ADVERTISEMENT

ರಾಯಚೂರು ವಿವಿಗೆ 60 ಬೋಧಕೇತರ ಹುದ್ದೆಗಳ ಭರ್ತಿಗೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:37 IST
Last Updated 19 ಸೆಪ್ಟೆಂಬರ್ 2021, 4:37 IST
ಬಸನಗೌಡ ದದ್ದಲ
ಬಸನಗೌಡ ದದ್ದಲ   

ರಾಯಚೂರು: ರಾಯಚೂರು ವಿಶ್ವವಿದ್ಯಾಲಯಕ್ಕೆ ತುರ್ತಾಗಿ ಅಗತ್ಯವಿರುವ ಬೋಧಕೇತರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲು ಅನುಮತಿ ಕೋರಲಾಗಿದ್ದು, ಸರ್ಕಾರದಿಂದ ಪರಿಶೀಲಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥನಾರಾಯಣ ಸಿ.ಎನ್‌. ಹೇಳಿದ್ದಾರೆ.

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಅವರು ವಿಧಾನಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಚಿವರು ಲಿಖಿತ ಉತ್ತರ ಒದಗಿಸಿದ್ದಾರೆ. ರಾಯಚೂರು ವಿಶ್ವವಿದ್ಯಾಲಯಕ್ಕೆ ಇದುವರೆಗೂ ಯಾವುದೇ ಬೋಧಕೇತರ ಹುದ್ದೆಗಳನ್ನು ಮತ್ತು ಮೂಲಸೌಕರ್ಯಗಳ ವ್ಯವಸ್ಥೆ ಇಲ್ಲದಿರುವುದು ವಿದ್ಯಾರ್ಥಿಗಳ ತೊಂದರೆಗೆ ಕಾರಣವಾಗಿದೆ. ಈ ಕುರಿತು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬುದಾಗಿ ಶಾಸಕರು ಪ್ರಶ್ನಿಸಿದ್ದರು.

ನೂತನ ವಿಶ್ವವಿದ್ಯಾಲಯವು 2020 ಆಗಸ್ಟ್‌ 1ರಿಂದ ಅಸ್ತಿತ್ವಕ್ಕೆ ಬಂದಿದ್ದು, ಪ್ರಸ್ತುತ ಯರಗೇರಾದಲ್ಲಿ 250 ಎಕರೆ ಜಮೀನನ್ನು ನೀಡಲಾಗಿದೆ. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಹೊರಗುತ್ತಿಗೆ ಅಧಾರದಲ್ಲಿ ನೇಮಕವಾದ 26 ಬೋಧಕೇತರ ಸಿಬ್ಬಂದಿಯು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2019 ರ ಮಾರ್ಚ್‌ನಲ್ಲಿ ₹2.2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. 2021–22 ಆರ್ಥಿಕ ಸಾಲಿನಲ್ಲಿ ₹50 ಲಕ್ಷ ಮಂಜೂರಾಗಿದ್ದು, ಈಗಾಗಲೇ ₹12.5 ಲಕ್ಷ ಬಿಡುಗಡೆ ಮಾಡಲಾಗಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ 2021 ರ ಜುಲೈನಲ್ಲಿ 50 ಲಕ್ಷ ಬಿಡುಗಡೆ ಮಾಡಲಾಗಿದೆ. ₹30 ಕೋಟಿ ಅನುದಾನ ಕೋರಿ ವಿಶ್ವವಿದ್ಯಾಲಯದಿಂದ ಪ್ರಸ್ತಾವನೆ ಸಲ್ಲಿಸಿರುವುದು ಕೂಡಾ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.