ADVERTISEMENT

20 ಸಾವಿರ ಜನರ ಮತಾಂತರ: ಸತ್ಯಕ್ಕೆ ದೂರ ಎಂದ ಸೊಲೊಮೊನ್‌ ರಾಜ್‌ಕುಮಾರ್

ಕ್ರಿಶ್ಚಿಯನ್‌ ಮಾನವ ಹಕ್ಕುಗಳ ವೇದಿಕೆ ರಾಜ್ಯ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 15:22 IST
Last Updated 22 ಸೆಪ್ಟೆಂಬರ್ 2021, 15:22 IST
ಸೊಲೊಮೊನ್‌ ರಾಜ್‌ಕುಮಾರ್
ಸೊಲೊಮೊನ್‌ ರಾಜ್‌ಕುಮಾರ್   

ಚಿತ್ರದುರ್ಗ: ‘ಬಲವಂತದ ಮತಾಂತರ ನಡೆಯುತ್ತಿದೆ ಎಂಬುದಾಗಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು’ ಎಂದು ಕ್ರಿಶ್ಚಿಯನ್‌ ಮಾನವ ಹಕ್ಕುಗಳ ವೇದಿಕೆ ರಾಜ್ಯ ಕಾರ್ಯದರ್ಶಿ ಸೊಲೊಮೊನ್‌ ರಾಜ್‌ಕುಮಾರ್ ತಿಳಿಸಿದರು.

‘ಹೊಸದುರ್ಗ ತಾಲ್ಲೂಕು ಸೇರಿ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಮಂದಿ ಬಲವಂತದಿಂದ ಮತಾಂತರ ಆಗಿದ್ದಾರೆ ಎಂಬುದಾಗಿ ಶಾಸಕರು ಆರೋಪಿಸಿದ್ದಾರೆ. ಯಾವ ಪೊಲೀಸ್ ಠಾಣೆಯಲ್ಲೂ ಇಂತಹ ಒಂದೂ ಪ್ರಕರಣ ದಾಖಲಾಗಿಲ್ಲ. ಇದನ್ನು ಸಾಕ್ಷಿ ಸಮೇತ ಸಾಬೀತುಪಡಿಸಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

‘ಮತಾಂತರ ಕುರಿತು ಪ್ರಶ್ನಿಸಿದರೆ, ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಚರ್ಚ್‌ನವರು ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ಹೇಳಿಕೆಯೂ ಸತ್ಯವಲ್ಲ. ಕ್ರಿಶ್ಚಿಯನ್ ಸಮುದಾಯದವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಸರಿಯೇ’ ಎಂದು ಪ್ರಶ್ನಿಸಿದರು.

ADVERTISEMENT

‘ಬಲವಂತವಾಗಿ ಮತಾಂತರ ಮಾಡುವವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಿ. ಇದಕ್ಕೆ ನಮ್ಮ ಸಮ್ಮತಿ ಇದೆ. ಅಂಥವರಿಂದ ಸಮುದಾಯಕ್ಕೆ ಕೆಟ್ಟ ಹೆಸರು. ಆದರೆ, ಸ್ವ–ಇಚ್ಛೆಯಿಂದ ಆಗುವವರನ್ನು ಬಲವಂತ, ಆಮಿಷ ಎಂಬ ಅರ್ಥದಲ್ಲಿ ಬಿಂಬಿಸುವುದು ಸರಿಯಲ್ಲ. ಶಾಸಕರ ತಾಯಿ ಬಲವಂತದಿಂದ ಮತಾಂತರ ಆಗಿದ್ದಾರೋ, ಇಲ್ಲವೋ ಎಂಬುದನ್ನು ಅವರ ತಾಯಿಯೇ ಸ್ಪಷ್ಟಪಡಿಸಬೇಕು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.