ಹೊನ್ನಾಳಿ: ತಾಲ್ಲೂಕಿನ ಅರಬಗಟ್ಟೆ ಗ್ರಾಮದ ಇಂದಿರಾಗಾಂಧಿ ವಸತಿ ಶಾಲಾ ಆವರಣ ಹಾಗೂ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯನಾಲೆಯ ಆಸು ಪಾಸಿನ ಜಮೀನುಗಳ ವ್ಯಾಪ್ತಿಯಲ್ಲಿ ಈಚೆಗೆ ಕಾಣಿಸಿಕೊಂಡಿದ್ದ ಚಿರತೆ ಮತ್ತು ಅದರ ಎರಡು ಮರಿಗಳು, ತಾಲ್ಲೂಕಿನ ಎಚ್. ಕಡದಕಟ್ಟೆ, ಮಾರಿಕೊಪ್ಪ ಮತ್ತಿತರ ಗ್ರಾಮಗಳ ಜಮೀನುಗಳಲ್ಲಿ ಮಂಗಳವಾರ ಮತ್ತೆ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಆತಂಕ ಉಂಟು ಮಾಡಿವೆ.
ಚಿರತೆಗಳ ಓಡಾಟದ ಸುದ್ದಿ ಕೇಳಿ ಗಾಬರಿಗೊಂಡಿರುವ ಈ ಭಾಗದ ಜನರು ತಮ್ಮ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸೂರ್ಯಾಸ್ತದ ನಂತರ ಮನೆಗಳಿಂದ ಹೊರಬರಲೂ ಹೆದರುತ್ತಿದ್ದಾರೆ.
ಮಾರಿಕೊಪ್ಪ ರಸ್ತೆಯ ಸಾಯಿ ಗುರುಕುಲ ವಿದ್ಯಾಸಂಸ್ಥೆಯ ಹಿಂಭಾಗದ ಶ್ರೀಶೈಲಪ್ಪ ಎಂಬುವವರ ಸಾಕುನಾಯಿಯನ್ನು ಚಿರತೆ ತಿಂದು ಹಾಕಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಜಿ.ಜಿ. ಶಿವಯೋಗಿ ಸಿಬ್ಬಂದಿ ಜತೆ ಜಮೀನುಗಳಿಗೆ ತೆರಳಿ ಪರಿಶೀಲಿಸಿದರು.
ಚಿರತೆಯ ಹೆಜ್ಜೆ ಗುರುತುಗಳಾಗಲಿ, ನಾಯಿಯ ಶವದ ಕುರುಹುಗಳಾಗಲಿ ಕಂಡುಬರಲಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಎಚ್. ಕಡದಕಟ್ಟೆ, ಮಾರಿಕೊಪ್ಪ ಮತ್ತಿತರ ಗ್ರಾಮಗಳ ಜಮೀನುಗಳು ಒಣ ಭೂಮಿಯಾಗಿರುವ ಕಾರಣ ಚಿರತೆಯ ಹೆಜ್ಜೆ ಗುರುತುಗಳು ಕಾಣದಿರಬಹುದು. ಆದರೂ ಚಿರತೆ ಸೆರೆಗೆ ಬೋನು ಇರಿಸಲಾಗಿದೆ. ಸಾರ್ವಜನಿಕರು, ರೈತರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.