ತುಮಕೂರು: ಕಾರ್ಮಿಕರಿಗೆ ಲಾಕ್ಡೌನ್ ಪರಿಹಾರ ನೀಡಬೇಕು, ಸಾಮಾಜಿಕ ಭದ್ರತೆ ಒದಗಿಸಿ, ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಮನೆ ಕೆಲಸಗಾರರ ಸಂಘ, ಟೈಲರ್ಗಳ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘ, ಆಟೊ ಚಾಲಕರ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಲಾಕ್ಡೌನ್ ಪರಿಹಾರವಾಗಿ ಎಲ್ಲಾ ಸಂಘಟಿತ ಕಾರ್ಮಿಕರಿಗೆ ₹7,500 ನೀಡಬೇಕು. ಲಾಕ್ಡೌನ್ ಪರಿಹಾರ ಕೋರಿ ಅರ್ಜಿ ಸಲ್ಲಿಸಿರುವ ಮನೆ ಕೆಲಸಗಾರರು, ಹಮಾಲಿ ಕಾರ್ಮಿಕರು, ಹೊಲಿಗೆ, ಮೆಕ್ಯಾನಿಕ್, ಆಟೊ, ಬಸ್, ಲಾರಿ, ಟೆಂಪೊ ಚಾಲಕರು, ದೋಭಿಗಳು, ಕ್ಷೌರಿಕರು, ಕುಂಬಾರರು, ಪುರಿ ಭಟ್ಟಿ ಕಾರ್ಮಿಕರು, ಚಿನ್ನ, ಬೆಳ್ಳಿ ಕೆಲಸಗಾರರು, ಇತರಅಸಂಘಟಿತ ಕಾರ್ಮಿಕರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಸುಮಾರು 55,500 ಮಂದಿ ಅರ್ಜಿ ಸಲ್ಲಿಕೆಯಾಗಿದ್ದು, 7ರಿಂದ 8 ಸಾವಿರ ಕಾರ್ಮಿಕರಿಗೆ ಲಾಕ್ಡೌನ್ ಪರಿಹಾರ ಸಿಕ್ಕಿದೆ. ಉಳಿದವರಿಗೆ ಪರಿಹಾರ ಬಂದಿಲ್ಲ. ಇದಕ್ಕೆ ಆರ್ಥಿಕ ಮಂಜೂರಾತಿಯನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.
ಅಸಂಘಟಿತ ಕಾರ್ಮಿಕರ ಕಲ್ಯಾಣ ಯೋಜನೆಗಳಾದ ಪಿಂಚಣಿ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಚಿಕಿತ್ಸಾ ವೆಚ್ಚ ಮರುಪಾವತಿ, ಮಕ್ಕಳ ಮದುವೆಗೆ ಸಹಾಯ ಧನ ಯೋಜನೆಗಳನ್ನುರೂಪಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ, ಮನೆ ಕೆಲಸಗಾರರ ಸಂಘದ ಅನಸೂಯ, ಟೈಲರ್ಗಳ ಸಂಘದ ಮಂಜುಳ, ಆಟೊ ಚಾಲಕರ ಸಂಘ ಸಿದ್ದರಾಜು, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಾಜಶೇಖರ್, ಕಟ್ಟಡ ಕಾರ್ಮಿಕರ ಸಂಘದ ಕಲೀಲ್ ಭಾಗವಹಿಸಿದ್ದರು.
ಮನವಿ ಸ್ವಿಕರಿಸಿದ ಕಾರ್ಮಿಕ ಅಧಿಕಾರಿ ರಮೇಶ್, ‘ಎಲ್ಲಾ ಅರ್ಹ ಅರ್ಜಿದಾರರಿಗೆ ₹2 ಸಾವಿರ ಬರಲಿದೆ. ಅಸಂಘಟಿತರ ಕಲ್ಯಾಣ ಯೋಜನೆ ಬಗ್ಗೆ ಸರ್ಕಾರ ಗಮನ ಹರಿಸಲಿದೆ’ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.