ADVERTISEMENT

ಮಧುಗಿರಿ: ದಾಖಲೆ ತಿದ್ದುಪಡಿ ಸಾಬೀತು ಶಿಕ್ಷಕನಿಗೆ ಕಡ್ಡಾಯ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 22:35 IST
Last Updated 23 ಸೆಪ್ಟೆಂಬರ್ 2021, 22:35 IST

ಮಧುಗಿರಿ: ಶಿಕ್ಷಕರೊಬ್ಬರು ಕಂದಾಯ ಇಲಾಖೆಯ ದಾಖಲೆಯನ್ನು ತಿದ್ದಿರುವ ಆರೋಪ ಸಾಬೀತಾಗಿದ್ದು, ಲೋಕಾಯುಕ್ತರು ನೀಡಿದ ದೂರಿನ ಮೇರೆಗೆ ಆ ಶಿಕ್ಷಕರಿಗೆ ಕಡ್ಡಾಯ ನಿವೃತ್ತಿ ನೀಡಿ ಅದೇಶಿಸಲಾಗಿದೆ.

ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಗೊಲ್ಲರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಕೆಂಪಯ್ಯ ಅವರನ್ನು ಬುಧವಾರ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಡ್ಡಾಯ ನಿವೃತ್ತಿಗೊಳಿಸಿ ಶಾಲೆಯಿಂದ ಬಿಡುಗಡೆಮಾಡಲಾಯಿತು.

ಶಿಕ್ಷಕ ಕೆ.ಕೆಂಪಯ್ಯ ನೇರಳೆಕೆರೆ ಗ್ರಾಮದ ಸರ್ವೆ ನಂಬರ್ 88/3ರ ಜಮೀನಿಗೆ ಸಂಬಂಧಿಸಿದ ಎಂ.ಆರ್. ರಿಜಿಸ್ಟರ್‌ನಲ್ಲಿ ಬಾದಯ್ಯ ಬಿನ್ಅವನಪ್ಪ ಎಂದು ಇರುವುದನ್ನು ಬಾದಯ್ಯ ಬಿನ್ ಮಾಸಣ್ಣ ಎಂದು ತಿದ್ದಿದ್ದಾರೆ. ಈ ಸಂಬಂಧ ಗೊಲ್ಲರಹಟ್ಟಿಯ ಈರಣ್ಣ ಬಿನ್ ಅವನಪ್ಪ ಅವರು ತಹಶೀಲ್ದಾರ್‌ ಮತ್ತು ಪೋಲಿಸರಿಗೆ ದೂರು ಸಲ್ಲಿಸಿದ್ದರು. ಆದರೆ ಕೆಂಪಯ್ಯ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ಲೋಕಾಯುಕ್ತ, ಇಲಾಖೆಗೆ ದೂರುನೀಡಿದ್ದರು.

ADVERTISEMENT

ಘಟನೆಯ ವಿವರ: 2003ರ ಏಪ್ರಿಲ್ 22ರಂದು ಕೆಂಪಯ್ಯ ತಾಲ್ಲೂಕು ಕಚೇರಿಯ ದಾಖಲೆ ವಿಭಾಗದ ಎಫ್‌ಡಿಸಿ ಬಳಿ ತೆರಳಿ ಸರ್ವೆ ನಂಬರ್‌ 88/3 ರಿಜಿಸ್ಟರ್ ಕೇಳಿ ಪಡೆದಿದ್ದಾರೆ. ಎಫ್‌ಡಿಸಿ ಅವರು ಬೇರೆ ಕೆಲಸದಲ್ಲಿ ನಿರತರಾಗಿದ್ದಾಗ ಎಂ.ಆರ್ ರಿಜಿಸ್ಟರ್‌ನಲ್ಲಿ ಹೆಸರನ್ನು ತಿದ್ದಿದ್ದರು. ಆರೋಪ ಸಾಬೀತಾದ ಕಾರಣ ಶಿಕ್ಷಣ ಇಲಾಖೆ (ಪ್ರಾಥಮಿಕ) ಅಧೀನ ಕಾರ್ಯದರ್ಶಿ ಎಚ್.ಎಸ್. ಶಿವಕುಮಾರ್ ಅವರು ಕಡ್ಡಾಯ ನಿವೃತ್ತಿಗೆ ಆದೇಶಿಸಿದ್ದಾರೆ. ಈ ಆದೇಶದನ್ವಯ ಮಧುಗಿರಿ ಬಿಇಒ ಶಾಲೆಗೆ ತೆರಳಿ ಶಿಕ್ಷಕನನ್ನು ಬುಧವಾರ ಶಾಲೆಯಿಂದ ಬಿಡುಗಡೆಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.