ಹುಬ್ಬಳ್ಳಿ: ಮೊನಚು ಬರಹಗಳಿಂದ ಪ್ರಸಿದ್ಧರಾಗಿದ್ದ ಹಿರಿಯ ಪತ್ರಕರ್ತ, ಲೇಖಕ, ಕನ್ನಡಪರ ಹೋರಾಟಗಾರ ಡಾ.ಪಾಟೀಲ ಪುಟ್ಟಪ್ಪ ಅನಾರೋಗ್ಯದಿಂದ ಸೋಮವಾರ ರಾತ್ರಿ 10.10ಕ್ಕೆ ನಿಧನರಾದರು.
ರಕ್ತದೊತ್ತಡ, ಉಸಿರಾಟ ತೊಂದರೆ, ಮಿದುಳಿನ ರಕ್ತಸ್ರಾವ ಸೇರಿದಂತೆ ವಯೋಸಹಜ ತೊಂದರೆಯಿಂದ ಬಳಲುತ್ತಿದ್ದ ಅವರು ಫೆಬ್ರುವರಿ 10 ರಿಂದ ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಾರ್ಚ್ 17ರಂದು ಬಸವ ಪುರಸ್ಕಾರ ಪ್ರದಾನ ಮಾಡಲು ಜಿಲ್ಲಾಡಳಿತವು ಎಲ್ಲ ತಯಾರಿ ಮಾಡಿಕೊಂಡಿತ್ತು.
ಅವರಿಗೆ ಒಬ್ಬ ಪುತ್ರ, ಮೂವರು ಪುತ್ರಿಯರು ಇದ್ದಾರೆ. ಪತ್ನಿ ಇಂದುಮತಿ ಮೂರು ವರ್ಷಗಳ ಹಿಂದೆ ಮತ್ತು ಇನ್ನೊಬ್ಬ ಪುತ್ರ ರಾಜು ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಕನ್ನಡದ ಅಸ್ಮಿತೆಗೆ ಹೋರಾಡಿದ ಒಂಟಿ ಸಲಗ
ಪಾಟೀಲ ಪುಟ್ಟಪ್ಪ ಅವರ ಅಂತ್ಯಕ್ರಿಯೆ ಮಂಗಳವಾರ ಹಾವೇರಿ ತಾಲ್ಲೂಕು ಹಲಗೇರಿಯಲ್ಲಿ ನಡೆಯಲಿದೆ. ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಸ್ವಗೃಹದಲ್ಲಿ ಮಂಗಳವಾರ ಬೆಳಿಗ್ಗೆ 9ರಿಂದ 1ರವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು.
ಅಂತ್ಯ ಸಂಸ್ಕಾರವನ್ನು ಹಾವೇರಿ ತಾಲ್ಲೂಕು ಹಲಗೇರಿಯಲ್ಲಿ ನೆರವೇರಿಸಲಾಗುವುದು ಎಂದು ಪಾಟೀಲ ಪುಟ್ಟಪ್ಪ ಅವರ ಪುತ್ರ ಅಶೋಕ್ ಪಾಟೀಲ್ ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವ, ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’, ಟಿಎಸ್ಆರ್ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಹಾಗೂ 2003ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಪ್ರಮುಖ ಕೃತಿಗಳು: ‘ನಮ್ಮ ದೇಶ ನಮ್ಮ ಜನ’, ‘ನನ್ನದು ಈ ಕನ್ನಡ ನಾಡು’, ‘ಕರ್ನಾಟಕದ ಕಥೆ’, ‘ಪಾಪು ಪ್ರಪಂಚ’, ‘ಶಿಲಾಬಾಲಿಕೆ ನುಡಿದಳು’, ‘ಗವಾಕ್ಷ ತೆರೆಯಿತು’, ‘ಸಾವಿನ ಮೇಜವಾನಿ’ ಪಾಪು ಅವರ ಪ್ರಮುಖ ಕೃತಿಗಳಾಗಿವೆ.
ಇದನ್ನೂ ಓದಿ:ಹಾವೇರಿಯಲ್ಲಿ ಪಾಟೀಲ ಪುಟ್ಟಪ್ಪ ಅಂತ್ಯಕ್ರಿಯೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.