ADVERTISEMENT

ಬ್ಯಾಡಗಿ: ಉಲ್ಬಣಿಸಿದ ನೀರಿನ ಸಮಸ್ಯೆ

ಶಿಡೇನೂರ, ಮೋಟೆಬೆನ್ನೂರ ಹಾಗೂ ಸುತ್ತಲ ಗ್ರಾಮಗಳಲ್ಲಿ ತತ್ವಾರ

ಪ್ರಮೀಳಾ ಹುನಗುಂದ
Published 1 ಮೇ 2019, 11:29 IST
Last Updated 1 ಮೇ 2019, 11:29 IST
ಬ್ಯಾಡಗಿ ತಾಲ್ಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ರೈತರ ಸಹಾಯವಾಣಿ ಮೂಲಕ ಕಳುಹಿಸಿದ ಟ್ಯಾಂಕರ್‌ ನೀರನ್ನು ಸಂಗ್ರಹಿಸುತ್ತಿರುವುದು
ಬ್ಯಾಡಗಿ ತಾಲ್ಲೂಕಿನ ಕೊಲ್ಲಾಪುರ ಗ್ರಾಮದಲ್ಲಿ ರೈತರ ಸಹಾಯವಾಣಿ ಮೂಲಕ ಕಳುಹಿಸಿದ ಟ್ಯಾಂಕರ್‌ ನೀರನ್ನು ಸಂಗ್ರಹಿಸುತ್ತಿರುವುದು   

ಬ್ಯಾಡಗಿ: ತಾಲ್ಲೂಕಿನ ಶಿಡೇನೂರ ಮತ್ತು ಮೋಟೆಬೆನ್ನೂರ ಹಾಗೂ ಸುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜನ ಪರಿತಪಿಸುತ್ತಿದ್ದಾರೆ.

ಶಾಸಕರ ಸ್ವಗ್ರಾಮ ಮೋಟೆಬೆನ್ನೂರು ಹಾಗೂ ಸುತ್ತಲಿನ 16 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡರೂ 8 ರಿಂದ 10 ದಿನಕ್ಕೊಮ್ಮೆ ಕುಡಿಯುವ ನೀರಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿದಿದ್ದು, ನೀರಿಗೆ ಹಾಹಾಕಾರ ಉಂಟಾಗಿದೆ. ಊರ ಹೊರಗಿನ ಕೊಳವೆ ಬಾವಿಯಿಂದ ನೀರು ತರಬೇಕಾಗಿದ್ದು, ಮಹದೇವ ಮೈಲಾರ ಬಡಾವಣೆ, ಕ್ರೈಸ್ತ ಕಾಲೋನಿಗಳಲ್ಲಿ ನೀರಿನ ಸಮಸ್ಯೆಯಾಗಿದೆ ಎಂದು ಮಾಲತೇಶ ಕುರಿ ತಿಳಿಸಿದರು.

ADVERTISEMENT

ಗ್ರಾಮದಲ್ಲಿ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಒಂದು ಸ್ಥಗಿತಗೊಂಡಿದೆ. ಇನ್ನೆರಡರಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಬೆಳಿಗ್ಗೆ ಮಾತ್ರ ಕುಡಿಯುವ ನೀರು ದೊರೆಯುತ್ತದೆ. ರೈತ ಸಂಘವು ನಡೆಸುತ್ತಿರುವ ಸಹಾಯವಾಣಿಗೆ ಕರೆ ಮಾಡಿ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳಲಾಗಿದೆ ಎಂದು ಸತೀಶ ಪಾಟೀಲ ತಿಳಿಸಿದರು.

ಮಹದೇವ ಮೈಲಾರ ಶಾಲೆಯ ಹಿಂಬಾಗದಲ್ಲಿರುವ ರೈತ ನಾಗಪ್ಪ ಕದಂ ಅವರಿಗೆ ಸೇರಿದ ಕೊಳವೆ ಬಾವಿಯನ್ನು ಗ್ರಾಮ ಪಂಚಾಯ್ತಿಯು ನೀರಿಗಾಗಿ ಎರವಲು ಪಡೆದಿದೆ. ಆದರೆ, ಅದರಲ್ಲಿ ಎರಡು ಗಂಟೆಗಳ ಬಳಿಕ ನೀರು ಕಡಿಮೆಯಾಗುತ್ತದೆ. ಇಲ್ಲಿ 25 ಕ್ಕೂ ಹೆಚ್ಚು ತಳ್ಳು ಗಾಡಿಗಳನ್ನು ಪಾಳಿಗೆ ನಿಲ್ಲಿಸಲಾಗುತ್ತದೆ. ಹೀಗಾಗಿ ಪಾಳಿ ಹಚ್ಚಿದವರಿಗೆ ನೀರು ಸಿಗದೆ ವಾಪಸ್ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವೀರಣ್ಣ ಹಿತ್ತಲಮನಿ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮೋಟೆಬೆನ್ನೂರ ಗ್ರಾಮದ ಜನಸಂಖ್ಯೆ ಈಗ 15ಸಾವಿರಕ್ಕೆ ತಲುಪಿದೆ. ಇಲ್ಲಿ ಪ್ರತ್ಯೇಕ ಜಾಕ್‌ವೆಲ್ ಮೂಲಕ 24X7 ಕುಡಿಯುವ ನೀರಿನ ಯೋಜನೆ ಜಾರಿಗಳಿಸಲು ಶಾಸಕರು ಮುಂದಾಗಬೇಕೆಂದು ಪರಮೇಶಪ್ಪ ಮೈಲಾರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.