ADVERTISEMENT

ದಿನದ ಸೂಕ್ತಿ| ಭಕ್ತಿಯ ಫಲ

ಎಸ್.ಸೂರ್ಯಪ್ರಕಾಶ ಪಂಡಿತ್
Published 9 ಮಾರ್ಚ್ 2021, 1:12 IST
Last Updated 9 ಮಾರ್ಚ್ 2021, 1:12 IST
ಪ್ರಾರ್ಥನೆ
ಪ್ರಾರ್ಥನೆ   

ಮಮ ನ ಭಜನಶಕ್ತಿಃ ಪಾದಯೋಸ್ತೇ ನ ಭಕ್ತಿಃ

ನ ಚ ವಿಷಯವಿರಕ್ತಿರ್ಧ್ಯಾನಯೋಗೇ ನ ಸಕ್ತಿಃ ।

ಇತಿ ಮನಸಿ ಸದಾಹಂ ಚಿಂತಯನ್ನಾದ್ಯಶಕ್ತೇ

ADVERTISEMENT

ರುಚಿವಚನಪುಷ್ಪೈರರ್ಚನಂ ಸಂಚಿನೋಮಿ ।।

ಇದರ ತಾತ್ಪರ್ಯ ಹೀಗೆ:

‘ನನಗೆ ಭಕ್ತಿ ಮಾಡುವ ಶಕ್ತಿ ಇಲ್ಲ; ನಿನ್ನ ಪಾದಗಳಲ್ಲಿ ಭಕ್ತಿ ಇಲ್ಲ; ಇಂದ್ರಿಯ ಭೋಗಗಳಲ್ಲಿ ವೈರಾಗ್ಯ ಬಂದಿಲ್ಲ; ಧ್ಯಾನಯೋಗದಲ್ಲಿ ಆಸಕ್ತಿ ತೋರಲಿಲ್ಲ – ಹೀಗೆಂದು ಮನಸ್ಸಿನಲ್ಲಿ ಯಾವಾಗಲೂ ಕೊರಗುತ್ತ ಕೊರಗುತ್ತ, ಎಲೈ ಆದಿಶಕ್ತಿಯೇ, ಸುಂದರವಾದ ಮಾತುಗಳು ಎಂಬ ಹೂವುಗಳಿಂದ ನಿನ್ನ ಅರ್ಚನೆಯನ್ನು ಮಾಡುತ್ತಿರುವೆ.’

ಭಕ್ತಿಯ ನಿರೂಪಣೆಯನ್ನು ಮಾಡುತ್ತಿದೆ ಈ ಪದ್ಯ.

ಭಕ್ತಿ ಎಂಬುದು ಭಕ್ತನು ದೇವರೊಂದಿಗೆ ಸಾಧಿಸುವ ತಾದಾತ್ಮ್ಯ; ಇದನ್ನು ಪ್ರೀತಿ ಎಂದೂ ಕರೆಯಬಹುದು. ಇದು ತೋರಿಕೊಳ್ಳುವ ವಿಧಾನಗಳೂ ಹತ್ತಾರು. ಮೊದಲಿಗೆ ನಮ್ಮ ಇಂದ್ರಿಯ ಸುಖಗಳ ಬಗ್ಗೆ ಉದಾಸೀನತೆ ಬರಬೇಕು; ಲೌಕಿಕ ಸುಖದುಃಖಗಳಿಂದ ಮನಸ್ಸು ದೂರವಾಗಬೇಕು. ಭಗವಂತನ ಸಾಕ್ಷತ್ಕಾರವಾಗಬೇಕೆಂಬ ಉತ್ಕಟತೆ ಮೂಡಬೇಕು. ಎಲ್ಲೆಲ್ಲೂ ದೇವರನ್ನೇ ಕಾಣುವಂಥ ಭಾವ ಗಟ್ಟಿಯಾಗಬೇಕು.

