ಹಾವೇರಿ: ‘ಕನ್ನಡ ಭಾಷೆಯು ಪುರಾತನ ಮತ್ತು ಅತ್ಯಂತ ವೈಜ್ಞಾನಿಕ ಭಾಷೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಜಗತ್ತಿನಲ್ಲಿ ಉಳಿಯುವ ಕೆಲವೇ ಭಾಷೆಗಳಲ್ಲಿ ಕನ್ನಡವು ಒಂದಾಗಿರುತ್ತದೆ’ ಎಂದು ಆಸಂಗಿಯ ವೀರಬಸವ ಸ್ವಾಮೀಜಿ ಹೇಳಿದರು.
ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಸಿದ್ದಣ್ಣ ಚೌಶೆಟ್ಟಿ, ಎಸ್.ಎಂ.ಹಾಲಯ್ಯನವರಮಠ, ವಿಶ್ವನಾಥ ಚೌಶೆಟ್ಟಿ ಮತ್ತು ಶೋಭಾ ಮಾಗಾವಿ ಇವರ ದತ್ತಿನಿಧಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾಹಿತ್ಯದ ಓದು ನಮ್ಮನ್ನು ಸಮಾಜಮುಖಿಯಾಗಿಸಲು ಸಹಕಾರಿಯಾಗುತ್ತದೆ. ಏಕೆಂದರೆ ಸಾಹಿತ್ಯ ಕಾಲಾತೀತ ನಡಿಗೆಯಾಗಿದೆ. ಬದುಕಿನ ಅನನ್ಯತೆ, ಜೀವನ ಮೌಲ್ಯಗಳನ್ನು ಹಿಡಿದಿಟ್ಟುಕೊಂಡು, ಭವಿಷ್ಯದ ನಂಬಿಕೆ, ಆಚರಣೆ ಮತ್ತು ಬದ್ಧತೆಗಳನ್ನು ಪ್ರತಿಪಾದಿಸಲು ಜೀವಂತ ಪಳೆಯುಳಿಕೆ ಆಗಿದೆ. ಬೀಚಿ, ಭೈರಪ್ಪ, ಕಾರಂತ, ಕುವೆಂಪು ಮೊದಲಾದವರ ಸಾಹಿತ್ಯ ಇದಕ್ಕೆ ಉದಾರಹಣೆ ಆಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಜಿಲ್ಲೆ ಎಲ್ಲಾ ತಾಲ್ಲೂಕುಗಳಿಂತ ಹಾವೇರಿ ತಾಲ್ಲೂಕಿನಲ್ಲಿಯೇ ಅತೀ ಹೆಚ್ಚು ದತ್ತಿದಾನಗಳಿವೆ. ಸಾಹಿತ್ಯ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲು ಇಂಥ ದತ್ತಿಗಳು ಸಹಾಯಕವಾಗಿವೆ. ಹಾವೇರಿ ತಾಲ್ಲೂಕು ಕಸಾಪ ಘಟಕವು ಹೆಚ್ಚು ಚಟುವಟಿಕೆಗಳಿಂದ ಕೂಡಿದೆ ಎಂದು ಹೇಳಿದರು.
ಅಕ್ಕನ ಬಳಗದ ಅಧ್ಯಕ್ಷೆ ಅಮೃತಮ್ಮ ಶೀಲವಂತರ ದತ್ತಿ ಉಪನ್ಯಾಸ ನೀಡಿದರು. ಕಸಾಪ ತಾಲ್ಲೂಕು ಘಟಕದ ಆಧ್ಯಕ್ಷ ವೈ.ಬಿ.ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್. ಹಿರೇಮಠ, ಎಸ್.ಎನ್.ದೊಡ್ಡಗೌಡರ, ಪೃಥ್ವಿರಾಜ ಬೆಟಗೇರಿ, ಈರಣ್ಣ ಬೆಳವಡಿ, ದಾಕ್ಷಾಯಣಿ ಗಾಣಗೇರಿ, ಲಲಿತಕ್ಕ ಹೊರಡಿ, ಅಕ್ಕಮಹಾದೇವಿ ಹಾನಗಲ್ಲ, ಅಲ್ಲಾಭಕ್ಷ ದೇವಿಹೊಸೂರ, ಪ್ರಭು ಹಿಟ್ನಳ್ಳಿ, ಶಂಕರ ಸುತಾರ, ಎನ್.ಬಿ.ಕಾಳೆ, ಕೆ.ಬಿ.ಭಿಕ್ಷಾವರ್ತಿಮಠ ಇದ್ದರು.
ಸಿ.ಎಸ್. ಮರಳಿಹಳ್ಳಿ ದತ್ತಿದಾನಿಗಳ ಪರಿಚಯ ಮಾಡಿದರು. ಎಸ್.ಎಲ್. ಕಾಡದೇವರಮಠ ಸ್ವಾಗತಿಸಿದರು. ಎಸ್.ಎಂ ಬಡಿಗೇರ ನಿರೂಪಿಸಿದರು. ಸಿ.ಎಸ್.ಸನದಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.