ADVERTISEMENT

ಹೆದ್ದಾರಿ ದುರವಸ್ಥೆ, ವಿಳಂಬ ಕಾಮಗಾರಿ: ಪ್ರತಿಭಟನೆ

ಭೂ ಸಂತ್ರಸ್ತರಿಗೆ ಶೀಘ್ರ ಪರಿಹಾರ ವಿತರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 14:57 IST
Last Updated 19 ಸೆಪ್ಟೆಂಬರ್ 2021, 14:57 IST
169 ಎ ರಾಷ್ಟ್ರೀಯ ಹೆದ್ದಾರಿ ದುರವಸ್ಥೆ, ಕಾಮಗಾರಿ ವಿಳಂಬ ಹಾಗೂ ಭೂಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ವಿರೋಧಿಸಿ ಭಾನುವಾರ ಕಾಂಗ್ರೆಸ್‌ ಕಾರ್ಯಕರ್ತರು ಪರ್ಕಳದ ಬಾಬುರಾಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.
169 ಎ ರಾಷ್ಟ್ರೀಯ ಹೆದ್ದಾರಿ ದುರವಸ್ಥೆ, ಕಾಮಗಾರಿ ವಿಳಂಬ ಹಾಗೂ ಭೂಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ವಿರೋಧಿಸಿ ಭಾನುವಾರ ಕಾಂಗ್ರೆಸ್‌ ಕಾರ್ಯಕರ್ತರು ಪರ್ಕಳದ ಬಾಬುರಾಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.   

ಉಡುಪಿ: 169 ‘ಎ’ ರಾಷ್ಟ್ರೀಯ ಹೆದ್ದಾರಿ ದುರವಸ್ಥೆ, ಕಾಮಗಾರಿ ವಿಳಂಬ ಹಾಗೂ ಭೂಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ವಿರೋಧಿಸಿ ಭಾನುವಾರ ಕಾಂಗ್ರೆಸ್‌ ಪರ್ಕಳದ ಬಾಬುರಾಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿತು.

ನಗರ ಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಮಾತನಾಡಿ, ಪರ್ಕಳದ ಮತದಾರರು ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಆದರೆ, ಬಿಜೆಪಿ ಮಾತ್ರ ಅಭಿವೃದ್ಧಿ ವಿಚಾರದಲ್ಲಿ ಪರ್ಕಳದ ಜನರನ್ನು ಮರೆತಿದೆ. ತಾರತಮ್ಯ ಮಾಡಿದರೆ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪರ್ಕಳ ಹೆದ್ದಾರಿ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದೆ. ಜನರು ರಸ್ತೆಯಲ್ಲಿ ನಡೆದು ಹೋಗಲೂ ಕಷ್ಟ ಪಡುವಂತಹ ಪರಿಸ್ಥಿತಿ ಇದೆ. ಇದಕ್ಕೆ ಸ್ಥಳೀಯ ಶಾಸಕರು ನೇರ ಹೊಣೆ. ಕೂಡಲೇ ಜನರು ಹಾಗೂ ವಾಹನ ಸವಾರರು ಸರಾಗವಾಗಿ ಸಂಚರಿಸಲು ಅನುಕೂಲವಾಗುವಂತಹ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಮತದಾರರು ಸರ್ಕಾರವನ್ನು ನಂಬಿ ಸ್ವಂತದ ಜಾಗವನ್ನು ರಸ್ತೆ ನಿರ್ಮಾಣಕ್ಕೆ ಬಿಟ್ಟುಕೊಟ್ಟಿದ್ದಾರೆ. ಭೂಮಿ ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಸಲ್ಲದು. ನಿರ್ಲಕ್ಷ್ಯ ಮಾಡಿದರೆ ಅಧಿಕಾರ ನೀಡಿದ ಜನರೇ ಅಧಿಕಾರದಿಂದ ಕೆಳಗಿಳಿಸುತ್ತಾರೆ. ಸರ್ಕಾರ ಜನಪರವಾಗಿ ಕೆಲಸ ಮಾಡಬೇಕೇ ಹೊರತು ಜನವಿರೋಧಿ ಕೆಲಸ ಮಾಡಬಾರದು. ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಬಾರದು ಎಂದರು.

ಈಶ್ವರ ನಗರದಿಂದ ಪರ್ಕಳದವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಹಿಂದೆ ಈ ಸಂಬಂಧ ಪ್ರತಿಭಟನೆ ಮಾಡಿದಾಗ ಸರ್ಕಾರದ ಬಳಿಕ ಸಾಕಷ್ಟು ಅನುದಾನವಿದ್ದು, ಸಂತ್ರಸ್ತರಿಗೆ ಮೋಸ ಮಾಡುವುದಿಲ್ಲ ಎಂಬ ಭರವಸೆ ನೀಡಲಾಗಿತ್ತು. ಈಗ ಮೌನವಾಗಿರುವುದೇಕೆ, ರಸ್ತೆ ಕಾಮಗಾರಿ ಪೂರ್ಣಗೊಳಿಸಿಲ್ಲದಿರುವುದು ಏಕೆ ಎಂದು ಪ್ರಶ್ನಿಸಿದರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಅಮೃತ್‌ ಶೆಣೈ, ಸುಕೇಶ್ ಕುಂದರ್ ಹೆರ್ಗ, ಮೋಹನ್ ದಾಸ್ ನಾಯಕ್ ಪರ್ಕಳ, ಗಣೇಶ್ ರಾಜ್ ಸರಳೇಬೆಟ್ಟು, ಗಣೇಶ್ ನೆರ್ಗಿ, ಸುಧಾಕರ್ ಪೂಜಾರಿ, ಸದಾನಂದ ಪೂಜಾರಿ, ಸತೀಶ್ ಶೆಟ್ಟಿ ಕೆಳಪರ್ಕಳ, ಅಶೋಕ್ ಸಾಲಿಯಾನ್ ಹೆರ್ಗ, ಗಣೇಶ್ ಮಾರುತಿ ನಗರ, ನವೀನ್ ಪೂಜಾರಿ ಶೆಟ್ಟಿ ಬೆಟ್ಟು, ದಿನೇಶ್ ಪೂಜಾರಿ ಮದಗ, ತುಳಜಾ ಉಪೇಂದ್ರ ನಾಯ್ಕ್, ಶಂಭು ಶೆಟ್ಟಿ ಮತ್ತು, ಗೋಪಾಲ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.