ಆದರೆ ಇಂಥ ಸಿದ್ಧತೆಯನ್ನು ಗಳಿಸುವುದು ಸುಲಭವಲ್ಲ. ಆದರೆ ಇದಕ್ಕೊಂದು ಸುಲಭದ ದಾರಿಯೂ ಇದೆ. ನಮಗೆ ನಮ್ಮ ಅಶಕ್ತಿಯ ಬಗ್ಗೆ ತಿಳಿದಿರಬೇಕು. ಈ ಅಶಕ್ತಿಯನ್ನು ತುಂಬಿಕೊಳ್ಳಬೇಕೆಂಬ ಪ್ರಾಮಾಣಿಕ ಪ್ರಯತ್ನವೂ ನಡೆಯಬೇಕು. ಆರ್ತತೆಯಿಂದ ಭಗವಂತನ ನಾಮಸ್ಮರಣೆ ನಿರಂತರವಾಗಿ ನಡೆಯುತ್ತಿದ್ದರೆ ನಮ್ಮ ಮನಸ್ಸು ಪಾಕಗೊಳ್ಳುತ್ತದೆ. ಇದೇ ಪ್ರಾರ್ಥನೆ. ಇದು ನಮ್ಮಲ್ಲಿ ಭಕ್ತಿಯನ್ನು ನೆಲೆಗೊಳಿಸಲು ಸಹಕಾರಿಯಾಗುತ್ತದೆ. ಇದನ್ನೇ ಈ ಪದ್ಯ ಇಲ್ಲಿ ಹೇಳುತ್ತಿರುವುದು.

ನಮ್ಮಲ್ಲಿ ಭಕ್ತಿ ನೆಲೆಗೊಂಡಿದೆ ಎಂಬುದಕ್ಕೆ ನಿದರ್ಶನ ಏನು – ಎಂಬ ಪ್ರಶ್ನೆಗೆ ಉತ್ತರವೋ ಎಂಬಂತಿದೆ ಈ ಪದ್ಯ:

ಯತ್ರೈವ ಯತ್ರೈವ ಮನೋ ಮದೀಯಂ

ತತ್ರೈವ ತತ್ರೈವ ತವ ಸ್ವರೂಪಮ್‌ ।

ಯತ್ರೈವ ಯತ್ರೈವ ಶಿರೋ ಮದೀಯಮ್‌

ತ್ರತ್ರೈವ ತತ್ರೈವ ಪದದ್ವಯಂ ತೇ ।।

’ನನ್ನ ಮನಸ್ಸು ಎಲ್ಲೆಲ್ಲಿ ಸುಳಿದಾಡುವುದೋ ಅಲ್ಲೆಲ್ಲಾ ನಿನ್ನ ಸ್ವರೂಪವೇ ಕಂಡುಬರುತ್ತದೆ. ಎಲ್ಲೆಲ್ಲಿ ನನ್ನ ತಲೆಯನ್ನಿಡುವೆನೋ ನಿನ್ನ ಪದದ್ವಯವೇ ಇರುತ್ತದೆ‘ – ಎಂಬುದು ಇದರ ಭಾವ.

ನಮ್ಮ ನಡೆ–ನುಡಿಗಳಲ್ಲಿ ಭಕ್ತಿಭಾವವೇ ತುಂಬಿದ್ದರೆ ಆಗ ನಾವು ನೋಡುವುದೆಲ್ಲವೂ ದೇವರ ರೂಪವಾಗಿಯೇ ಕಾಣುತ್ತದೆ, ದೇವರನ್ನು ಹೊರತು ಪಡಿಸಿ ಇನ್ನೊಂದು ತತ್ತ್ವವೇ ಯಾವ ವಸ್ತುವಿನಲ್ಲೂ ನಮಗೆ ಕಾಣದು. ಇದೇ ಭಕ್ತಿಯ ಪರಾಕಾಷ್ಠೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.