ಮೈಸೂರು: ‘ಕೋವಿಡ್ನ 3ನೇ ಅಲೆ ಭೀಕರವಾಗಿರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವುದರಿಂದ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಬಹುಆಯ್ಕೆಯ ಪ್ರಶ್ನೆಗಳ ಮಾದರಿಯಲ್ಲಿ; ಸಿಇಟಿ ಹಾಗೂ ನೀಟ್ ಪರೀಕ್ಷೆಗಳಂತೆ ಒಂದೇ ದಿನ ಎರಡು ಅವಧಿಯಲ್ಲಿ ನಡೆಸುವುದು ಸೂಕ್ತ’ ಎಂದುವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸಲಹೆ ನೀಡಿದ್ದಾರೆ.
ಪರೀಕ್ಷೆಗೂ ಮುನ್ನ ಶಿಕ್ಷಕರು, ಸಿಬ್ಬಂದಿ ಹಾಗೂ 18 ವರ್ಷದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಬೇಕು. ಪರೀಕ್ಷೆ ಆರಂಭವಾಗುವ 72 ಗಂಟೆಗಳಿಗೂ ಮುನ್ನ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ, ಸೋಂಕಿನ ನೆಗೆಟಿವ್ ದೃಢೀಕರಣದೊಂದಿಗೆ ಪರೀಕ್ಷೆಗೆ ಹಾಜರಾಗಲು ಕ್ರಮವಹಿಸುವುದು ಸೂಕ್ತ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಅನುದಾನರಹಿತ ಸಂಸ್ಥೆಗಳ ಬೋಧಕ– ಬೋಧಕೇತರ ಸಿಬ್ಬಂದಿಗೆ 14 ತಿಂಗಳಿಂದ ವೇತನ ನೀಡಿಲ್ಲ. ಮಾಸಿಕ ₹20 ಸಾವಿರದಂತೆ ವೇತನವನ್ನು ಪರಿಹಾರ ರೂಪದಲ್ಲಿ ಸರ್ಕಾರ ನೀಡಬೇಕು. 2019-20, 2020-21ನೇ ಸಾಲಿನ ಸುಮಾರು ₹750 ಕೋಟಿ ಆರ್ಟಿಇ ಬಾಕಿ ಹಣವನ್ನು ಈ ಸಂಸ್ಥೆಗಳಿಗೆ ಕೂಡಲೇ ಬಿಡುಗಡೆಗೊಳಿಸಬೇಕು. ಶುಲ್ಕ ಮತ್ತು ತೆರಿಗೆಗಳಲ್ಲಿ ಶೇ 30ರಷ್ಟು ವಿನಾಯಿತಿಯನ್ನು ಈ ಶಿಕ್ಷಣ ಸಂಸ್ಥೆಗಳಿಗೆ ನೀಡಬೇಕು ಎಂದಿದ್ದಾರೆ.
ಶಿಕ್ಷಣ ಇಲಾಖೆ ಸಿಬ್ಬಂದಿಯಲ್ಲಿ ಮಹಿಳೆಯರಿಗೆ 45 ವರ್ಷ ಮತ್ತು ಪುರುಷರಿಗೆ 50 ವರ್ಷ ಮೀರಿದವರಿಗೆ ಹಾಗೂ 2 ವರ್ಷದೊಳಗಿನ ಮಕ್ಕಳಿರುವ ತಾಯಂದಿರಿಗೆ ಕೋವಿಡ್ ಕಾರ್ಯದ ನಿಯೋಜನೆಯಿಂದ ವಿನಾಯಿತಿ ನೀಡಬೇಕು. ಕರ್ತವ್ಯದಲ್ಲಿದ್ದಾಗ ಕೋವಿಡ್ನಿಂದ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ಪರಿಹಾರ ಹಾಗೂ ಅವರ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಬೇಕು ಎಂದು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.