ಶಿವಮೊಗ್ಗ: ಬ್ರಾಹ್ಮಣರೆಂದರೆ ಬುದ್ಧಿಜೀವಿಗಳು ಎಂದು ಪಟ್ಟಕಟ್ಟಿದ್ದಾರೆ. ಆದರೆ, ಈ ಸಮುದಾಯವು ಇಂದು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದೆ ಎಂದು ಅಸ್ಸಾಂ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ. ಶ್ರೀಧರ ರಾವ್ ಹೇಳಿದರು.
ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಮಹಾಸಭಾದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಾಹ್ಮಣ ಸಮಾಜದ ಮೇಲೆ ಹಲವು ರೀತಿಯ ಟೀಕೆಗಳು ಕೇಳಿಬರುತ್ತಿವೆ. ರಾಜಕೀಯ ಉದ್ದೇಶದಿಂದ ಸಮಾಜವನ್ನು ಕೀಳಾಗಿ ಬಿಂಬಿಸಲಾಗುತ್ತಿದೆ. ತಪ್ಪಾಗಿ ಅರ್ಥೈಸಲಾಗುತ್ತಿದೆ. ಇದಕ್ಕೆ ಸಮಾಜದವರು ಹೆದರುವ ಅಗತ್ಯವಿಲ್ಲ ಎಂದರು.
ಬ್ರಾಹ್ಮಣರು ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುತ್ತಿದ್ದಾರೆ. ಆಚಾರ-ವಿಚಾರದಲ್ಲೂ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಸ್ವಾಭಿಮಾನದಿಂದ ಬದುಕು ಸಾಗಿಸುತ್ತಾರೆ. ಏನೇ ಕಷ್ಟ ಎದುರಾದರೂ ಯಾರಲ್ಲಿಯೂ ಹೇಳುವುದಿಲ್ಲ. ಹೀಗಿದ್ದರೂ ರಾಜಕೀಯ ಕಾರಣಕ್ಕಾಗಿ ನಮ್ಮನ್ನು ದೂಷಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸರ್ಕಾರ ಸಮಾಜಕ್ಕೆ ಸೌಲಭ್ಯ ನೀಡಿಲ್ಲ ಎಂದು ಹಿಂಜರಿಯದೆ, ಯಾರ ನೆರವು ಬಯಸದೆ ನಮ್ಮದೇ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಹನಿಗವಿ ಡುಂಡಿರಾಜ್ ಮಾತನಾಡಿ, ಸಮಾಜದಲ್ಲಿ ಒಡೆದು ಆಳುವ ನೀತಿ ಹೆಚ್ಚಾಗಿರುವುದರಿಂದ ಎಲ್ಲರೂ ಒಂದುಗೂಡಿ ಮುನ್ನಡೆಯಬೇಕು ಎಂದರು.
ಡಾ. ಮಹೇಶ್ ಜೋಷಿ ಮಾತನಾಡಿ, ಬ್ರಾಹ್ಮಣ ಸಮುದಾಯ ಎಂದು ಹೇಳಿಕೊಂಡರೆ ನಷ್ಟ ಎನ್ನುವವರೇ ಹೆಚ್ಚು. ಆದರೆ, ಬ್ರಾಹ್ಮಣ ಸಮುದಾಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಭಾಷೆಗಳ ನಡುವೆ ಗೌರವ ಇರಬೇಕು ಎಂದರು.
ತಿರುವನಂತಪುರಂ ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಬಿ.ಎನ್.ಸುರೇಶ್, ಬೆಂಗಳೂರು ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್.ಗಂಗಾಧರ್, ಮಹಾಸಭಾ ಗೌರವಾಧ್ಯಕ್ಷ ಡಾ. ವೆಂಕಟರಾವ್, ಗಾಯತ್ರಿ ಪ್ರತಿಷ್ಠಾನ ಅಧ್ಯಕ್ಷ ಡಾ. ಎಚ್.ವಿ.ಸುಬ್ರಹ್ಮಣ್ಯ, ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.