ADVERTISEMENT

‘ನಾರಿಶಕ್ತಿ’ ಬಲಪಡಿಸಿದ ಮೋದಿ

ಬಿಜೆಪಿ ಮಹಿಳಾ ಸಮಾವೇಶದಲ್ಲಿ ಸಂಸದ ಸಂಗಣ್ಣ ಕರಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 5:41 IST
Last Updated 20 ಮಾರ್ಚ್ 2023, 5:41 IST
ಕೊಪ್ಪಳದಲ್ಲಿ ಭಾನುವಾರ ನಡೆದ ಬಿಜೆಪಿ ಮಹಿಳಾ ಸಮಾವೇಶವನ್ನು ಸಂಸದ ಸಂಗಣ್ಣ ಕರಡಿ ಹಾಗೂ ಸಚಿವ ಹಾಲಪ್ಪ ಆಚಾರ್‌ ಉದ್ಘಾಟನೆ ಮಾಡಿದರು
ಕೊಪ್ಪಳದಲ್ಲಿ ಭಾನುವಾರ ನಡೆದ ಬಿಜೆಪಿ ಮಹಿಳಾ ಸಮಾವೇಶವನ್ನು ಸಂಸದ ಸಂಗಣ್ಣ ಕರಡಿ ಹಾಗೂ ಸಚಿವ ಹಾಲಪ್ಪ ಆಚಾರ್‌ ಉದ್ಘಾಟನೆ ಮಾಡಿದರು   

ಕೊಪ್ಪಳ: ‘ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನಾರಿಶಕ್ತಿಯನ್ನು ಬಲಗೊಳಿಸಿದ್ದಾರೆ’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಇಲ್ಲಿ ಭಾನುವಾರ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು ‘ಹೆಣ್ಣು ಮಕ್ಕಳು ಹಣವನ್ನು ಕೂಡಿಟ್ಟು ಮನೆಯನ್ನು ಹಾಗೂ ದೇಶವನ್ನು ಉಳಿಸಿ, ಬೆಳೆಸುತ್ತಾರೆ. ಕುಟುಂಬವನ್ನು ನಿರ್ವಹಣೆ ಮಾಡುವ ಶಕ್ತಿ ಇರುವ ಮಹಿಳೆ ದೇಶದ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾಳೆ. ಇಂದಿರಾಗಾಂಧಿ ಪ್ರಧಾನಿಯಾಗಿದ್ದರೂ ಮಹಿಳೆಯರಿಗೆ ಶೌಚಾಲಯಗಳನ್ನು ಕಟ್ಟಿಸಿಕೊಡಲು ಸಾಧ್ಯವಾಗಲಿಲ್ಲ. ಅನೇಕ ಹಳ್ಳಿಗಳಲ್ಲಿ ಶೌಚಾಲಯಕ್ಕೆ ಹೋಗಲು ಸಂಜೆಯಾಗುವುದನ್ನು ಎದುರು ನೋಡುವ ಪರಿಸ್ಥಿತಿಯಿತ್ತು’ ಎಂದರು.

‘ಪ್ರತಿ 100 ಕಿ.ಮೀ.ಗೆ ಒಂದು ವಿಮಾನ ನಿಲ್ದಾಣ ನಿರ್ಮಾಣ ಮಾಡಿ ಸಂಪರ್ಕಯಾನವನ್ನು ಸುಲಭವಾಗಿ ಎಟಕುವಂತೆ ಮಾಡುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇದರಲ್ಲಿ ಕೊಪ್ಪಳದಲ್ಲಿಯೂ ವಿಮಾನ ನಿಲ್ದಾಣ ಸೇರಿದೆ’ ಎಂದರು.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ ಮಾತನಾಡಿ ‘ದೇಶ ಸ್ವಾವಲಂಬಿಯಾಗಿ ಬೆಳೆಯಲು ಕಾಂಗ್ರೆಸ್ ಏನೂ ಮಾಡಲಿಲ್ಲ. ಕಾಂಗ್ರೆಸ್‌ನವರು ಆರಂಭಿಕ ಶೂರರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಆತ್ಮನಿರ್ಭರ ಭಾರತ ಘೋಷಿಸಿ ಬೆಳವಣಿಗೆಗೆ ವೇಗ ನೀಡಿದರು. ಕಾಂಗ್ರೆಸ್‌ ಮಹಿಳಾ ಮತದಾರರನ್ನು ಮೂಲೆಗುಂಪು ಮಾಡಿತ್ತು. ನಮ್ಮ ಪಕ್ಷ ಅವರಿಗೆ ಸ್ಥಾನಮಾನ ಕೊಟ್ಟಿದೆ’ ಎಂದರು. ಹತಾಶೆಗೊಂಡಿರುವ ಕಾಂಗ್ರೆಸ್‌ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಮಹಿಳಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಶಶಿಕಲಾ ಟೆಂಗಳೆ ‘ಎದುರಾಳಿಗಳಿಗೆ ತಿರುಗೇಟು ನೀಡಲು ಮಹಿಳಾ ಕಾರ್ಯಕರ್ತೆಯರು ಪಕ್ಷದ ಯೋಜನೆಗಳನ್ನು ತಿಳಿದುಕೊಳ್ಳಬೇಕು. ನಮ್ಮ ಪಕ್ಷದ ಜನಪರ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಕಾಂಗ್ರೆಸ್‌ ಪಕ್ಷ ಕಾರ್ಯಕರ್ತೆಯರನ್ನು ಚುನಾವಣಾ ಸಮಯದಲ್ಲಿ ಮಾತ್ರ ಬಳಸಿಕೊಳ್ಳುತ್ತದೆ. ಆದರೆ, ಬಿಜೆಪಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ ಕೊಟ್ಟಿದೆ’ ಎಂದರು.

ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ವಾಣಿಶ್ರೀ ಮಠದ, ಪಕ್ಷದ ಮುಖಂಡರಾದ ಸಿ.ವಿ. ಚಂದ್ರಶೇಖರ್‌, ಸುನೀಲ್‌ ಹೆಸರೂರು, ಶೋಭಾ ನಗರಿ, ಜಯಶ್ರೀ, ಗೀತಾ ಪಾಟೀಲ, ನರಸಿಂಗರಾವ್ ಕುಲಕರ್ಣಿ, ಮಧುರಾ ಕರ್ಣಂ, ಶೈಲಜಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.