಸ ಸರಿಪಡಿಸಿ ದರಖಾಸ್ತು ಮಂಜೂರಾಗಿರುವ ಜಮೀನುಗಳ ದುರಸ್ತಿ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.