ADVERTISEMENT

ಅಂತ್ಯಸಂಸ್ಕಾರ ನಿಲ್ಲಿಸಿ ಗ್ರಾಮಸ್ಥರ ಪ್ರತಿಭಟನೆ

ಕಾರ್ಮಿಕರ ಸಾವಿಗೆ ಪಿಡಿಒ, ಅಧ್ಯಕ್ಷೆ ಪತಿ ಕಾರಣ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 6:00 IST
Last Updated 22 ಮಾರ್ಚ್ 2023, 6:00 IST
ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ಮಂಗಳವಾರ ವಿಷಗಾಳಿ ಸೇವಿಸಿ ಮೃತಪಟ್ಟ ಪೌರಕಾರ್ಮಿಕರ ಸಾವಿಗೆ ಕಾರಣರಾದ ಪಿಡಿಒ ಶಶಿಧರ್ ಪಾಟೀಲ್ ಹಾಗೂ ಅಧ್ಯಕ್ಷೆಯ ಪತಿ ಭೀಮಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ಮಂಗಳವಾರ ವಿಷಗಾಳಿ ಸೇವಿಸಿ ಮೃತಪಟ್ಟ ಪೌರಕಾರ್ಮಿಕರ ಸಾವಿಗೆ ಕಾರಣರಾದ ಪಿಡಿಒ ಶಶಿಧರ್ ಪಾಟೀಲ್ ಹಾಗೂ ಅಧ್ಯಕ್ಷೆಯ ಪತಿ ಭೀಮಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.   

ಜಗಳೂರು: ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ಸೋಮವಾರ ಚರಂಡಿ ಸ್ವಚ್ಛಗೊಳಿಸುವಾಗ ವಿಷಗಾಳಿ ಸೇವನೆಯಿಂದ ಮೃತಪಟ್ಟ ಇಬ್ಬರು ದಿನಗೂಲಿ ಪೌರಕಾರ್ಮಿಕರ ಶವಗಳನ್ನು ಗ್ರಾಮಸ್ಥರು ಗ್ರಾಮದ ಪಂಚಾಯಿತಿ ಕಚೇರಿ ಎದುರು ಇಟ್ಟು ಪಿಡಿಒ ಶಶಿಧರ್ ಪಾಟೀಲ್ ಅವರ ವಿರುದ್ಧ ಪ್ರತಿಭಟನೆ ನಡೆಸಿದರು.

ಕಾರ್ಮಿಕರ ಸಾವಿಗೆ ಪಿಡಿಒ ಶಶಿಧರ್ ಪಾಟೀಲ್ ಹಾಗೂ ಅಧ್ಯಕ್ಷೆ ಪತಿ ಭೀಮಪ್ಪ ಕಾರಣರಾಗಿದ್ದಾರೆ. ಮೃತರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಪಿಡಿಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸೇವೆಯಿಂದ ಅಮಾನತು ಮಾಡಬೇಕು. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನಕಾರರು ಅಂತ್ಯ ಸಂಸ್ಕಾರವನ್ನು ಮಾಡದೇ ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘಟನೆ ಮುಖಂಡರಾದ ಬೇತೂರು ಮಂಜುನಾಥ್, ವಕೀಲ ಪುಣಭಗಟ್ಟಿ ನಿಂಗಪ್ಪ, ಸತೀಶ್, ಹನುಮಂತಪ್ಪ, ಮಂಜುನಾಥ್ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರೊಂದಿಗೆ ಸಭೆ ನಡೆಸಿದರು.

ADVERTISEMENT

‘ಮುಖ್ಯಮಂತ್ರಿ ಪರಿಹಾರ ನಿಧಿ ಸೇರಿ, ವಿವಿಧ ಲಭ್ಯ ಅನುದಾನಗಳಡಿ ಮೃತರ ಕುಟುಂಬದವರಿಗೆ ಪರಿಹಾರ ನೀಡಲು ಮತ್ತು ಎರಡೂ ಕುಟುಂಬದ ತಲಾ ಒಬ್ಬ ಸದಸ್ಯರಿಗೆ ನೌಕರಿ ಕೊಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ್ ತಿಳಿಸಿದರು.

‘ಮೃತರ ಸಾವಿನ ಬಗ್ಗೆ ಇಲಾಖಾ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ, ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಇದ್ದರು.

***

ಬಸವನಕೋಟೆ ಪಿಡಿಒ ಶಶಿಧರ ಪಾಟೀಲ್ ಕರ್ತವ್ಯ ಲೋಪದ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ವರದಿ ಸಲ್ಲಿಸಲಾಗಿದೆ.

- ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಇಒ

***

ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಅವರು ಸಲ್ಲಿಸಿರುವ ವರದಿ ಕೈಸೇರಿದ್ದು, ಶೀಘ್ರವೇ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವುದು.

ಎ.ಚನ್ನಪ್ಪ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.