ತುಮಕೂರು: ನಗರದ ಸಿದ್ಧಿ ವಿನಾಯಕ ಸೇವಾ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನ ಮಹೋತ್ಸವ ಬುಧವಾರ ಯಾವುದೇ ಅದ್ದೂರಿ ಕಾರ್ಯಕ್ರಮಗಳಿಲ್ಲದೆ ಸರಳವಾಗಿ ನೆರವೇರಿತು.
ಮಂಡಳಿ ವತಿಯಿಂದ ಪ್ರತಿ ವರ್ಷವೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಒಂದು ತಿಂಗಳಿಗೂ ಹೆಚ್ಚು ಸಮಯ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತಿತ್ತು. ಕೊನೆಯ ದಿನ ನಗರದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಗುತಿತ್ತು. ಈ ಬಾರಿ ಕೋವಿಡ್ನಿಂದಾಗಿ ಸರಳ ಆಚರಣೆ ಹಾಗೂ ಐದು ದಿನಗಳಿಗೆ ಸೀಮಿತವಾಗಿ ಪ್ರತಿಷ್ಠಾಪಿಸಿ ಪೂಜಿಸಲು ಅವಕಾಶ ನೀಡಲಾಗಿತ್ತು. ಹಾಗಾಗಿ ಐದನೇ ದಿನ ವಿಸರ್ಜನ ಕಾರ್ಯ ನೆರವೇರಿತು.
ವಿನಾಯಕ ನಗರದ ಸಿದ್ಧಿ ವಿನಾಯಕ ಸೇವಾ ಮಂಡಳಿ ಆವರಣದಲ್ಲಿ ಗಣೇಶ ಮೂರ್ತಿಯ ವಿಸರ್ಜನ ಕಾರ್ಯಕ್ಕೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು. ‘ಸಿದ್ಧಿವಿನಾಯಕ ಸೇವಾ ಮಂಡಳಿಯ 46ನೇ ವರ್ಷದ ಗಣೇಶೋತ್ಸವ ನೆರವೇರಿದೆ. ಪ್ರತಿ ವರ್ಷ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯ ಆರ್ಭಟದಿಂದಾಗಿ ಬಹಳ ಸರಳವಾಗಿ ನಡೆಸಲಾಗುತ್ತಿದೆ’ ಎಂದು ಸ್ವಾಮೀಜಿ ಹೇಳಿದರು.
ಒಂದು ತಿಂಗಳ ಕಾಲ ವಿವಿಧ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ನಗರದಲ್ಲಿ ಒಂದು ರೀತಿಯ ಹಬ್ಬದ ವಾತಾವರಣವೇ ನಿರ್ಮಾಣವಾಗುತ್ತಿತ್ತು. ಮೂರ್ತಿ ವಿಸರ್ಜನೆ ಮಾಡುವ ಕೊನೆ ದಿನವೂ ಸಹ ಅಷ್ಟೇ ವೈಭವಯುತವಾಗಿ ಕಾರ್ಯಕ್ರಮಗಳು ಜರುಗುತ್ತಿದ್ದವು ಎಂದು ನೆನಪಿಸಿಕೊಂಡರು.
ಹೂವುಗಳಿಂದ ಅಲಂಕೃತಗೊಳಿಸಿದ್ದ ಟ್ರ್ಯಾಕ್ಟರ್ನಲ್ಲಿ ಗಣೇಶ ಮೂರ್ತಿ
ಯನ್ನು ಕೂರಿಸಿ, ಬಿ.ಎಚ್.ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ವಿದ್ಯಾನಗರದ ನೀರಿನ ತೊಟ್ಟಿಯಲ್ಲಿ ವಿಸರ್ಜಿಸಲಾಯಿತು.
ಸಂಸದ ಜಿ.ಎಸ್.ಬಸವರಾಜು, ಬಿಜೆಪಿ ಮುಖಂಡ ಸೊಗಡು ಶಿವಣ್ಣ, ಸಿದ್ಧಿ ವಿನಾಯಕ ಮಂಡಳಿ ಅಧ್ಯಕ್ಷ ಜಿ.ಎಚ್.ಪರಮಶಿವಯ್ಯ, ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ರಾಘವೇಂದ್ರರಾವ್, ಸಹಕಾರ್ಯದರ್ಶಿ ಜಗಜ್ಯೋತಿ ಸಿದ್ಧರಾಮಯ್ಯ, ಖಜಾಂಚಿ ಪ್ರಭು, ನಿರ್ದೇಶಕರಾದ ನಿಂಗಪ್ಪ, ಮಹಾದೇವಪ್ಪ, ಪ್ರಸನ್ನಕುಮಾರ್, ಸಿದ್ಧರಾಜು, ನರಸಿಂಹಮೂರ್ತಿ, ನಾಗರಾಜು, ನಟರಾಜು, ಮಹೇಶ್, ವಿರೂಪಾಕ್ಷ, ವೆಂಕಟೇಶ್, ಹೇಮರಾಜು ಸಿಂಚ, ವಿಜಯಕುಮಾರ್, ವೆಂಕಟೇಶಬಾಬು, ಪದ್ಮರಾಜು, ಉಮಾಶಂಕರ್, ರಮೇಶ್ಬಾಬು, ಅನುಸೂಯ, ರೇಣುಕಾಪರಮೇಶ್, ಇಂದ್ರಾಣಿ ಮತ್ತಿತರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.