ಹುಬ್ಬಳ್ಳಿ: ‘ಸಾಹಿತ್ಯವು ಕೆಲವೇ ವಲಯಕ್ಕೆ ಸೀಮಿತ ಆದರೆ ಜನರನ್ನು ತಲುಪುವುದಿಲ್ಲ. ಸಾಹಿತ್ಯ ಇರುವುದೇ ಸಮಾಜದ ಶ್ರೇಯೋಭಿವೃದ್ಧಿಗಾಗಿ’ ಎಂದು ಕಾರ್ಮಿಕ ಮುಖಂಡ ಕೆ.ಎಸ್. ಶರ್ಮಾ ಹೇಳಿದರು.
ಮಾರ್ಚ್ 24–25ರಂದು ಇಲ್ಲಿನ ಸವಾಯಿ ಗಂಧರ್ವ ಕಲಾ ಭವನದಲ್ಲಿ ನಡೆಯಲಿರುವ ಧಾರವಾಡ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಸಮ್ಮೇಳನದ ಹುಬ್ಬಳ್ಳಿಯ ಕಚೇರಿಯಲ್ಲಿ ಸೋಮವಾರ ಬಿಡುಗಡೆ ಮಾಡಿ ಮಾತನಾಡಿದರು.
‘ಸಾಹಿತ್ಯವು ವೈಭವೀಕರಣಕ್ಕಿಂತ ವೈಚಾರಿಕತೆಯನ್ನು ಬೆಳೆಸಬೇಕು’ ಎಂದು ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ, ‘ಎಲ್ಲರನ್ನೂ ಒಳಗೊಳ್ಳುವ ಸಮ್ಮೇಳನ ಇದಾಗಲಿದೆ’ ಎಂದರು.
ಪರಿಷತ್ತಿನ ಹುಬ್ಬಳ್ಳಿ ನಗರ ತಾಲ್ಲೂಕು ಘಟಕದ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ, ‘ಕಲಾತಂಡಗಳ ಮೆರವಣಿಗೆಯಲ್ಲಿ ಮಹಿಳಾ ಮಂಡಳಗಳ ಸದಸ್ಯೆಯರು ಪೂರ್ಣಕುಂಭ ಹೊತ್ತು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ‘ಸಮ್ಮೇಳನದ ಪ್ರತಿಯೊಂದು ಕಾರ್ಯಕ್ರಮವೂ ನಿಗದಿತ ಸಮಯಕ್ಕೆ ನಡೆಯಲು ಎಲ್ಲರೂ ಸಹಕರಿಸಬೇಕು’ ಎಂದರು.
‘ಸಾಹಿತ್ಯ ಸಮ್ಮೇಳನವು ದಂಡಿ ದಂಡಿ ಪುಸ್ತಕ ಬರೆದವರಿಗೆ ಸೀಮಿತವಲ್ಲ. ಕನ್ನಡ ಪ್ರೀತಿಸುವ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದು’ ಎಂದು ಸಾಮಾಜಿಕ ಕಾರ್ಯಕರ್ತ ಗಂಗಾಧರ ದೊಡವಾಡ ಅಭಿಪ್ರಾಯಪಟ್ಟರು.
ಶಶಿಧರ ಸಾಲಿ, ಬಿ.ಎ. ಪಾಟೀಲ, ಜಯಪ್ರಕಾಶ ಟೆಂಗಿನಕಾಯಿ, ಶಂಕರ
ಗೌಡ ಸಾತ್ಮಾರ, ಬಿ.ಟಿ. ರಾಜಮಾನೆ, ಸಿ.ಬಿ.ಎಲ್. ಹೆಗಡೆ, ಬಿ.ಟಿ. ರಾಜಮಾನೆ, ಸಿ.ಕೆ. ಮಾಲಿಪಾಟೀಲ, ನಯನಾ ಗೋಟಡಕಿ, ಬಂಡು ಕುಲಕರ್ಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.